ದಸರಾ: ಮಂಜಿನ ನಗರಿಯಲ್ಲಿ ಸಿದ್ಧವಾಗ್ತಿದೆ 33 ಲಕ್ಷದ ವೇದಿಕೆ..!

By Kannadaprabha NewsFirst Published Sep 27, 2019, 11:30 AM IST
Highlights

ಪ್ರಸಿದ್ಧ ಮಡಿಕೇರಿ ದಸರಾಗೆ ಸಿದ್ಧತೆಗಳು ಭರದಿಂದ ಸಾಗಿದೆ. ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸೆ.30ರಿಂದ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಗಾಂಧಿ ಮೈದಾನದಲ್ಲಿ ಬೃಹತ್‌ ವೇದಿಕೆ ಸಜ್ಜುಗೊಳ್ಳುತ್ತಿದೆ. ವೇದಿಕೆ, ಶಾಮಿಯಾನ, ಬೀದಿ ದೀಪಗಳು, ಗ್ಯಾಲರಿ, ಸೌಂಡ್‌ ಸಿಸ್ಟಮ್‌ ಸೇರಿದಂತೆ ರು.33ಲಕ್ಷ ವೆಚ್ಚದಲ್ಲಿ ಸಿದ್ಧತೆಗಳು ನಡೆಯುತ್ತಿವೆ.

ಮಡಿಕೇರಿ(ಸೆ.27): ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸೆ.30ರಿಂದ ಅ.8 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಈ ಬಾರಿಯೂ ವಿಶೇಷ ಕಲಾವಿದರು ಆಗಮಿಸಿ ತಮ್ಮ ಕಲೆಯ ಪ್ರದರ್ಶನ ನೀಡಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸ್ತ್ರೀಯವಾಗಿ ಆರಂಭಿಸಲಿದ್ದು, ಎಲ್ಲಾ ಕಲೆಗೆ ಉತ್ತೇಜನ ಹಾಗೂ ಜನರಿಗೆ ಪರಿಚಯಿಸಲು ಸಾಂಸ್ಕೃತಿಕ ಸಮಿತಿ ಚಿಂತಿಸಿದೆ. ಹೊರಗಿನ ಕಲಾವಿದರಿಗೆ ನೀಡುವ ಅವಕಾಶದಂತೆ ಈ ಬಾರಿ ಸ್ಥಳೀಯರಿಗೆ ನೋವುಂಟಾಗದಂತೆ ಅವಕಾಶ ಮಾಡಲಾಗಿದೆ.

ಪ್ರಮುಖರು ಯಾರ್ಯಾರು..?

ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಕೋಗಿಲೆಯ ಹರ್ಷಾ ಉಪ್ಪಾರ್‌, ರಕ್ಷಿತ್‌ ಪಾಣತ್ತಲೆ, ಲಿಟಿಲ್‌ ಚಾಂಫ್ಸ್‌ನ ಗುರು ಕಿರಣ್‌, ಮಜಾ ಟಾಕಿಸ್‌ನ ರೆಮೋ, ಪ್ರಮುಖ ಕಲಾವಿದರಾದ ಜ್ಞಾನಾ ಐತಾಳ್‌, ಕತಕ್‌ ಅವಳಿ ಸಹೋದರಿಯರು, ತಮಿಳುನಾಡಿನಿಂದ ಕೋವೈಎಕ್ಸ್‌ಪ್ರೆಸ್‌ ತಂಡದಿಂದ ಕರಗಾಟಂ, ರಾಜ್ಯದ ವೀರಗಾಸೆ ತಂಡ, ಸುಬ್ರಮಣ್ಯದ ಏಕಲವ್ಯ ಕಲಾವಿದರು ಸೇರಿದಂತೆ ವಿವಿಧ ಕಲಾ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

ರಾಜ್ಯದ ಅತಿದೊಡ್ಡ ಕ್ಲಾಕ್‌ ಟವರ್‌ ‘ಟಿಕ್‌ ಟಿಕ್‌’ಗೆ ದಿನಗಣನೆ

ಕೊನೆಯ ದಿನ ದಸರಾ ಸಮಿತಿಯಿಂದ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಖ್ಯಾತ ಹಾಡುಗಾರರಿಂದ ಅಂದು ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಶಮಿತಾ ಮಲ್ನಾಡ್‌, ಮೈಸೂರಿನ ಸುಮಂತ್‌ ವಸಿಷ್ಠ, ಕನ್ನಡ ಕೋಗಿಲೆ ತಂಡ, ಮಂಗಳೂರಿನ ಕಲಾ ತಂಡಗಳು ಅರ್ಜಿ ಹಾಕಿವೆ. ಆದರೆ ದಸರಾ ಸಮಿತಿ ಇನ್ನಷ್ಟೇ ತಂಡವನ್ನು ಅಂತಿಮವಾಗಿ ಆಯ್ಕೆ ಮಾಡಬೇಕಾಗಿದೆ.

ದಸರಾ ಆಹಾರ ಮೇಳದಲ್ಲಿ ಏಡಿ ಸಾರು, ಬಿದಿರು ಕಳ್ಳೆ ಪಲ್ಯ..!

ಪ್ರತಿ ದಿನ ಸಂಜೆ 6ರಿಂದ 10.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಪೂರ್ತಿ ಕಾರ್ಯಕ್ರಮ ನೋಡಿ ಹಿಂತಿರುಗುವಂತೆ ಮಾಡಲಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವ ಕಲಾವಿದರಿಗೆ ಗೌರವಧನ ವಿತರಣೆ ಮಾಡಲಾಗುತ್ತದೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್‌.ಬಿ. ರವಿ ಹೇಳಿದ್ದಾರೆ.

ಸ್ಥಳೀಯರಿಗೆ ಆದ್ಯತೆ:

ಈ ಬಾರಿಯ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊರಗಿನವರಿಗಿಂತ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಾಂಸ್ಕೃತಿಕ ಸಮಿತಿ ತಿಳಿಸಿದೆ. ಈ ಬಾರಿ ಸೋಲೋ ನೃತ್ಯಗಳ ಬದಲು ಸಮೂಹ ನೃತ್ಯಕ್ಕೆ ಒತ್ತು ನೀಡಲಾಗಿದೆ. ಇದರಿಂದಾಗಿ ಜಿಲ್ಲೆಯ ನೃತ್ಯ ತಂಡಗಳಿಗೆ ಅವಕಾಶ ದೊರಕಿದಂತಾಗಲಿದೆ.

ರು.33 ಲಕ್ಷ ವೆಚ್ಚದಲ್ಲಿ ವೇದಿಕೆ!

ಮಡಿಕೇರಿ ದಸರಾ ಜನೋತ್ಸವ ಹಿನ್ನೆಲೆಯಲ್ಲಿ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸೆ.30ರಿಂದ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಗಾಂಧಿ ಮೈದಾನದಲ್ಲಿ ಬೃಹತ್‌ ವೇದಿಕೆ ಸಜ್ಜುಗೊಳ್ಳುತ್ತಿದೆ. ವೇದಿಕೆ, ಶಾಮಿಯಾನ, ಬೀದಿ ದೀಪಗಳು, ಗ್ಯಾಲರಿ, ಸೌಂಡ್‌ ಸಿಸ್ಟಮ್‌ ಸೇರಿದಂತೆ ರು.33ಲಕ್ಷ ವೆಚ್ಚದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಗಾಂಧಿ ಮೈದಾನದಲ್ಲಿ 4 ಸಾವಿರ ಮಂದಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಯುವ ದಸರಾ ವಿಶೇಷತೆ ಏನು?

ಸೆ.5ರಂದು ಯುವ ದಸರಾ ಕಾರ್ಯಕ್ರಮ ನಡೆಯಲಿದೆ. 3ಡಿ ತಂಡ ಯುವ ದಸರಾ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ. ಬನ್ನಿ ಮಂಟಪದಿಂದ ಜ.ತಿಮ್ಮಯ್ಯ ವೃತ್ತದ ವರೆಗೆ ರೋಡ್‌ ಶೋ ನಡೆಯಲಿದ್ದು, ಬೈಕ್‌ ಸ್ಟಂಟ್‌ ಕೂಡ ಇರಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಖ್ಯಾತ ನಿರೂಪಕರು ಯುವ ದಸರಾ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಲಿದ್ದಾರೆ. ಆಫ್ರಿಕಲ್‌ ಎಲ್‌ಇಡಿ ಡ್ರಮ್ಮಿಂಗ್‌ ತಂಡ ಆಗಮಿಸಲಿದೆ. ಇದರೊಂದಿಗೆ ದೇಹದಾಢ್ರ್ಯ ಪ್ರದರ್ಶನ ಜರುಗಲಿದೆ. ನಂತರ ಡಿಜೆ ಕೂಡ ಇರಲಿದೆ ಎಂದು ಯುವ ದಸರಾ ಸಂಚಾಲಕ ಸೋಮ್‌ ತಿಳಿಸಿದ್ದಾರೆ.

‘ಆರೋಗ್ಯ ಸಚಿವನಾಗಿ ಎಷ್ಟು ದಿನ ಇರ್ತಿನೋ ಗೊತ್ತಿಲ್ಲ‌, ಇದೊಂದು ಕೆಲಸ ಮಾಡೇ ಮಾಡ್ತಿನಿ’

ಗೌರವಧನ ಕಲಾವಿದರ ಖಾತೆಗೆ ಜಮಾ

ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಲಾ ತಂಡಗಳಿಗೆ ಕೆ2 ಸಾಫ್ಟ್‌ವೇರ್‌ ಪ್ರಕಾರ ಹಣವನ್ನು ಜಿಲ್ಲಾಧಿಕಾರಿ ಖಾತೆಯಿಂದ ನೇರವಾಗಿ ಫಲಾನುಭವಿಗೆ ವರ್ಗಾಯಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ದರ್ಶನ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!