ಬಸ್‌ಗಳಿಗೆ ಪ್ರಯಾಣಿಕರ ಕೊರತೆ: ನಿಯಮ ಉಲ್ಲಂಘಿಸಿದ 15 ಬಸ್‌ಗೆ ದಂಡ

Kannadaprabha News   | Asianet News
Published : Jun 03, 2020, 08:15 AM IST
ಬಸ್‌ಗಳಿಗೆ ಪ್ರಯಾಣಿಕರ ಕೊರತೆ: ನಿಯಮ ಉಲ್ಲಂಘಿಸಿದ 15 ಬಸ್‌ಗೆ ದಂಡ

ಸಾರಾಂಶ

ಕೊರೋನಾ ಭೀತಿಯ ನಡುವೆಯೇ ದ.ಕ.ಜಿಲ್ಲೆಯಲ್ಲಿ ಬಸ್‌ಗಳ ಓಡಾಟ ಆರಂಭವಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿದೆ. ಕೊರೋನಾ ಭಯದಿಂದಾಗಿ ಇನ್ನೂ ಕೂಡ ಜನತೆ ಮನೆಯಿಂದ ಹೊರ ಹೋಗಲು ಹೆದರುತ್ತಿದ್ದಾರೆ. 15 ಬಸ್‌ಗಳ ಮೇಲೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಜೆಪ್ಪು ನೇತ್ರಾವತಿ ಸೇತುವೆ ಬಳಿ ಮತ್ತು ನಾಟೆಕಲ್‌ ಸಮೀಪ ದಂಡ ವಿಧಿಸಿದರು.

ಮಂಗಳೂರು(ಜೂ. 03): ಕೊರೋನಾ ಭೀತಿಯ ನಡುವೆಯೇ ದ.ಕ.ಜಿಲ್ಲೆಯಲ್ಲಿ ಬಸ್‌ಗಳ ಓಡಾಟ ಆರಂಭವಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿದೆ. ಕೊರೋನಾ ಭಯದಿಂದಾಗಿ ಇನ್ನೂ ಕೂಡ ಜನತೆ ಮನೆಯಿಂದ ಹೊರ ಹೋಗಲು ಹೆದರುತ್ತಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಕೊರೋನಾ ಸೋಂಕು ಬಲವಾಗಿಯೇ ಕಾಡುತ್ತಿದೆ. ಉಭಯ ಜಿಲ್ಲೆಗಳಲ್ಲಿ ದಿನೇ ದಿನೇ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಭಯಭೀತರಾಗಿರುವ ಜನತೆ ಓಡಾಟಕ್ಕೆ ಕಡಿವಾಣ ಹಾಕಿದ್ದಾರೆ. ತುರ್ತು ಕಾರ್ಯದ ನಿಮಿತ್ತ ತೆರಳುವವರಷ್ಟೇ ಓಡಾಡುವುದು ಕಂಡು ಬರುತ್ತಿದೆ. ಹೆಚ್ಚಿನ ಮಂದಿ ಸ್ವಂತ ಮತ್ತು ಖಾಸಗಿ ವಾಹನದಲ್ಲೇ ಸಂಚರಿಸುತ್ತಿದ್ದು, ಬೆರಳೆಣಿಕೆ ಮಂದಿಯಷ್ಟೇ ಬಸ್‌ಗಳಲ್ಲಿ ಓಡಾಟ ನಡೆಸುತ್ತಿದ್ದಾರೆ.

ಕ್ವಾರಂಟೈನ್‌ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!

ಕಳೆದ ಎರಡು ದಿನಗಳಲ್ಲಿ ಅತಿ ವಿರಳ ಸಂಖ್ಯೆಯಲ್ಲಿ ಸಿಟಿ ಬಸ್‌ಗಳು ಓಡಾಟ ನಡೆಸಿವೆ. 7 ನಮ್‌ರ್‍ ಬಸ್‌ಗಳು ಕಳೆದ ನಾಲ್ಕು ದಿನಗಳಿಂದ ನಿರಂತರ ಸೇವೆ ಒದಗಿಸುತ್ತಿದ್ದರೂ ಇದರಲ್ಲಿಯೂ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ಮಂಗಳೂರಿನಲ್ಲಿ 325 ಸಿಟಿ ಬಸ್‌ಗಳಿದ್ದು, ಸುಮಾರು 120 ಬಸ್‌ಗಳು ಸಂಚಾರ ನಡೆಸುತ್ತಿವೆ. ಬಸ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಬಳಕೆ ಕಡ್ಡಾಯಗೊಳಿಸಲಾಗಿದೆ. ಆದರೆ ಎಲ್ಲಾ ಬಸ್‌ಗಳೂ ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಜಿಲ್ಲೆಯಲ್ಲಿ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸುತ್ತಿಲ್ಲ. ಮಂಗಳೂರು ವಿಭಾಗ ಲಾಕ್‌ಡೌನ್‌ ನಾಲ್ಕನೇ ಹಂತದಲ್ಲಿ ಓಡಾಡುತ್ತಿದ್ದ ಬಸ್‌ಗಳಷ್ಟೇ ಈಗಲೂ ಸಂಚರಿಸುತ್ತಿವೆ.

ಕೋವಿಡ್‌-19ರ ಮುಂಜಾಗ್ರತಾ ಕ್ರಮದ ಆದೇಶವನ್ನು ಉಲ್ಲಂಘಿಸಿ ಹೆಚ್ಚಿನ ಪ್ರಯಾಣಿಕರನ್ನು ತುಂಬಿ ತಲಪಾಡಿ, ಕೊಣಾಜೆ, ಉಳ್ಳಾಲ ಕಡೆಗೆ ಚಲಿಸಿದ 15 ಬಸ್‌ಗಳ ಮೇಲೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಜೆಪ್ಪು ನೇತ್ರಾವತಿ ಸೇತುವೆ ಬಳಿ ಮತ್ತು ನಾಟೆಕಲ್‌ ಸಮೀಪ ದಂಡ ವಿಧಿಸಿದರು. ಅಂತರ ಕಾಯ್ದುಕೊಂಡು, 30-35 ಪ್ರಯಾಣಿಕರು ಮಾತ್ರ ಮಾಸ್ಕ್ ಧರಿಸಿ ಪ್ರಯಾಣಿಸಬೇಕು ಎನ್ನುವ ಆದೇಶದೊಂದಿಗೆ ಖಾಸಗಿ ಬಸ್‌ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು.

ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ನಿಯಮಿತ ಬಸ್‌ಗಳು ಮಾತ್ರ ರಸ್ತೆಗಿಳಿದರೂ ಸಂಜೆ ಮತ್ತು ಬೆಳಗ್ಗಿನ ಹೊತ್ತಿನಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು. ಬೆಳಗ್ಗಿನ ಸಂದರ್ಭ ಸಂಚಾರಿ ಠಾಣಾ ಪೊಲೀಸರು ತೊಕ್ಕೊಟ್ಟು ಭಾಗದಿಂದ ಬರುವ ಬಸ್‌ಗಳನ್ನು ಪಂಪ್‌ವೆಲ್‌ ಬಳಿ ನಿಲ್ಲಿಸಿ ಹೆಚ್ಚುವರಿ ಪ್ರಯಾಣಿಕರು ಇರುವವರನ್ನು ಇಳಿಸಿದರು. ಸಂಜೆ ಹೊತ್ತಿಗೆ ಜೆಪ್ಪು ಸೇತುವೆ ಮತ್ತು ನಾಟೆಕಲ್‌ ಬಳಿ 15ರಷ್ಟುಖಾಸಗಿ ಬಸ್‌ಗಳನ್ನು ತಡೆದು ಅಧಿಕ ಪ್ರಯಾಣಿಕರು ಇರುವ ಬಸ್‌ಗೆ ದಂಡ ವಿಧಿಸಿದರು. ನಾಗುರಿ ಸಂಚಾರಿ ಠಾಣೆಯ ಹೈವೇ ಪ್ಯಾಟ್ರಲ್‌-4 ಮತ್ತು ಹೈವೇ ಪ್ಯಾಟ್ರಲ್‌ -6 ಕಾರ್ಯಾಚರಣೆ ನಡೆಸಿತು.

ಮಾಲೀಕರಿಗೆ ಉಳಿದಿದ್ದು 100 ರು.!

ತಲಪಾಡಿಯಿಂದ-ಸ್ಟೇಟ್‌ ಬ್ಯಾಂಕ್‌ ವರೆಗೆ ಕೆಲವೇ ಸಿಟಿ ಬಸ್‌ಗಳು ಜೂನ್‌ 1ರಿಂದ ಸಂಚಾರ ಆರಂಭಿಸಿವೆ. ಶೇ.15 ರಷ್ಟುಟಿಕೆಟ್‌ ದರ ಏರಿಕೆ ಮಾಡಿದ್ದರೂ, ಮೊದಲ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಇದರಿಂದ ಕೆಲ ಬಸ್‌ ಮಾಲೀಕರಿಗೆ ಸಿಬ್ಬಂದಿ ವೇತನ, ಡೀಸೆಲ್‌ ಖರ್ಚು ಎಲ್ಲ ನೀಡಿ ಉಳಿದಿದ್ದು ಬರೀ 100 ರು. ಮಾತ್ರ ಎನ್ನುವುದು ಬಸ್‌ ಮಾಲೀಕರೊಬ್ಬರ ಅಭಿಪ್ರಾಯ.

PREV
click me!

Recommended Stories

Modern Muslim League: ಕಾಂಗ್ರೆಸ್‌ ಆಧುನಿಕ ಮುಸ್ಲಿಂ ಲೀಗ್‌; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ!
ಹಿಜಾಬ್ ಸಮಾನತೆ ಸಂಕೇತ, ಕೇಸರಿ ಶಾಲು ಹಾಕಿ ಶಾಲೆಗೆ ಬಂದ್ರೆ ಕಾನೂನು ಕ್ರಮ: ಮಧು ಬಂಗಾರಪ್ಪ ಎಚ್ಚರಕೆ!