
ಚಾಮರಾಜನಗರ: ಜಿಲ್ಲೆಯಲ್ಲಿ ಮನಕಲಕುವ ಘಟನೆ ಸಂಭವಿಸಿದ್ದು, ಮಲೆ ಮಹದೇಶ್ವರ ಬೆಟ್ಟದ ಸಮೀಪ ಪಾದಯಾತ್ರೆ ಹೋಗುತ್ತಿದ್ದ ಬಾಲಕನನ್ನು ಚಿರತೆ ಎಳೆದೊಯ್ದು ಕೊಂದಿರುವ ದುರ್ಘಟನೆ ನಡೆದಿದೆ. ಬೆಂಗಳೂರಿನ ಲಗ್ಗೆರೆ ಮೂಲದ ಬಾಲಕ ಹರ್ಷಿತ್ ಎಂಬ ಬಾಲಕ ತನ್ನ ಕುಟುಂಬದೊಂದಿಗೆ ಮಹದೇಶ್ವರ ಬೆಟ್ಟದಿಂದ ನಾಗಮಲೆಯತ್ತ ಪಾದಯಾತ್ರೆ ನಡೆಸುತ್ತಿದ್ದನು. ಕುಟುಂಬದ ಸುಮಾರು 10 ಮಂದಿ ಒಟ್ಟಾಗಿ ತೆರಳುತ್ತಿದ್ದ ವೇಳೆ, ನಾಗಮಲೆ ಮಾರ್ಗದ ಇಂಡಿಗನತ್ತ ಸಮೀಪ ಚಿರತೆ ಬಾಲಕನನ್ನು ಕಚ್ಚಿ ಎಳೆದೊಯ್ದಿದಿದೆ.
ಪಾದಯಾತ್ರೆಯ ಮಧ್ಯದಲ್ಲೇ ಹಠಾತ್ವಾಗಿ ದಾಳಿ ನಡೆಸಿದ ಚಿರತೆ, ಬಾಲಕನನ್ನು ಕುಟುಂಬಸ್ಥರ ಕಣ್ಣೆದುರೇ ಎಳೆದೊಯ್ದಿದೆ. ಈ ದೃಶ್ಯ ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದು, ಕಿರುಚಾಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡರು.
ಸುದೀರ್ಘ ಶೋಧ ಕಾರ್ಯಾಚರಣೆಯ ಬಳಿಕ, ಬಾಲಕನ ಶವ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ನಾಗಮಲೆ ಮಾರ್ಗವು Male Mahadeshwara Hills ಭಾಗವಾಗಿದ್ದು, ಮಹದೇಶ್ವರನ 77 ಮಲೆಗಳಲ್ಲಿ ಒಂದಾಗಿದೆ. ಈ ಪ್ರದೇಶವು ದಟ್ಟ ಅರಣ್ಯದಿಂದ ಕೂಡಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಾಮಾನ್ಯವಾಗಿದೆ. ಈ ಮಾರ್ಗದಲ್ಲಿ ಈ ಹಿಂದೆ ಕೂಡ ಇಂತಹ ದುರ್ಘಟನೆಗಳು ನಡೆದಿದ್ದು, ಪಾದಯಾತ್ರೆಗೆ ತೆರಳುವ ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಕೆಲ ತಿಂಗಳ ಹಿಂದೆಯೂ ಇದೇ ಭಾಗದಲ್ಲಿ ಪಾದಯಾತ್ರೆ ವೇಳೆ ಚಿರತೆ ದಾಳಿಯಿಂದ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಾಯವಾಗಿತ್ತು.
ಇಂತಹ ಘಟನೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮಾರ್ಗಗಳಲ್ಲಿ ಭಕ್ತರ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿವೆ. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಕಾಡುಪ್ರಾಣಿಗಳ ಚಲನವಲನ ಹೆಚ್ಚಿರುವುದರಿಂದ, ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.