Lalbagh Flower Show: ಸಸ್ಯಕಾಶಿಯಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಬೆಂಗಳೂರಿನ ಇತಿಹಾಸ ಅನಾವರಣ

By Kannadaprabha NewsFirst Published Jan 20, 2023, 7:44 AM IST
Highlights

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ 11 ದಿನ ನಡೆಯುವ 213ನೇ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಜ.20ರಂದು ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. 

ಬೆಂಗಳೂರು (ಜ.20): ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ 11 ದಿನ ನಡೆಯುವ 213ನೇ ವಿಶೇಷ ಫಲಪುಷ್ಪ ಪ್ರದರ್ಶನಕ್ಕೆ ಜ.20ರಂದು ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಬೆಂಗಳೂರು ಇತಿಹಾಸ ಸಾರುವ ಫಲಪುಷ್ಪ ಪ್ರದರ್ಶನವನ್ನು ಗಾಜಿನ ಮನೆಯಲ್ಲಿ ನಿರ್ಮಿಸಲಾಗಿರುವ ಕೆಂಪೇಗೌಡ ಗಡಿ ಗೋಪುರ ಮತ್ತು ನಂದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿಯವರು ಉದ್ಘಾಟಿಸುವರು. ಆ ನಂತರ ಗಾಜಿನಮನೆ ಹಿಂಭಾಗದಲ್ಲಿ ರಚಿಸಲಾಗಿರುವ ಬೆಂಗಳೂರು ಇತಿಹಾಸದ ಪೆವಿಲಿಯನನ್ನು ನಗಾರಿ ಬಾರಿಸಿ ಉದ್ಘಾಟಿಸಲಿದ್ದಾರೆ.

ಅಲ್ಲದೇ ತೋಟಗಾರಿಕೆ ಇಲಾಖೆಯ ಲಾಲ್‌ಬಾಗ್‌, ದೊಡ್ಡಸಾಗೆರೆ ಬಟಾನಿಕಲ್‌ ಗಾರ್ಡನ್‌, ಲಿಂಗಾಂಬೂದಿ ಬಟಾನಿಕಲ್‌ ಗಾರ್ಡನ್‌, ಕನ್ನಮಂಗಲ ಬಟಾನಿಕಲ್‌ ಗಾರ್ಡನ್‌, ನಂದಿ ಗಿರಿಧಾಮ, ಕೆಮ್ಮಣ್ಣುಗುಂಡಿ ಮತ್ತು ಊಟಿ ಗಿರಿಧಾಮಗಳು, ಕಬ್ಬನ್‌ಪಾರ್ಕ್ ಕೊಪ್ಪಳದ ಪಂಪಾವನ ಹಾಗೂ ದಾವಣಗೆರೆ, ಮೈಸೂರಿನ ಗಾಜಿನಮನೆ ಮಾದರಿಗಳನ್ನು ವೀಕ್ಷಿಸಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ(ಉದ್ಯಾನ) ಜಗದೀಶ್‌ ಅವರು ಮಾಹಿತಿ ನೀಡಿದರು. ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ಶಾಸಕ ಉದಯ್‌ ಬಿ.ಗರುಡಾಚಾರ್‌, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಟಿ.ಎ.ಶರವಣ, ಅ.ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತರಿರುವರು.

Lalbagh Flower Show: ಜ.19ರಿಂದ ಲಾಲ್‌ಬಾಗ್‌ನಲ್ಲಿ ಅದ್ಧೂರಿ ಫಲಪುಷ್ಪ ಪ್ರದರ್ಶನ

ಆರೋಗ್ಯ ಸಿಬ್ಬಂದಿ ನೇಮಕ: ಉದ್ಯಾನದಲ್ಲಿ 37 ಕಡೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಸಲಾಗಿದೆ. ಅರೆ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ 5 ಆ್ಯಂಬುಲೆನ್ಸ್‌ ಇರಲಿವೆ. ಗಾಜಿನಮನೆ ಬಳಿ ಒಂದು ಅಗ್ನಿಶಾಮಕ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯಾನದಲ್ಲಿ 150 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅಪಾಯಕಾರಿ ಮರಗಳ ಕೊಂಬೆ ತೆರವುಗೊಳಿಸಲಾಗಿದೆ. ಜೇನು ಕೃಷಿ ಸಹಾಯಕ, ಹಾವು ಹಿಡಿಯುವವರು, ಈಜು ಪರಿಣಿತರ ನಿಯೋಜನೆ ಮಾಡಲಾಗಿದೆ.

ಪ್ಲಾಸ್ಟಿಕ್‌ ನಿಷೇಧ: ಉದ್ಯಾನದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ನಿಷೇಧ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಪ್ಲಾಸ್ಟಿಕ್‌ ವಸ್ತುಗಳನ್ನು ಉದ್ಯಾನದ ಒಳಗೆ ತರಬಾರದು. ಇಡೀ ಉದ್ಯಾನದಲ್ಲಿ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ತೋಟಗಾರಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವಾಹನ ನಿಲುಗಡೆ ವ್ಯವಸ್ಥೆ: ಅಲ್‌ ಅಮಿನ್‌ ಕಾಲೇಜು ಮೈದಾನ, ಶಾಂತಿನಗರ ಬಸ್‌ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ, ಜೆ.ಸಿ.ರಸ್ತೆಯ ಮಯೂರ ರೆಸ್ಟೋರೆಂಟ್‌ ಬಳಿಯ ಪಾಲಿಕೆ ಕಟ್ಟಡದ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಶಾಲಾ ವಾಹನ, ಅಂಗವಿಕಲರ ವಾಹನಗಳ ನಿಲುಗಡೆಗೆ ಎಂ.ಎಚ್‌.ಮರಿಗೌಡ ಸ್ಮಾರಕ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಬೊಮ್ಮಾಯಿ ಆಡಳಿತಕ್ಕೆ ಮೋದಿ ಶಹಬ್ಬಾಸ್‌ಗಿರಿ: ಡಬಲ್‌ ಎಂಜಿನ್‌ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ

ಟಿಕೆಟ್‌ ದರ 75: ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಕಳೆದ ವರ್ಷದಂತೆ ಈ ಬಾರಿಯೂ ಟಿಕೆಟ್‌ ದರವನ್ನು ತಲಾ 70 ಮತ್ತು ರಜಾ ದಿನಗಳಲ್ಲಿ ತಲಾ 75 ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ತಲಾ 30 ಇದೆ. ಶಾಲಾ ಸಮವಸ್ತ್ರ ಮತ್ತು ಗುರುತಿನ ಚೀಟಿ ಧರಿಸಿ ಬರುವ 1ರಿಂದ 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶನದ ಪೂರ್ಣ ಅವಧಿಯಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಅದಕ್ಕಾಗಿ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ(ಐಡಿ ಕಾರ್ಡ್‌), ಶಾಲಾ ಆಡಳಿತ ಮಂಡಳಿ ಅನುಮತಿ ಪತ್ರದೊಂದಿಗೆ ಆಗಮಿಸಬೇಕಿದೆ.

click me!