
ಚಾಮರಾಜನಗರ (ಮೇ.24): ಪೋಷಕರ ಮುಂದೆಯೇ ಬಾಲಕನನ್ನ ಎಳೆದೊಯ್ದು ಕೊಂದಿದ್ದ ಚಿರತೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಇಂಡಿಗನತ್ತ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕೊನೆಗೂ ಬಲೆಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿದಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೆದುರೇ ಚಿರತೆ ಎಳೆದೊಯ್ದು ಕೊಂದಿತ್ತು.ನಾಗಮಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಘಟನೆ ಬಳಿಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಭಾರೀ ಕಾರ್ಯಾಚರಣೆ ಆರಂಭಿಸಿತ್ತು.
ಚಿರತೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಕಳೆದ 15 ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಆರಂಭದಲ್ಲಿ ಕ್ಯಾಮೆರಾ ಟ್ರ್ಯಾಪ್ಗೆ ಚಿರತೆ ಸೆರೆಯಾಗಿದ್ದರೂ, ಬಳಿಕ ಅದು ಬೋನಿಗೆ ಬೀಳದೆ ಯಶಸ್ವಿಯಾಗಿ ತಪ್ಪಿಸಿಕೊಂಡಿತ್ತು. ಆದರೆ. ಇದೀಗಾ ರಾತ್ರೋರಾತ್ರಿ ಚಿರತೆ ಬೋನಿಗೆ ಬಿದ್ದಿರುವುದು ಸಿಬ್ಬಂದಿಗೆ ದೊಡ್ಡ ಯಶಸ್ಸು ಸಿಕ್ಕಂತಾಗಿದೆ.
ಅದೇ ಚಿರತೆಯೋ ? ಬೇರೊಂದೋ ಸ್ಥಳಿಯರಿಗೆ ಅನುಮಾನ
ಬಾಲಕನ ಮೇಲೆ ದಾಳಿ ನಡೆಸಿದ್ದು ಇದೇ ಚಿರತೆಯೇ? ಬೇರೊಂದೋ? ಎಂಬ ಅನುಮಾನ ಸ್ಥಳೀಯರಲ್ಲಿ ಇನ್ನೂ ಹಾಗೆ ಉಳಿದಿದೆ. ಈ ಚಿರತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೇಕೆಗಳ ಮೇಲೂ ದಾಳಿ ನಡೆಸಿತ್ತು ಎಂಬ ಮಾಹಿತಿ ಇದೆ. ಹೀಗಾಗಿ ಇದು ಅದೇ ನರಭಕ್ಷಕ ಚಿರತೆನನಾ ಅಥವಾ ಬೇರೆಯದೆ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
ರಕ್ತದ ಮಾದರಿ ಪರೀಕ್ಷೆಗೆ ಅಧಿಕಾರಿಗಳ ನಿರ್ಧಾರ
ಬಾಲಕನನ್ನು ಕೊಂದ ಚಿರತೆ ಇದೇಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ವರದಿ ಬಂದ ಬಳಿಕವೇ ಅಧಿಕೃತವಾಗಿ ದೃಢಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.