'ಒಂದೇ ವರ್ಷದಲ್ಲಿ ಹೊಲಕ್ಕೆ ನೀರು ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ'

By Suvarna NewsFirst Published Jan 1, 2020, 10:29 AM IST
Highlights

ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಒಂದು ವರ್ಷದಲ್ಲಿ ರೈತರ ಹೊಲಗಳಿಗೆ ನೀರು ತರುವುದಾಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ| ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ವರ್ಷದಲ್ಲಿ ನೀರು ಬರಲ್ಲ | ಒಂದು ವೇಳೆ ಬಂದರೆ ರಾಜೀನಾಮೆ ಕೊಡುವೆ ಎಂದ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ|

ಕುಷ್ಟಗಿ(ಜ.01): ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅವರು ಹೇಳಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿಗೆ ಇಲ್ಲಿನ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಕೃಷ್ಣಾ ಬಿ ಸ್ಕೀಂ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಒಂದು ವರ್ಷದಲ್ಲಿ ರೈತರ ಹೊಲಗಳಿಗೆ ನೀರು ತರುವುದಾಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಸದ್ಯ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರಗಳು ಹೇಳುತ್ತಿವೆ. ಒಂದು ವರ್ಷದಲ್ಲಿ ನನ್ನ ಕ್ಷೇತ್ರದಲ್ಲಿ ಬರುವ ಕಲಾಲಬಂಡಿ ಮತ್ತು ಅದರ ಸುತ್ತಮುತ್ತಲಿರುವ ರೈತರ ಜಮೀನುಗಳಿಗೆ ನೀರನ್ನು ತರಿಸಿದ್ದೆ ಆದಲ್ಲಿ ನಾನು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು. ಯೋಜನೆಯಡಿ ಒಂದು ವರ್ಷದಲ್ಲಿ ನೀರು ಬರುವುದು ಅಸಾಧ್ಯ. ಹಾಗೊಂದು ವೇಳೆ ನೀರು ಬಂದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು. 

ಇತೀಚಿಗೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಹಾನಿಯಾದ ಪ್ರದೇಶಕ್ಕೆ ಸರ್ಕಾರ ವಿವಿಧ ಯೋಜನೆಗಳ ಅನುದಾನವನ್ನು ವರ್ಗಾ ವಣೆ ಮಾಡಿದೆ. ಇದರಿಂದ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ಕೆಲ ಅಭಿವೃದ್ಧಿ ಕಾರ್ಯಗಳು ಮತ್ತು ಕೆಲ ಯೋಜನೆ ಗಳಿಗೆ ಹಿನ್ನಡೆಯಾಗಿದೆ ಎಂದು ಹೇಳಿದರು. 

ಜ. 13 ಉಪಮುಖ್ಯಮಂತ್ರಿ ಭೇಟಿ: 

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಲಕ್ಷ್ಮಣ ಸೌದಿ ಅವರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಗೆ ಜ. 13 ರಂದು ತಾಲೂಕಿಗೆ ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ತಾಲೂಕಿನ ತಾವರಗೇರಾ ಹೋಬಳಿಯ ಮೇಣೆದಾಳ ಗ್ರಾಮದಲ್ಲಿ 20 ಕೋಟಿ ವೆಚ್ಚದ ಮೋರಾಜಿ ವಸತಿ ಶಾಲೆ ಕಟ್ಟಡ, ತಾವರಗೇರಾದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗಾಗಿ 4.5 ಕೋಟಿ ಮತ್ತು ಕುಷ್ಟಗಿಯಲ್ಲಿ 3 ಕೋಟಿ ವೆರ್ಚ್ಚದಲ್ಲಿ ವಸತಿ ನಿಲಯ ಕಟ್ಟಣದ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸೋಮಶೇಖರ ವೈಜಾಪುರ, ತಾಜುದೀನ ದಳಪತಿ, ಸೈಯದ್ ಮೈನುದೀನ ಮುಲ್ಲಾ, ರಾಮಣ್ಣ ಬಿನ್ನಾಳ ಇದ್ದರು. 

ಕ್ಷಮೆಯಾಚಿಸಲಿ: 

ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಸುಭಾಷಚಂದ್ರ ಬೋಸ್ ಅವರನ್ನು ಉಗ್ರವಾದಿಗಳು ಎನ್ನುವ ಮೂಲಕ ಅವರ ಚಾರಿತ್ರ್ಯಕ್ಕೆ ಕಳಂಕ ತಂದಿರುವ ಶಾಸಕ ಅಮರೇಗೌಡ ಭಯ್ಯಾಪುರ ಕ್ಷಮೆಯಾಚಿಸ ಬೇಕು ಎಂದು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಿವು ಮೇಲಸಕ್ರಿ ಒತ್ತಾಯಿಸಿದ್ದಾರೆ. 

ಹನುಮಸಾಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಗಾರರ ಕುರಿತು ಲಘುವಾಗಿ ಮಾತನಾಡಿರುವು ದನ್ನು ಉಗ್ರ ಹೋರಾಟ ಮಾಡಲಾಗುವುದು ಎಂದಿದ್ದಾರೆ.

ಮತ್ತೆ ಕ್ಷಮೆ ಕೇಳುವ ಅಗತ್ಯವಿಲ್ಲ ಡಿ. 29ರಂದು ನಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ತೀವ್ರಗಾಮಿಗಳ ವೇಷದಲ್ಲಿಯಾದರೂ ಹೋರಾಟ ಮಾಡಿ ದೇಶದಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಯಶಸ್ವಿಯಾಗಿದ್ದಾರೆ ಎನ್ನುವ ಬದಲು ಉಗ್ರಗಾಮಿಗಳು ಮತ್ತು ಉಗ್ರವಾದಿಗಳ ವೇಷದಲ್ಲಿ ಯಾದರೂ ಹೋರಾಟ ಮಾಡಿದ್ದರು ಎಂದು ಹೇಳಿರುವುದಕ್ಕೆ ಸಂಬಂಧಿಸಿದಂತೆ ಆಗಲೇ ತಪ್ಪಾಗಿದೆ ಎಂದು ಹೇಳಿದ್ದೇನೆ. ಅಂದೇ ಕ್ಷಮೇ ಕೇಳಿದ್ದೇನೆ. ಹಾಗಾಗಿ ಮತ್ತೇ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಆದರೆ, ಸ್ಥಳೀಯ ವಿರೋಧ ಪಕ್ಷದವರು ಇದಕ್ಕೆ ಸಂಬಂಧಿಸಿದಂತೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
 

click me!