ಕೋಲಾರ: 14 ತಿಂಗಳಿಂದ ಶಾಸಕರು ನಾಪತ್ತೆ, ಎಸ್‌ಪಿಗೆ ದೂರು

By Kannadaprabha NewsFirst Published Jul 31, 2019, 10:58 AM IST
Highlights

ಮುಳಬಾಗಿಲು ಶಾಸಕ ಎಚ್‌.ನಾಗೇಶ್‌ರವರು ಹಲವು ತಿಂಗಳಿನಿಂದ ನಾಪತ್ತೆಯಾಗಿರುವ ಕಾರಣ ಅವರನ್ನು ಹುಡುಕಿಕೊಡುವಂತೆ ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಲಾರ ಜಿಲ್ಲಾ ಘಟಕವು ದೂರನ್ನು ನೀಡಿದೆ.

ಕೋಲಾರ(ಜು.31): ಮುಳಬಾಗಿಲು ಶಾಸಕ ಎಚ್‌.ನಾಗೇಶ್‌ರವರು ಹಲವು ತಿಂಗಳಿನಿಂದ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬಾರದೆ ನಾಪತ್ತೆಯಾಗಿರುವ ಕಾರಣ ಅವರನ್ನು ಹುಡುಕಿಕೊಡುವಂತೆ ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೋಲಾರ ಜಿಲ್ಲಾ ಘಟಕವು ದೂರನ್ನು ನೀಡಿದೆ.

14 ತಿಂಗಳಿಂದ ಶಾಸಕರು ನಾಪತ್ತೆ:

ಶಾಸಕ ನಾಗೇಶ್‌ರವರು 14 ತಿಂಗಳಿನಿಂದ ಮುಳಬಾಗಿಲು ತಾಲೂಕು ಅಭಿವೃದ್ಧಿ ಯ ಬಗ್ಗೆ ಗಮನ ಹರಿಸದೇ ಅಧಿಕಾರಕ್ಕಾಗಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳ ಜೊತೆಗೆ ಓಡಾಡುತ್ತಿದ್ದು ವಿಧಾನಸಭಾ ಕ್ಷೇತ್ರಕ್ಕೆ ಬಾರದೆ ಬರಿ ರೆಸಾರ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಜಿಲ್ಲೆಯ ಮತದಾರರನ್ನು ಕಡೆಗಣಿಸಿ ಕೊನೆಗೆ ಕೋಲಾರ ಜಿಲ್ಲೆಯ ಮಾನವನ್ನೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕುತ್ತಿದ್ದು, ಕ್ಷೇತ್ರಕ್ಕೆ ಬಾರದಿರುವ ಶಾಸಕರನ್ನು ದಯವಿಟ್ಟು ಹುಡುಕಿಕೊಡಬೇಕೆಂದು ದೂರಿನಲ್ಲಿ ಕೋರಿದ್ದಾರೆ.

ಅಧಿಕಾರಕ್ಕಾಗಿ ಶಾಸಕರ ಅಲೆದಾಟ:

ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ ಮಾತನಾಡಿ, 'ಮುಳಬಾಗಿಲು ತಾಲೂಕಿನಲ್ಲಿ ಬರ ತೀವ್ರವಾಗಿದೆ. ತಾಲೂಕಿನಲ್ಲಿ ಮಳೆ ಇಲ್ಲ ಬೆಳೆ ಇಲ್ಲ , ರೈತರು ಒದ್ದಾಡುತ್ತಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರು ಸೇರಿದಂತೆ ಹಲವಾರು ಸಮಸ್ಯೆಗಳಿವೆ. ತಾಲೂಕಿನ ಜನರ ಸಮಸ್ಯೆಗಳತ್ತ ಗಮನ ಹರಿಸದ ಶಾಸಕ ನಾಗೇಶ್‌ ಹಣ ಮತ್ತು ಅಧಿಕಾರಕ್ಕಾಗಿ ಅಲೆದಾಡುತ್ತಿದ್ದಾರೆ' ಎಂದು ದೂರಿದ್ದಾರೆ.

ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಶಾಸಕಗೆ ಬೆದರಿಕೆ?

ಜಿಲ್ಲೆಯಲ್ಲಿ ಶಾಸಕರನ್ನು ಆಯ್ಕೆ ಮಾಡುವ ಮೊದಲು ಅವರ ರಾಜಕೀಯ ಹಿನ್ನೆಲೆಯನ್ನೂ ತಿಳಿದುಕೊಳ್ಳಬೇಕಾಗುತ್ತದೆ. ರಾಜಕೀಯ ಪಕ್ಷಗಳಲ್ಲಿ ಒಂದು ದಿನವೂ ಗುರ್ತಿಸಿಕೊಳ್ಳದ ನಿವೃತ್ತಿ ಹೊಂದಿದ ಶ್ರೀಮಂತ ಅಧಿಕಾರಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಮತ್ತು ಅಂತವರಿಗೆ ಜನರೂ ಮತ ಹಾಕಬಾರದು ಎಂದು ಮನವಿ ಮಾಡದಿರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಎಲ್‌.ಎನ್‌.ಬಾಬು, ಕೆ.ಎನ್‌.ಶಂಕರಪ್ಪ, ನಂದಕಿಶೋರ್‌ ಮುಂತಾದವರು ಹಾಜರಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!