
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಶನಿವಾರ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತವರಣದ ಜೊತೆಗೆ ಮಳೆ ಆರಂಭಗೊಂಡಿತ್ತು.
ಜಿಲ್ಲೆಯ ಮಂಗಳೂರು ನಗರದಲ್ಲಿ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. ಸುಳ್ಯ, ಕಡಬ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಉಳಿದಂತೆ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನವರೆಗೆ ಒಟ್ಟು 17.7 ಮಿಲಿ ಮೀಟರ್ ಮಳೆಯಾಗಿದೆ. ಉಳ್ಳಾಲ ತಾಲೂಕಿನಲ್ಲಿ 35.5 ಮಿಮೀ., ಸುಳ್ಯದಲ್ಲಿ 28.6 ಮಿಮೀ., ಮಂಗಳೂರಿನಲ್ಲಿ 18.6 ಮಿ.ಮೀ., ಕಡಬದಲ್ಲಿ 18.2 ಮಿಮೀ., ಮುಲ್ಕಿಯಲ್ಲಿ 16.5 ಮಿ.ಮೀ., ಬಂಟ್ವಾಳದಲ್ಲಿ 15.7 ಮಿ.ಮೀ., ಬೆಳ್ತಂಗಡಿಯಲ್ಲಿ 14.2 ಮಿ.ಮೀ., ಮೂಡುಬಿದಿರೆಯಲ್ಲಿ 12.9 ಮಿ.ಮೀ., ಪುತ್ತೂರಿನಲ್ಲಿ 9.5 ಮಿ.ಮೀ. ಮಳೆಯಾಗಿದೆ.
ನಗರದ ಹೊರವಲಯದ ವಾಮಂಜೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯ ಕೆತ್ತಿಕಲ್ಲು ಗುಡ್ಡ ಈ ಮಳೆಗೆ ಮತ್ತೆ ಕುಸಿದಿದ್ದು, ವಾಹನ ಸವಾರರದಲ್ಲಿ ಆತಂಕ ಶುರುವಾಗಿದೆ.
ಮಂಗಳೂರು-ಮೂಡುಬಿದಿರೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡ ಅಗೆಯಲಾಗಿದ್ದು, ಕಳೆದ ಮೂರು-ನಾಲ್ಕು ವರ್ಷಗಳಿಂದ ಈ ಗುಡ್ಡ ಮಳೆಗಾಲಕ್ಕೆ ಪದೇ ಪದೇ ಕುಸಿಯುತ್ತಿದೆ. ಕಳೆದ ಬಾರಿ ಗುಡ್ಡಕ್ಕೆ ಸಿಮೆಂಟ್ ಮಿಶ್ರಣ ಸ್ಪ್ರೇ ಮಾಡಲಾಗಿತ್ತು. ಆದರೆ ಈ ಬಾರಿ ಮತ್ತೆ ಗುಡ್ಡ ಕುಸಿತವಾಗಿ ಸಿಮೆಂಟ್ ಮಿಶ್ರಣ ಸಂಪೂರ್ಣ ಹಾನಿಯಾಗಿ ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ.
ಇದನ್ನೂ ಓದಿ: Karnataka weather: ರಾಜ್ಯದಲ್ಲಿ ಮುಂಗಾರು ಚುರುಕು: 4 ಜಿಲ್ಲೇಲಿ ಭಾರೀ ಮಳೆ, ಸಿಡಿಲಿಗೆ ರೈತ ಸಾವು!
ಮಣ್ಣು ತೆರವು ಕಾರ್ಯ ಆರಂಭಿಸಲಾಗಿದೆ. ಘಟನೆ ಹಿನ್ನಲೆಯಲ್ಲಿ ಒಂದು ಬದಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಈ ವರ್ಷ ಇನ್ನೂ ಬಿರುಸಿನ ಮಳೆ ಆಗಿಲ್ಲ. ಅದಾಗಲೇ ಗುಡ್ಡ ಕುಸಿದಿದ್ದು, ಮುಂದಿನ ಮಳೆಗೆ ಮತ್ತೆ ಗುಡ್ಡ ಕುಸಿಯುವ ಸಂಭವವಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ.
ಇದನ್ನೂ ಓದಿ: UT Khader: ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೇಲಿ ಮುಂಜಾನೆ 3ರವರೆಗೆ ಸಭೆ ನಡೆಸಿ ಅಚ್ಚರಿ ಮೂಡಿಸಿದ ಖಾದರ್!