ಶಿವಮೊಗ್ಗ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಖಂಡನೀಯ

By Web DeskFirst Published Jun 17, 2020, 9:19 AM IST
Highlights

ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ರಾಜ್ಯ ಸರ್ಕಾರ ಬಂಡವಾಳಶಾಹಿಗಳಿಗೆ ಅನುಕೂಲವಾಗುತ್ತದೆಯೇ ಹೊರತು, ಇದರಿಂದ ರೈತರಿಗೆ ಯಾವುದೆ ಪ್ರಯೋಜನ ಇಲ್ಲ. ರೈತರು ಈಗಿರುವ ಅಲ್ಪಸ್ವಲ್ಪ ತಮ್ಮ ಭೂಮಿಯನ್ನು ಮಾರಾಟ ಮಾಡಿಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ವಿಭಾಗ ಪ್ರತಿಭಟನೆ ನಡೆಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಶಿವಮೊಗ್ಗ(ಜೂ.17): ಭೂ ಸುಧಾರಣಾ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ವಿಭಾಗದಿಂದ ಪ್ರತಿಭಟನೆ ನಡೆಸಲಾಯಿತು.

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದು ಖಂಡನೀಯ. ಕೂಡಲೇ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕಾಯ್ದೆಗೆ ತಿದ್ದುಪಡಿ ತರುವುದರ ಮೂಲಕ ರಾಜ್ಯ ಸರ್ಕಾರ ಬಂಡವಾಳಶಾಹಿಗಳಿಗೆ ಅನುಕೂಲವಾಗುತ್ತದೆಯೇ ಹೊರತು, ಇದರಿಂದ ರೈತರಿಗೆ ಯಾವುದೆ ಪ್ರಯೋಜನ ಇಲ್ಲ. ರೈತರು ಈಗಿರುವ ಅಲ್ಪಸ್ವಲ್ಪ ತಮ್ಮ ಭೂಮಿಯನ್ನು ಮಾರಾಟ ಮಾಡಿಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಸಾಮಾಜಿಕ ಕಲ್ಪನೆಯಡಿ ಉಳುವವನಿಗೆ ಭೂಮಿ ಕೊಡುವುದು ಅಂದರೆ ಕೃಷಿಕ ಮಾತ್ರ ಭೂಮಿ ಕೊಳ್ಳಬಹುದು ಮತ್ತು ಕೃಷಿಯೇತರ ಆದಾಯ 2 ಲಕ್ಷಕ್ಕಿಂತ ಜಾಸ್ತಿ ಇರಬಾರದು ಎಂಬ ನಿಯಮ ರೂಪಿಸಲಾಗಿತ್ತು. ಬಳಿಕ ಕೃಷಿಯೇತರ ಆದಾಯ ಮಿತಿ 25 ಲಕ್ಷಕ್ಕೆ ಏರಿಸಲಾಯಿತು. ಆದರೀಗ ಉಳ್ಳವರು ಮಾರುಕಟ್ಟೆಯಲ್ಲಿ ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ನೋಂದಣಿ ಕಚೇರಿಯ ಬೆಲೆಯಲ್ಲಿ ನೋಂದಣಿ ಮಾಡಿಕೊಂಡು ತಮ್ಮ ಕಪ್ಪು ಹಣವನ್ನು ಹೂಡಿಕೆ ಮಾಡಲು ಬಳಸುತ್ತಾರೆ. ಒಟ್ಟಾರೆ ಇದು ಕಪ್ಪು ಹಣ ಚಲಾವಣೆ ಮಾಡಲು ಈ ಕಾಯ್ದೆ ಅನುಕೂಲ ಮಾಡಿಕೊಟ್ಟಿದೆ ಎಂದು ದೂರಿದರು.

ತಿದ್ದುಪಡಿ ಕಾಯ್ದೆ ಜಾರಿಯಾದರೆ ಕೃಷಿ ಭೂಮಿ ಮುಂದಿನ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟರ ಕೈಗೆ ಸಿಕ್ಕು, ಲೇಔಟ್‌, ಖಾಸಗಿ ಶಾಲೆಗಳು, ಆಸ್ಪತ್ರೆಗಳು, ಮೋಜು ಮಸ್ತಿಗಾಗಿ ರೆಸಾರ್ಟ್‌ಗಳಾಗಿ ಮಾರ್ಪಾಡಾಗುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉಳುಮೆ ಮಾಡುವ ಭೂಮಿ ನಾಶವಾಗಿ ಆಹಾರದ ಅಭಾವ ತಲೆದೋರುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಕೃಷಿ ಭೂಮಿ ಖರೀದಿ ಮೇಲಿನ ನಿರ್ಬಂಧ ಸಡಿಲ ?

ಈ ಜನ ವಿರೋಧಿ ಕಾಯ್ದೆ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ ಕಿಸಾನ್‌ ವಿಭಾಗದಿಂದ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ ಕಿಸಾನ್‌ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷ ಗಿರೀಶ್‌, ನಗರದ ಮಹದೇವಪ್ಪ, ಶಿವಕುಮಾರ್‌, ನಿರಂಜನ್‌, ಶಿವು, ಪ್ರಶಾಂತ, ವಿಜಯ್‌ ಕುಮಾರ್‌, ವಿಷ್ಣು, ಗೋಪಾಲ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಿದ್ದುಪಡಿ ಕಾಯ್ದೆ ಜಾರಿಯಾದರೆ ಕೃಷಿ ಭೂಮಿ ಮುಂದಿನ ದಿನಗಳಲ್ಲಿ ರಿಯಲ್‌ ಎಸ್ಟೇಟ್‌ ಏಜೆಂಟರ ಕೈಗೆ ಸಿಕ್ಕು, ಲೇಔಟ್‌, ಖಾಸಗಿ ಶಾಲೆಗಳು, ಆಸ್ಪತ್ರೆಗಳು, ಮೋಜು ಮಸ್ತಿಗಾಗಿ ರೆಸಾರ್ಟ್‌ಗಳಾಗಿ ಮಾರ್ಪಾಡಾಗುತ್ತದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉಳುಮೆ ಮಾಡುವ ಭೂಮಿ ನಾಶವಾಗಿ ಆಹಾರದ ಅಭಾವ ತಲೆದೋರುವ ಸಾಧ್ಯತೆ ಹೆಚ್ಚು. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು.

- ಗಿರೀಶ್‌, ಜಿಲ್ಲಾ ಕಾರ್ಯಾಧ್ಯಕ್ಷ,  ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ವಿಭಾಗ 
 

click me!