Tumakur : ಜುಂಜಪ್ಪನಹಟ್ಟಿಯಲ್ಲಿ ಅರಿವು ಮೂಡಿಸಿದ ನ್ಯಾಯಾಧೀಶೆ

Published : Oct 04, 2023, 07:10 AM IST
 Tumakur :  ಜುಂಜಪ್ಪನಹಟ್ಟಿಯಲ್ಲಿ ಅರಿವು ಮೂಡಿಸಿದ ನ್ಯಾಯಾಧೀಶೆ

ಸಾರಾಂಶ

ಗ್ರಾಮೀಣ ಭಾಗದ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರನ್ನು ಹಾಗೂ ಬಾಣಂತಿಯರನ್ನು ಊರಿನ ಹೊರಗೆ ಇಡುವ ಪದ್ಧತಿಯನ್ನು ಹೋಗಲಾಡಿಸುವಲ್ಲಿ ನ್ಯಾ. ಉಂಡಿ ಮಂಜುಳ ಶಿವಪ್ಪನವರು ತಾಲೂಕಿನ ಅನೇಕ ಗೊಲ್ಲರಹಟ್ಟಿಗೆ ನಿರಂತರ ಭೇಟಿ ನೀಡುತ್ತ ಅರಿವು ಮೂಡಿಸುತ್ತಿದ್ದಾರೆ. ಜುಂಜಪ್ಪನಹಟ್ಟಿಗೆ ಭೇಟಿ ನೀಡಿ ಗ್ರಾಮದ ಕೃಷ್ಣ ಕುಟೀರಗಳಿಗೆ ಬೀಗ ಹಾಕಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಗುಬ್ಬಿ: ಗ್ರಾಮೀಣ ಭಾಗದ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರನ್ನು ಹಾಗೂ ಬಾಣಂತಿಯರನ್ನು ಊರಿನ ಹೊರಗೆ ಇಡುವ ಪದ್ಧತಿಯನ್ನು ಹೋಗಲಾಡಿಸುವಲ್ಲಿ ನ್ಯಾ. ಉಂಡಿ ಮಂಜುಳ ಶಿವಪ್ಪನವರು ತಾಲೂಕಿನ ಅನೇಕ ಗೊಲ್ಲರಹಟ್ಟಿಗೆ ನಿರಂತರ ಭೇಟಿ ನೀಡುತ್ತ ಅರಿವು ಮೂಡಿಸುತ್ತಿದ್ದಾರೆ. ಜುಂಜಪ್ಪನಹಟ್ಟಿಗೆ ಭೇಟಿ ನೀಡಿ ಗ್ರಾಮದ ಕೃಷ್ಣ ಕುಟೀರಗಳಿಗೆ ಬೀಗ ಹಾಕಿಸಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.

ಆಧುನಿಕ ಕಾಲದಲ್ಲಿಯೂ ಗ್ರಾಮೀಣ ಭಾಗದ ಗೊಲ್ಲ ಸಮುದಾಯದವರು ಮಹಿಳೆಯರನ್ನು ಹಾಗೂ ಬಾಣಂತಿಯರನ್ನು ಊರಿನ ಹೊರಗಿನ ಗುಡಿಸಲು ಹಾಗೂ ಕೃಷ್ಣ ಕುಟೀರಗಳಲ್ಲಿ ಇಡುವುದು ಅಕ್ಷಮ್ಯ. ಮಹಿಳೆಯರಿಗೆ ಗೌರವ ಕೊಡುವ ಸಮಾಜದಲ್ಲಿ ಈ ರೀತಿ ಅಪಮಾನಿಸುವುದು ತರವಲ್ಲ ಎಂದರು. ಈಗಾಗಲೇ ತಾಲೂಕಿನ ಅನೇಕ ಹಟ್ಟಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗಿದೆ. ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ನ್ಯಾಯಾಧೀಶರು ಜುಂಜಪ್ಪನ ಹಟ್ಟಿ ಹಾಗೂ ಸುತ್ತಮುತ್ತಲಿನ ಅನೇಕ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಕೃಷ್ಣಕುಟೀರಗಳಿಗೆ ಬೀಗ ಹಾಕಿಸಿದ್ದಾರೆ.

ವಕೀಲರ ಸಂಘದ ಅಧ್ಯಕ್ಷ ಬಿ ಕೆ ಚಿದಾನಂದ್, ಕಾರ್ಯದರ್ಶಿ ಸುರೇಶ್, ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಕೃಷ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಬಾಣಂತಿ, ಹಸುಗೂಸನ್ನು ಖುದ್ದು ಮಹಿಳಾ ನ್ಯಾಯಾಧೀಶರೊಬ್ಬರು ರಕ್ಷಿಸಿದ ಘಟನೆ ಬೆಳಕಿಗೆ

ತುಮಕೂರು (ಆ.25): ತುಮಕೂರಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಣಂತಿಯನ್ನು ಊರಾಚೆಗಿಡುವ ‘ಮೈಲಿಗೆ ಮೌಢ್ಯ’ಕ್ಕೆ ಹಸುಗೂಸೊಂದು ಮೃತಪಟ್ಟಘಟನೆ ಮಾಸುವ ಮುನ್ನವೇ ಅದೇ ರೀತಿ ಸೋಗೆ ಗುಡಿಸಲಿನಲ್ಲಿಟ್ಟಿದ್ದ ಬಾಣಂತಿ, ಹಸುಗೂಸನ್ನು ಖುದ್ದು ಮಹಿಳಾ ನ್ಯಾಯಾಧೀಶರೊಬ್ಬರು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ. ಗುಬ್ಬಿ ತಾಲೂಕು ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ 15 ದಿನದ ಹಸುಗೂಸನ್ನು ಮೈಲಿಗೆ ಮೌಢ್ಯದ ಕಾರಣಕ್ಕೆ ಮನೆಯಿಂದ ಎರಡು ಕಿ.ಮೀ. ದೂರದ ಸೋಗೆಯ ಗುಡಿಸಲಿನಲ್ಲಿ ಇರಿಸಲಾಗಿತ್ತು! 

ಈ ಸಂಬಂಧ ಖಚಿತ ಮಾಹಿತಿ ಮೇರೆಗೆ ಖುದ್ದು ಗುಬ್ಬಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ವಾಹನಗಳೇ ಓಡಾಡಲು ದುಸ್ತರವಾಗಿದ್ದ ಜಾಗಕ್ಕೆ 2 ಕಿ.ಮೀ. ನಡೆದೇ ಕ್ರಮಿಸಿದ ಅವರು ಅಲ್ಲಿನ ಪೂಜಾರಪ್ಪ ಹಾಗೂ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟು ಖುದ್ದು ಮಗುವನ್ನು ಎತ್ತಿಕೊಂಡು ಬಂದು ಹಟ್ಟಿಯಲ್ಲಿ ಬಿಟ್ಟು ಬಂದಿದ್ದಾರೆ. ಸಂಜೆ 4 ಗಂಟೆಗೆ ಗ್ರಾಮಕ್ಕೆ ತೆರಳಿದ ನ್ಯಾಯಾಧೀಶರು ಸುಮಾರು 4 ಗಂಟೆಗಳಿಗೂ ಹೆಚ್ಚು ಕಾಲ ಗ್ರಾಮದಲ್ಲಿ ಉಳಿದು ಮೈಲಿಗೆ ಮೌಢ್ಯದ ಬಗ್ಗೆ ತಿಳಿವಳಿಕೆ ಹೇಳಿದ್ದಾರೆ. ಈ ರೀತಿ ಮೌಢ್ಯ ಆಚರಿಸುವುದರಿಂದ ಯಾವ ದೇವರೂ ಕ್ಷಮಿಸುವುದಿಲ್ಲವೆಂದು ಹೇಳಿ ಮಗುವನ್ನು ಹಾಗೂ ಬಾಣಂತಿಯನ್ನು ಮನೆಗೆ ಕರೆ ತಂದು ಬಿಟ್ಟಿದ್ದಾರೆ.

ನಾವು ಬಿಜೆಪಿ ಬಿಡೋದಿಲ್ಲ: ಎಸ್‌ಟಿಎಸ್‌, ಹೆಬ್ಬಾರ್‌, ಬೈರತಿ

ಚಿರತೆ, ಸೇರಿ ಕಾಡುಪ್ರಾಣಿಗಳ ಸಂಚಾರವಿರುವ ಜಾಗದಲ್ಲಿ ನಿರ್ಮಿಸಲಾದ ಸೋಗೆಯ ಪುಟ್ಟಗುಡಿಸಲಲ್ಲಿ 15 ದಿನ ಮಗು ಮತ್ತು ಬಾಣಂತಿಯನ್ನು ಇರಿಸಲಾಗಿತ್ತು. ಗುಡಿಸಲಿನಿಂದ ಮಗುವನ್ನು ಖುದ್ದು ತಾವೇ ಹೊರ ತಂದು ಎತ್ತಿಕೊಂಡು ಮನೆಗೆ ಬಿಟ್ಟಿದ್ದಲ್ಲದೆ, ಸೋಗೆ ಗುಡಿಸಲನ್ನು ತೆರವುಗೊಳಿಸುವಂತೆ ಸೂಚಿಸಿದ್ದಾಗಿ ಉಂಡಿ ಮಂಜುಳಾ ಅವರು ತಿಳಿಸಿದ್ದಾರೆ. ಕಳೆದ ತಿಂಗಳು ತುಮಕೂರು ತಾಲೂಕಿನ ಮಲ್ಲೇನಹಳ್ಳಿಯ ಗೊಲ್ಲರಹಟ್ಟಿಯ ಹೊರಗಿನ ಗುಡಿಸಲಿನಲ್ಲಿಟ್ಟಿಬಾಣಂತಿಯ ಜತೆಗಿದ್ದ ಹಸುಗೂಸು ಶೀತಗಾಳಿಯಿಂದಾಗಿ ಮೃತಪಟ್ಟಿತ್ತು. 

ಕಾಂಗ್ರೆಸ್‌ಗೆ ಎಷ್ಟು ಜನರ ಬರ್ತಾರೆಂದು ಕಾಲವೇ ಹೇಳುತ್ತದೆ: ಡಿಕೆಶಿ

ಈ ಪ್ರಕರಣ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ರೀತಿಯ ಸಂಪ್ರದಾಯದ ಕುರಿತು ಖುದ್ದು ಅಧಿಕಾರಿಗಳೇ ಗೊಲ್ಲರಹಟ್ಟಿಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಇದರ ಬೆನ್ನಲ್ಲೇ ಸಂಪ್ರದಾಯ ಪಾಲಿಸಲು ಊರಹೊರಗಿನ ಗುಡಿಸಲಲ್ಲಿ ಹಸುಗೂಸಿನೊಂದಿಗೆ ಉಳಿದುಕೊಂಡಿದ್ದ ಬಾಣಂತಿ ಮತ್ತು ಮಗುವನ್ನು ಖುದ್ದು ನ್ಯಾಯಾಧೀಶರೇ ರಕ್ಷಿಸಿ ಜೀವ ಉಳಿಸಿದ್ದಾರೆ. ಈ ರೀತಿಯ ಘಟನೆ ಮತ್ತೆ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆಯನ್ನೂ ನೀಡಿದ್ದಾರೆ.

PREV
click me!

Recommended Stories

Lakkundi: ನಾಲ್ಕನೇ ದಿನದ ಉತ್ಖನನ ಕಾರ್ಯಕ್ಕೆ ಎದುರಾಯ್ತು ಮತ್ತೊಂದು ವಿಘ್ನ; ಆಯುಧ ಮಾದರಿಯ ಕಲ್ಲು ಪತ್ತೆ
ರಾಷ್ಟ್ರಧ್ವಜ ತಯಾರಿಸ್ತಿದ್ದ ಕೈಗಳಲ್ಲೀಗ ಕೆಲಸವಿಲ್ಲ!