
ಬಂಗಾರಪೇಟೆ(ಏ.18): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಬಡವರಿಗೆ ಸಹಾಯ ಹಸ್ತ ನೀಡುವಾಗ ರಾಜಕೀಯ ನಾಯಕರು ಮತ್ತೊಂದು ಪಕ್ಷದ ನಾಯಕರ ಭಾವಚಿತ್ರ ಹಾಕಿಕೊಂಡು ಆಹಾರ ಧಾನ್ಯಗಳ ಕಿಟ್ ನೀಡುವುದು ಆರೋಗ್ಯ ಬೆಳವಣಿಗೆಯಲ್ಲ ಇದು ರಾಜಕೀಯ ಮಾಡುವ ಸಮಯವೂ ಅಲ್ಲ. ಆದ್ದರಿಂದ ಇಂತಹ ಪ್ರಸಂಗಕ್ಕೆ ಅಂತ್ಯ ಹಾಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ವೇಣುಗೋಪಾಲ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪಟ್ಟಣದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಧಾನ್ಯಗಳ ಕಿಟ್ ಕೊಡುವುದು ಎಲ್ಲರ ಕರ್ತವ್ಯವಾಗಿದೆ. ಆದರೆ, ಈ ವೇಳೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡವರು ಬಿಜೆಪಿಯಿಂದ ಆಯ್ಕೆಯಾಗಿರುವ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಭಾವಚಿತ್ರಗಳನ್ನು ಹಾಕಿಕೊಂಡು ಬಡವರಿಗೆ ಆಹಾರ ಕಿಟ್ ಕೊಡುವುದರಿಂದ ಬಿಜೆಪಿ ಕಾರ್ಯಕರ್ತರಿಗೆ ಗೊಂದಲ ಉಂಟು ಮಾಡುತ್ತಿದ್ದಾರೆಂದು ಟೀಕಿಸಿದರು.
ಲಾಕ್ಡೌನ್: ಕೃಷಿಯಲ್ಲಿ ಮಾಜಿ ಸ್ಪೀಕರ್ ಬ್ಯುಸಿ, ಕುರಿ ಸಾಕಾಣಿಕೆಗೂ ಸೈ
ಮಾಜಿ ಶಾಸಕರು ನಮ್ಮ ಪಕ್ಷದ ನಾಯಕರಲ್ಲ, ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಭಾವಚಿತ್ರ ಹಾಕಿಕೊಳ್ಳುವ ನೈತಿಕ ಹಕ್ಕಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಬಿಜೆಪಿ ಪಕ್ಷದಿಂದ ಸಹ ಬಡವರಿಗೆ ನೆರವನ್ನು ಕೊಡಲಾಗುತ್ತಿದೆ. ಆದರೆ ನಾವು ಎಲ್ಲಿಯೂ ರಾಜಕಾರಣ ಮಾಡಿಲ್ಲ ಯಾರ ಭಾವಚಿತ್ರಗಳನ್ನು ಹಾಕಿಕೊಂಡಿಲ್ಲ. ಆದರೆ ಜೆಡಿಎಸ್ನ ಮಾಜಿ ಶಾಸಕ ನಾರಾಯಣಸ್ವಾಮಿ ವರ್ತನೆ ಸರಿಯಿಲ್ಲ ಎಂದು ಖಂಡಿಸಿದರು.
ಉದ್ಯೋಗ ಕಡಿತ ಬೇಡ: ಮೋದಿ ಸಲಹೆಗೆ ಹಣ ಎಲ್ಲಿದೆ ಎನ್ನುತ್ತಿರುವ ಉದ್ಯಮಿಗಳು!
ಪಕ್ಷದ ತಾಲೂಕು ಅಧ್ಯಕ್ಷ ನಾಗೇಶ್, ಜಿಪಂ ಸದಸ್ಯ ಬಿ.ವಿ.ಮಹೇಶ್, ಶ್ರೀನಿವಾಸಗೌಡ, ಮುಖಂಡರಾದ ಹನುಮಪ್ಪ, ಶಶಿಕುಮಾರ್, ಪಾರ್ಥಸಾರಥಿ, ರಾಮಚಂದ್ರಪ್ಪ, ಹೊಸರಾಯಪ್ಪ, ಶ್ರೀನಿವಾಸ್ ಮತ್ತಿತರರು ಇದ್ದರು.