Kodagu: ಅತ್ಯಂತ ಕಡಿಮೆ ಅಳತೆಯ ನಿವೇಶನದ ಹಕ್ಕುಪತ್ರ ವಿತರಣೆಗೆ ಜನರ ಆಕ್ರೋಶ: ಅಹೋರಾತ್ರಿ ಪ್ರತಿಭಟನೆ

Published : Apr 03, 2023, 09:42 PM IST
Kodagu: ಅತ್ಯಂತ ಕಡಿಮೆ ಅಳತೆಯ ನಿವೇಶನದ ಹಕ್ಕುಪತ್ರ ವಿತರಣೆಗೆ ಜನರ ಆಕ್ರೋಶ: ಅಹೋರಾತ್ರಿ ಪ್ರತಿಭಟನೆ

ಸಾರಾಂಶ

ತಲೆ ಮೇಲೊಂದು ಸೂರಿಲ್ಲದೆ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿ ಕುಳಿತು ಪ್ರತಿಭಟಿಸುತ್ತಿದ್ದವರಿಗೆ ಸರ್ಕಾರ ಅವರ ಪ್ರತಿಭಟನೆಯನ್ನು ಕೈಬಿಡಿಸುವುದಕ್ಕಾಗಿ ಹಕ್ಕುಪತ್ರ ನೀಡುತ್ತಿದ್ದಾರೆ. 

ವರದಿ: ರವಿ.ಎಸ್.ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಏ.03): ತಲೆ ಮೇಲೊಂದು ಸೂರಿಲ್ಲದೆ ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿ ಕುಳಿತು ಪ್ರತಿಭಟಿಸುತ್ತಿದ್ದವರಿಗೆ ಸರ್ಕಾರ ಅವರ ಪ್ರತಿಭಟನೆಯನ್ನು ಕೈಬಿಡಿಸುವುದಕ್ಕಾಗಿ ಹಕ್ಕುಪತ್ರ ನೀಡುತ್ತಿದ್ದಾರೆ. ಆದರೆ ಒಂದು ಕೊಠಡಿಯನ್ನು ಕಟ್ಟಲಾಗದಷ್ಟು ಜಾಗಕ್ಕೆ ಹಕ್ಕುಪತ್ರ ನೀಡಿ ಅಧಿಕಾರಿಗಳು ಮಾಡಿರುವ ಮಸಲತ್ತು ಗೊತ್ತಾಗಿದ್ದೇ ತಡ ಇದೀಗ ನೂರಾರು ಜನರು ಮತದಾನವನ್ನು ಬಹಿಷ್ಕಾರ ಮಾಡುವುದಾಗಿ ಪಟ್ಟು ಹಿಡಿದು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು ಇದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಪಾಲೇಮಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ. 

ಹಲವು ವರ್ಷಗಳಿಂದ ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಬದುಕುತ್ತಿದ್ದ ಎಷ್ಟೋ ಕುಟುಂಬಗಳು ತಮಗೂ ಒಂದು ಸೂರು ಕಲ್ಪಿಸಿಕೊಡಿ ಎಂದು ಕೇಳಿ, ಕೇಳಿ ಸಾಕಾಗಿ ಕೊನೆಗೆ 2005 ರಲ್ಲಿ ಸರ್ಕಾರಿ ಜಾಗವೊಂದನ್ನು ನೋಡಿ ಅಲ್ಲಿ ಶೆಡ್ ನಿರ್ಮಿಸಿಕೊಂಡು ಕುಳಿತಿದ್ದರು. ಇಲ್ಲಿಂದಲೂ ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಯತ್ನಿಸಿತ್ತು. ಕೊನೆಗೂ 2018 ರಲ್ಲಿ ಜಿಲ್ಲಾಡಳಿತ ಇವರಿಗೆ 94 ಸಿ ಅರ್ಜಿ ಅಡಿಯಲ್ಲಿ ಹಕ್ಕುಪತ್ರ ನೀಡಿತ್ತು. ವಿಪರ್ಯಾಸವೆಂದರೆ ನಿರಂತರವಾಗಿ ನಡೆಯುತ್ತಿದ್ದ ನಿರಾಶ್ರಿತರ ಹೋರಾಟವನ್ನು ತಣ್ಣಗಾಗಿಸಲು ಬೇರೆ ದಾರಿಯಿಲ್ಲದೆ ಹಕ್ಕುಪತ್ರ ನೀಡಿತ್ತಾದರೂ ಕೇವಲ 10, 12 ರ ಅಳತೆಯ ನಿವೇಶನಗಳಿಗೆ ಹಕ್ಕುಪತ್ರ ನೀಡಲಾಗಿದೆ. 

ಸಾಗರ, ಸೊರಬ ಕ್ಷೇತ್ರ​ ಅಭ್ಯ​ರ್ಥಿ​ಗಳ ಕ್ಷೇತ್ರ ಬದ​ಲಾ​ವಣೆ?: ಕುಮಾರ್‌ ಬಂಗಾ​ರಪ್ಪ ವಿರುದ್ಧ ತೊಡೆ ತಟ್ಟಿ​ರುವ ಬಿಜೆಪಿ ಮುಖಂಡರು

ಇದನ್ನು ಸರಿಪಡಿಸುವಂತೆ 2018 ರಿಂದಲೂ ನಿರಂತರವಾಗಿ ಹೋರಾಟ ನಡೆಸಿದ್ದರೂ ಯಾರೂ ಈ ಕುರಿತು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪಾಲೇಮಾಡು ಗ್ರಾಮದ 260 ಕುಟುಂಬಗಳ ಸಾವಿರಕ್ಕೂ ಹೆಚ್ಚು ಮತದಾರರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮದ ಎಲ್ಲೆಡೆ ಅಂದರೆ ಪ್ರತಿ ಬೀದಿಯಲ್ಲೂ ಚುನಾವಣೆ ಬಹಿಷ್ಕರಿಸಲಾಗಿದೆ ಎಂಬ ನಾಮಫಲಕಗಳನ್ನು ಹಾಕಲಾಗಿದೆ. ಗ್ರಾಮದಲ್ಲೇ ಶಾಮಿಯಾನ ಹಾಕಿ ಮಾರ್ಚ್ 28 ರಿಂದ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು, ಹಕ್ಕುಪತ್ರಗಳಲ್ಲಿ ಆಗಿರುವ ದೋಷವನ್ನು ಸರಿಪಡಿಸಿಕೊಡುವಂತೆ ಮಾರ್ಚ್ 17 ರಂದೇ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದ್ದಾರೆ. 

ಆದರೆ ಜಿಲ್ಲಾಧಿಕಾರಿ ಅವರು ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅವರು ಬರುವವರೆಗೆ ನಮ್ಮ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಹೋರಾಟದ ಮುಖಂಡ ಧನಂಜಯ್ ಅವರು ಕಳೆದ ಏಳು ದಿನಗಳಿಂದ ನಾವು ಅಹೋ ರಾತ್ರಿ ಪ್ರತಿಭಟನೆ ಮಾಡುತ್ತಿದ್ದೇವೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಅವರು ಬಂದು ಬಡವರ ಸಮಸ್ಯೆ ಆಲಿಸಬೇಕು. ಇಲ್ಲದಿದ್ದರೆ ನಾವು ಚುನಾವಣೆ ಬಹಿಷ್ಕರಿಸುವುದು ಖಚಿತ. ಅವರು ಕೊಟ್ಟಿರುವ ಹಕ್ಕುಪತ್ರದಲ್ಲಿ ಕನಿಷ್ಠ ಕಾಲ್ ಸೆಂಟ್ ಜಾಗ ಕೂಡ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಮತ್ತೊಬ್ಬ ಮುಖಂಡ ಸುರೇಶ್ ಅವರು ಮಾತನಾಡಿ ನಾವಿರುವ ಮನೆಗಳ ಹಕ್ಕುಪತ್ರಗಳಲ್ಲಿ ಕೇವಲ ಕಾಲ್ ಸೆಂಟಿನಷ್ಟು ಜಾಗವನ್ನು ನಮೂದು ಮಾಡಲಾಗಿದೆ. ಇದು ಶ್ರೀಮಂತರ ಮನೆಯ ನಾಯಿ ಗೂಡಿಗೂ ಜಾಗ ಸಾಕಾಗುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸುವ ಜೊತೆಗೆ ನಾವು ಇರುವ ಜಾಗದ ಪಕ್ಕದಲ್ಲಿಯೇ ನಾವು ಉಳುಮೆ ಮಾಡುತ್ತಿರುವ ಸಣ್ಣ ಜಾಗಗಳನ್ನು ನಮಗೆ ದಾಖಲೆ ಮಾಡಿ ಪಹಣಿ ನೀಡುವಂತೆ ಅರ್ಜಿ ಸಲ್ಲಿಸಿದ್ದೆವು. ಆದರೆ ಈ ಅರ್ಜಿಯನ್ನು ಜಿಲ್ಲಾಧಿಕಾರಿ ಅವರು ತಿರಸ್ಕರಿಸಿದ್ದಾರೆ. ನಮ್ಮ ಬೇಡಿಕೆ ಈಡೇರದಿದ್ದರೆ ದಿಡ್ಡಳ್ಳಿಯಲ್ಲಿ ನಡೆದ ಹೋರಾಟದ ಸ್ವರೂಪದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

PREV
Read more Articles on
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ