60 ದಿನಗಳ ನಂತರ ಭಕ್ತರ ಪ್ರವೇಶಕ್ಕೆ ಅವಕಾಶ: ಕೊಟ್ಟೂರೇಶ್ವರ ದೇಗುಲ ತೆರೆಯಲು ಸಿದ್ಧತೆ

By Kannadaprabha NewsFirst Published May 28, 2020, 9:03 AM IST
Highlights

ಕೊಟ್ಟೂರೇಶ್ವರ ದೇವಸ್ಥಾನ: ಜೂನ್‌ 1 ರಿಂದ ಅವಕಾಶ ಕಲ್ಪಿಸಲು ಸಿದ್ಧತೆ| ರಸ್ತೆಯ ಎರಡೂ ಬದಿ ಗುರುತು ಹಾಕಿ ಭಕ್ತ​ರ ಪ್ರವೇ​ಶಕ್ಕೆ ಅವ​ಕಾ​ಶ| ಪ್ರತಿಯೊಬ್ಬರು ಕಡ್ಡಾಯವಾಗಿ ಸರ್ಕಾರ ರೂಪಿಸಿರುವ ನಿಯಮಾವಳಿ ಅನುಸರಿಸಿ ದೇವಸ್ಥಾನಕ್ಕೆ ಆಗಮಿಸಲು ಸೂಚನೆ|

ಕೊಟ್ಟೂರು(ಮೇ.28): ಲಾಕ್‌ಡೌನ್‌ ಘೋಷಣೆಯಾದ 60 ಸುದೀರ್ಘ ದಿನಗಳ ನಂತರ ಭಕ್ತರ ಪ್ರವೇಶಕ್ಕೆ ಅವಕಾಶ ಒದಗಿಸಿಕೊಡುವ ನಿರ್ಧಾರಕ್ಕೆ ಸರ್ಕಾರ ಬಂದಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವ ಕೊಟ್ಟೂರಿನ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಲು ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇದೀಗ ಮುಜರಾಯಿ ಇಲಾಖೆ ಸಿದ್ಧತೆ ಆರಂಭಿ​ಸಿ​ದೆ.

ರೋಗ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಕ್ತರ ನಡುವೆ ಕನಿಷ್ಟ 6 ಮೀಟರ್‌ ಅಂತರದಲ್ಲಿ ರಸ್ತೆಯ ಎಡ ಮತ್ತು ಬಲ ಭಾಗದ ರಸ್ತೆಯುದ್ದಕ್ಕೂ ಗುರುತು ಹಾಕಲಾ​ಗಿದೆ. ಇದರ ಅನುಸಾರವಾಗಿಯೇ ಸಾಲಿನಲ್ಲಿ ಭಕ್ತರು ದೇವಸ್ಥಾನದ ಒಳ ಪ್ರವೇಶಿಸಿ ಶ್ರೀಸ್ವಾಮಿಯ ದರ್ಶನಾರ್ಶಿವಾದ ಪಡೆದುಕೊಳ್ಳಬೇಕಾಗಿದೆ.

ದೇವರಿಗೆ ಬಿಡುಗಡೆ: ರಾಜ್ಯದಲ್ಲಿ ದೇವಸ್ಥಾನ, ಚರ್ಚ್, ಮಸೀದಿ ತೆರೆಯಲು ಸಿಎಂ ಆದೇಶ!

ಇದಲ್ಲದೆ ದೇವಸ್ಥಾನದ ಹೊರ ಭಾಗದಲ್ಲಿ ಸ್ಯಾನಿಟೈಜರ್‌ ಅನ್ನು ಇರಿಸುವ ವ್ಯವಸ್ಥೆಯನ್ನು ಮುಜರಾಯಿ ಇಲಾಖೆ ಮಾಡಲಿರುವುದಾಗಿ ತಿಳಿದುಬಂದಿದೆ. ದರ್ಶನಕ್ಕೆ ಆಗಮಿಸುವ ಪ್ರತಿ ಭಕ್ತರು ಮಾಸ್ಕ್‌ಗಳನ್ನು ಧರಿಸಿರಲೇಬೇಕು ಎಂದು ಕಡ್ಡಾಯ ಸೂಚನೆ ನೀಡಲಾಗಿದೆ.

ಸುಮಾರು 3 ಅಮವಾಸ್ಯೆ ಕಳೆದರೂ ಶ್ರೀಸ್ವಾಮಿಯ ದರ್ಶನಾರ್ಶಿವಾದ ಪಡೆಯಲು ಭಕ್ತರಿಗೆ ಅವಕಾಶ ಇರದಿದ್ದರಿಂದ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಕೇವಲ ಹೊರ ಆವರಣದಿಂದಲೇ ಸ್ವಾಮಿಯ ದರ್ಶನ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಭಕ್ತರು ಅನಿವಾರ್ಯವಾಗಿ ಹೊರಗಿನಿಂದಲೇ ದರ್ಶನ ಪಡೆದು ತಮ್ಮ ಭಕ್ತಿ ತೋರುತ್ತಿದ್ದರು. ದೇವಸ್ಥಾನ ಪ್ರವೇಶಕ್ಕೆ ಎಂದಿನಂತೆ ಅವಕಾಶ ನೀಡುವಂತೆ ಭಕ್ತರು ನಿರಂತರ ಸರ್ಕಾರದ ಮೇಲೆ ಒತ್ತಾಯ ಹೇರುತ್ತಲೆ ಬಂದಿದ್ದರು. ಇದೀಗ ಜೂನ್‌ 1ರ ಸೋಮವಾರದಿಂದ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನ ಎಂದಿನಂತೆ ಭಕ್ತರ ಪ್ರವೇಶಕ್ಕೆ ತೆರೆಯಲಿದೆ.

ಬಳ್ಳಾರಿ: ಕೋವಿಡ್‌ ಆಸ್ಪತ್ರೆ ನರ್ಸ್‌ಗೆ ಕೊರೋನಾ ಸೋಂಕು, ಆತಂಕದಲ್ಲಿ ಸಿಬ್ಬಂದಿ

ಸರ್ಕಾರದ ಸೂಚನೆ ಮೇರೆಗೆ ಕೊಟ್ಟೂರೇಶ್ವರ ಸ್ವಾಮಿಯ ದರ್ಶನ, ಪೂಜಾ ಕೈಂಕರ್ಯ ನೆರೆವೇರಿಸಲು ಜೂನ್‌ 1 ರಿಂದ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲು ಈಗಾಗಲೇ ಸಿದ್ಧತೆ ಕೈಗೊಂಡಿದ್ದೇವೆ. ಪ್ರತಿಯೊಬ್ಬರು ಕಡ್ಡಾಯವಾಗಿ ಸರ್ಕಾರ ರೂಪಿಸಿರುವ ನಿಯಮಾಳಿಗಳನ್ನು ಅನುಸರಿಸಿ ದೇವಸ್ಥಾನಕ್ಕೆ ಆಗಮಿಸಬೇಕು. ಪ್ರಸಾದ ಮತ್ತಿತರ ವ್ಯವಸ್ಥೆಯಾಗಲಿ ಸದ್ಯದ ಮಟ್ಟಿಗೆ ಇರುವುದಿಲ್ಲ ಎಂದು ಕೊಟ್ಟೂರೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ಪ್ರಕಾಶ ರಾವ್‌ ಅವರು ಹೇಳಿದ್ದಾರೆ. 
 

click me!