ಮಿತಿ ಮೀರಿದ ಭ್ರಷ್ಟಾಚಾರದಿಂದ ಬಿಜೆಪಿಯಲ್ಲಿ ಸಿಎಂ ಬದಲಾವಣೆ: ಡಿಕೆಶಿ

By Kannadaprabha NewsFirst Published Sep 13, 2021, 10:45 AM IST
Highlights

*   ಅಧಿವೇಶನದಲ್ಲಿ ಕೊರೋನಾ ಪರಿಹಾರಕ್ಕಾಗಿ ಧ್ವನಿ ಎತ್ತುತ್ತೇವೆ
*   ಅ. 2ರಿಂದ ರಾಜ್ಯಾದ್ಯಂತ ಕಾರ್ಯಕರ್ತರ ಸಭೆ
*  ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಬಿಜೆಪಿ ಏನು ಮಾಡಿದೆ? 
 

ಹುಬ್ಬಳ್ಳಿ(ಸೆ.13): ಬಿಜೆಪಿಗೆ ವಿವಿಧ ರಾಜ್ಯಗಳಲ್ಲಿ ತಮ್ಮ ನಾಯಕರ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು, ಅದೆ ಕಾರಣಕ್ಕೆ ಮುಖ್ಯಮಂತ್ರಿಗಳ ಬದಲಾವಣೆಗೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ಹಾಗೂ ಹು-ಧಾ ಪಾಲಿಕೆ ನೂತನ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೋನಾ ನಿರ್ವಹಣೆಯಲ್ಲಿ ವಿಫಲ, ಆಡಳಿತ ಸರಿಯಾಗಿಲ್ಲ, ಭ್ರಷ್ಟಾಚಾರ ಹೆಚ್ಚಿದೆ ಎಂಬೆಲ್ಲ ಕಾರಣಕ್ಕಾಗಿ ನಾಲ್ಕು ತಿಂಗಳಲ್ಲಿ ಬಿಜೆಪಿ ಮೂರು ಮುಖ್ಯಮಂತ್ರಿಗಳನ್ನು ಬದಲಿಸಿದೆ. ಕೇಂದ್ರದ ಆರೋಗ್ಯ ಸಚಿವರ ಬದಲಾವಣೆಗೂ ಇದೇ ಕಾರಣ. ಈ ಬೆಳವಣಿಗೆ ಒಟ್ಟಾರೆ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದರು.

ಎಐಎಂಐಎಂ ಬಿಜೆಪಿಯ ಬಿ ಟೀಂ ಆಗಿದೆ. ಬಿಜೆಪಿ ಅಧಿಕಾರ ದುರ್ಬಳಕೆ ಹಾಗೂ ನಮ್ಮ ಟಿಕೆಟ್‌ ಹಂಚಿಕೆಯಲ್ಲಿ ಆದ ಕೆಲ ಗೊಂದಲದ ಕಾರಣ ಫಲಿತಾಂಶದಲ್ಲಿ ಹಿನ್ನಡೆಯಾಗಿದೆ. ಮಹಾನಗರ ಪಾಲಿಕೆ ಚುನಾವಣೆಯಂತೆ ವಿಧಾನಸಭೆ ಚುನಾವಣೆಯಲ್ಲಿ ಈ ಪಕ್ಷ ಯಾವುದೇ ಪ್ರಭಾವ ಬೀರದು. ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಗ್ಯಾಸ್ ಬೆಲೆ ಹೆಚ್ಚಳ ಹಿನ್ನೆಲೆ: ಅಡುಗೆ ಮನೆಯಲ್ಲಿ ಡಿಕೆಶಿ..!

75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಎಐಸಿಸಿಯಿಂದ ಹೊಸ ಅಭಿಯಾನ ನಡೆಸಲಾಗುತ್ತಿದೆ. ಅದರ ಭಾಗವಾಗಿ ಮುಂದಿನ ಅಕ್ಟೋಬರ್‌ 2ರಿಂದ ರಾಜ್ಯಾದ್ಯಂತ ಸುಮಾರು 6 ಸಾವಿರ ಪಂಚಾಯಿತಿ, 4 ಸಾವಿರ ವಾರ್ಡ್‌ಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಹೆಸರಿನಲ್ಲಿ ಕಾರ್ಯಕರ್ತರು ಸಭೆ ನಡೆಸಬೇಕು. ನಾನು ಒಂದು ತಿಂಗಳು ಪ್ರತಿದಿನ ಒಂದೊಂದು ಜಿಲ್ಲೆಗೆ ಭೇಟಿ ನೀಡಲಿದ್ದೇನೆ. ಕಾರ್ಯಕ್ರಮದ ಮೇಲ್ವಿಚಾರಣೆಗೆ ವೀಕ್ಷಕರನ್ನು ನೇಮಕ ಮಾಡಲಾಗುವುದು ಎಂದರು.

ಅಧಿವೇಶನದಲ್ಲಿ ಕೊರೋನಾ ಚರ್ಚೆ

ಅಧಿವೇಶನದಲ್ಲಿ ಕೊರೋನಾ ವಿಚಾರವಾಗಿ ನಾವು ಧ್ವನಿ ಎತ್ತಲಿದ್ದೇವೆ. ಸುಮಾರು 4 ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರೆಲ್ಲರ ಕುಟುಂಬಕ್ಕೂ ಪರಿಹಾರವನ್ನು ವಿತರಣೆ ಮಾಡಬೇಕು. ಜತೆಗೆ ಕೋವಿಡ್‌ ವೇಳೆ ಉದ್ಯೋಗ ಕಳೆದುಕೊಂಡವರಿಗೆ, ಉದ್ಯಮದಲ್ಲಿ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲು ಒತ್ತಾಯ ಮಾಡುತ್ತೇವೆ ಎಂದರು.

ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಬಿಜೆಪಿ ಏನು ಮಾಡಿದೆ? ಸಿಎಂ ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌ ಏನೇನು ಭರವಸೆ ನೀಡಿದ್ದರು ಎನ್ನುವುದು ಮುಖ್ಯವಾಗುತ್ತದೆ. ಇವೆಲ್ಲದರ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.
 

click me!