ಚಿಕ್ಕಬಳ್ಳಾಪುರ: ಸುರಕ್ಷತಾ ಪರಿಕರ ಕೊರತೆ, ಬರಿಗೈಯಲ್ಲೇ ಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು..!

By Kannadaprabha NewsFirst Published Mar 15, 2021, 3:59 PM IST
Highlights

ಜಾಲತಾಣದಲ್ಲಿ ಪೋಟೋಗಳು ವೈರಲ್‌| ಗ್ರಾಪಂ ಅಧಿಕಾರಿಗಳ ಧೋರಣೆ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ| ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ| ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ| 

ಕತಗಾಲ ನಾಗರಾಜ

ಚಿಕ್ಕಬಳ್ಳಾಪುರ(ಮಾ.15): ಜಿಲ್ಲೆಯ ಗ್ರಾಪಂಗಳ ವ್ಯಾಪ್ತಿಯಲ್ಲಿ ಚರಂಡಿಗಳ ಸ್ವಚ್ಛಗೊಳಿಸುವ ವೇಳೆ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಕವಚಗಳನ್ನು ನೀಡದೇ ಗ್ರಾಪಂ ಅಧಿಕಾರಿಗಳು ಬರಿಗಾಲು ಮತ್ತು ಬರಿಗೈಯಲ್ಲಿ ಚರಂಡಿಗೆ ಇಳಿಸಿ ಅಮಾನವೀಯವಾಗಿ ಚರಂಡಿಗಳ ಸ್ವಚ್ಛತೆ ಮಾಡಿಸುತ್ತಿದ್ದಾರೆಂಬ ಗಂಭೀರ ಆರೋಪ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಗರ, ಪಟ್ಟಣಗಳು ಬೆಳೆದಂತೆ ಜಿಲ್ಲೆಯ ಗ್ರಾಮೀಣ ಭಾಗದ ಗ್ರಾಪಂ ಕೇಂದ್ರ ಸ್ಥಾನ ಇರುವ ಗ್ರಾಮಗಳು ದೊಡ್ಡದಾಗಿ ಬೆಳೆದಿದ್ದು ಪೌರ ಕಾರ್ಮಿಕರಂತೆ ಗ್ರಾಮೀಣ ಭಾಗದಲ್ಲಿ ಚರಂಡಿಗಳ ಸ್ವಚ್ಛಗೊಳಿಸುವುದು ಅನಿವಾರ್ಯಯವಾಗಿದೆ. ಆದರೆ ಸ್ವಚ್ಛತೆಗೆ ಕಾರ್ಮಿಕರನ್ನು ಇಳಿಸುವ ಗ್ರಾಪಂ ಅಧಿಕಾರಿಗಳು ಅವರಿಗೆ ಸುರಕ್ಷಾ ಪರಿಕರಗಳ ಬಗ್ಗೆ ಗಮನ ನೀಡುತ್ತಿಲ್ಲ. ಇದು ಕಾನೂನಿಗೆ ವಿರುದ್ಧವಾಗಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯ

ಸಾಮಾನ್ಯವಾಗಿ ಪೌರ ಕಾರ್ಮಿಕರಿಗೆ ನಗರ, ಪಟ್ಟಣಗಳಲ್ಲಿ ಕೈ ಕಾಲುಗಳಿಗೆ ಸುರಕ್ಷಾ ಕವಚಗಳನ್ನು ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಚರಂಡಿಗೆ ಇಳಿಯುವ ಕೆಲಸ ಇಲ್ಲದೇ ಇದ್ದರೂ ಕಸ ವಿಲೇವಾರಿ ಮಾಡುವ ಪೌರ ಕಾರ್ಮಿಕರ ಕಾಲುಗಳಿಗೆ ಬೂಟು, ಕೈಗಳಿಗೆ ಕೈಗವಸು, ಮಾಸ್ಕ್‌ಗಳನ್ನು ನೀಡಲಾಗುತ್ತಿದೆ. ಆದರೆ ನಗರಕ್ಕಿಂತ ಭಿನ್ನವಾಗಿ ಅಂದರೆ ನೇರವಾಗಿ ಚರಂಡಿಗಳಿಗೆ ಇಳಿಸಿ ಗ್ರಾಮೀಣ ಭಾಗದಲ್ಲಿ ಸ್ವಚ್ಛಗೊಳಿಸುವ ಕಾರ್ಮಿಕರ ಆರೋಗ್ಯದ ಸುರಕ್ಷತೆ ಬಗ್ಗೆ ಗ್ರಾಪಂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ಡೀಸಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ : ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿ ಹಣಕ್ಕಾಗಿ ಬೇಡಿಕೆ

ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ಒಳಚರಂಡಿ ಒಳಗೆ ಅಥವಾ ತೆರೆದ ಚರಂಡಿಗಳ ಒಳಗೆ ಕಾರ್ಮಿಕರನ್ನು ಇಳಿಸಬಾರದೆಂಬ ನಿಯಮ ಇದ್ದರೂ ಈ ಬಗ್ಗೆ ಜಿಲ್ಲೆಯ ಗ್ರಾಪಂ ಅಧಿಕಾರಿಗಳು ಸರ್ಕಾರದ ನಿಯಮಾವಾಳಿಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಚರಂಡಿಗಳ ಸ್ವಚ್ಛತೆ ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

ಜಾಲತಾಣದಲ್ಲಿ ಪೋಟೋಗಳು ವೈರಲ್‌

ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಒಂದರಲ್ಲಿ ಕಾರ್ಮಿಕರು ಸುರಕ್ಷತಾ ಕವಚವಿಲ್ಲದೆ ಚರಂಡಿ ಕೆಲಸದಲ್ಲಿ ತೊಡಗಿರುವು ದೃಶ್ಯಗಳು ಸಾರ್ವಜನಿಕರು ಸೆರೆ ಹಿಡಿದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇವು ಗ್ರಾಪಂ ಅಧಿಕಾರಿಗಳ ಧೋರಣೆ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ಚರಂಡಿಗೆ ಇಳಿಸೋದು ಮೊದಲನೇ ತಪ್ಪು ಜೊತೆಗೆ ರಕ್ಷಣೆಗೆಂದು ಯಾವುದೇ ಪರಿಕರ ನೀಡಿಲ್ಲ. ಈಗ ಕರೋನಾ ವೈರಸ್‌ನಿಂದ ಎಲ್ಲರೂ ಆತಂಕದಲ್ಲಿದ್ದಾರೆ ಇಂತಹ ಸಂದರ್ಭದಲ್ಲೂ ಕಾರ್ಮಿಕರನ್ನು ಗ್ರಾಪಂ ಅಧಿಕಾರಿಗಳು ಯಾವುದೇ ಸುರಕ್ಷತಾ ಪರಿಕರಗಳನ್ನು ಕೊಡದೇ ಈ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಗ್ರಾಮಸ್ಥ ಮೌಲಾ ಅಲಿ, ಮುರಗಮಲ್ಲ ಹೇಳಿದ್ದಾರೆ. 
 

click me!