Latest Videos

ಕೆಂಪೇಗೌಡ ಲೇಔಟ್‌ ನಿಧಾನಗತಿ ಕಾಮಗಾರಿ: ಬಿಡಿಎ ವಿರುದ್ಧ ಗರಂ

By Kannadaprabha NewsFirst Published Jun 29, 2024, 11:58 PM IST
Highlights

ಕೆಂಪೇಗೌಡ ಲೇಔಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ನಿಧಾನಗತಿ ಮತ್ತು ಮೂಲಸೌಕರ್ಯಗಳ ಕೊರತೆ ಕುರಿತು ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿಯು ಬಿಡಿಎ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ಬೆಂಗಳೂರು (ಜೂ.29): ಕೆಂಪೇಗೌಡ ಲೇಔಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ನಿಧಾನಗತಿ ಮತ್ತು ಮೂಲಸೌಕರ್ಯಗಳ ಕೊರತೆ ಕುರಿತು ಕರ್ನಾಟಕ ವಿಧಾನಸಭೆಯ ಅರ್ಜಿ ಸಮಿತಿಯು ಬಿಡಿಎ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಡಾವಣೆಯಲ್ಲಿ ಹಂಚಿಕೆಯಾಗಿರುವ 26 ಸಾವಿರ ನಿವೇಶನಗಳಲ್ಲಿ ಕೇವಲ 26 ಮನೆಗಳನ್ನು ಮಾತ್ರ ನಿರ್ಮಿಸಲಾಗಿದೆ. ಕಡಿಮೆ ಮನೆಗಳ ನಿರ್ಮಾಣವಾಗಿರುವುದಕ್ಕೆ ಬಿಡಿಎ ಮೂಲಸೌಕರ್ಯಗಳ ಕೊರತೆ ಕಾರಣ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ವಿಚಾರಣೆಯಲ್ಲಿ ಬಿಡಿಎ ಆಯುಕ್ತರು ಖುದ್ದು ಹಾಜರಾಗಿ ಸಮಜಾಯಿಷಿ ನೀಡಬೇಕೆಂದು ಸೂಚನೆ ನೀಡಿದೆ.

ಸೆಪ್ಟೆಂಬರ್ 2023ನಲ್ಲಿ ಸಮಿತಿ ಮುಂದೆ ಪ್ರಾಧಿಕಾರ ಒಪ್ಪಿಕೊಂಡಂತೆ ಹಂತ ಹಂತವಾಗಿ ಈಗಾಗಲೇ ಬಡಾವಣೆಯ 9 ಬ್ಲಾಕ್ ಗಳಲ್ಲೂ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರಬೇಕಾಗಿತ್ತು ಅಥವಾ ಪೂರ್ಣಗೊಳ್ಳುವ ಹಂತದಲ್ಲಿ ಇರಬೇಕಾಗಿತ್ತು, ಬಡಾವಣೆಯ ಕೇವಲ ಮೂರು ಬ್ಲಾಕ್ ಗಳು ಭಾಗಶಃ ಪೂರ್ಣಗೊಳ್ಳುವ ಸ್ಥಿತಿಯಲ್ಲಿದೆ ಎಂಬುದಕ್ಕೆ ತಮ್ಮದೇ ಸಮರ್ಥನೆಯನ್ನು ನೀಡಲು ಅಧಿಕಾರಿಗಳು ಮುಂದಾದರು. ಈ ಸಂದರ್ಭದಲ್ಲಿ ಪರಿಸ್ಥಿತಿ ಹೀಗಿದ್ದರೆ ಯಾವಾಗ ಕಾಮಗಾರಿಗಳನ್ನು ಮುಗಿಸುವುದು ಎಂಬ ಸಮಿತಿಯ ಪ್ರಶ್ನೆಗೆ ಬಿಡಿಎ ಅಧಿಕಾರಿಗಳು ನಿರುತ್ತರರಾದರು.

ರಾಜಕೀಯದವರು ಮಾಡದ ಕೆಲಸಗಳನ್ನು ಮಠಗಳು ಮಾಡಿವೆ: ಸಚಿವ ರಾಜಣ್ಣ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಆಯುಕ್ತರ ಅನುಪಸ್ಥಿತಿಯಿಂದಾಗಿ ಸರಿಯಾದ ಉತ್ತರವು ಸಿಗದೇ ಇದ್ದದರಿಂದ ಅಸಮಾಧಾನಗೊಂಡ ಸಮಿತಿಯ ಪದಾಧಿಕಾರಿಗಳು, ಅರ್ಜಿಯ ವಿಚಾರಣೆಯನ್ನು ಕಲಾಪದ ನಂತರ ತೆಗೆದುಕೊಳ್ಳಲು ತೀರ್ಮಾನಿಸಿದೆ. ಜೊತೆಗೆ ವಿಚಾರಣೆ ಸಂದರ್ಭದಲ್ಲಿ ಬಿಡಿಎ ಆಯುಕ್ತರು ಉಪಸ್ಥಿತರಿರಬೇಕೆಂದು ಸೂಚಿಸಿದೆ ಎಂದು ಎನ್‌ಪಿಕೆಎಲ್‌ ಮುಕ್ತ ವೇದಿಕೆಯ ಸೂರ್ಯಕಿರಣ್‌ ಮಾಹಿತಿ ನೀಡಿದ್ದಾರೆ.

ಮುಖ್ಯರಸ್ತೆ ನಿರ್ಮಾಣಕ್ಕೆ ಇದ್ದ ತಡೆ ನಿವಾರಣೆ: ಚಲ್ಲಘಟ್ಟದ ಸಮೀಪ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸಮ್ಮತಿ ನೀಡಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಾದು ಹೋಗಿರುವ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ಮೇಜರ್ ಆರ್ಟಿರಿಯಲ್‌ ರಸ್ತೆ(ಎಂಎಆರ್‌) ನಿರ್ಮಾಣಕ್ಕೆ ಇದ್ದ ತಡೆ ನಿವಾರಣೆಯಾಗಿದೆ.

ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಚಲ್ಲಘಟ್ಟ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣ ಅನಿವಾರ್ಯವಾಗಿತ್ತು. 2019ರಲ್ಲಿಯೇ ಅನುಮತಿ ಕೋರಿ ರೈಲ್ವೆ ಇಲಾಖೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪತ್ರ ಬರೆದಿತ್ತು. ಆದರೆ, ಆ ನಂತರ ಕೋವಿಡ್‌, ಎಂಎಆರ್‌ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಭೂಸ್ವಾಧೀನ ಮತ್ತು ಇತರೆ ಕಾರಣಗಳಿಂದ ರೈಲ್ವೆ ಇಲಾಖೆ ಅನುಮತಿ ಪಡೆಯಲು ವಿಳಂಬವಾಗಿತ್ತು. ಇದೀಗ ಕೆಳಸೇತುವೆ ನಿರ್ಮಾಣಕ್ಕೆ ಮೇ 30ರಂದು ರೈಲ್ವೆ ಇಲಾಖೆ ಸಮ್ಮತಿ ಸೂಚಿಸಿದ್ದು, ಆರ್‌ಯುಬಿ (ರೈಲ್ವೆ ಅಂಡರ್‌ ಬ್ರಿಡ್ಜ್‌) ಕಾಮಗಾರಿ ಆರಂಭಿಸಲು ಬಿಡಿಎ ಸಿದ್ಧತೆ ನಡೆಸಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿದ್ದು, ಡಿಕೆಶಿ ಇಬ್ಬರೂ ಕಾಂಗ್ರೆಸ್‌ನ ಎರಡು ಕಣ್ಣು ಇದ್ದ ಹಾಗೆ‌: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಸುಮಾರು ₹39 ಕೋಟಿ ವೆಚ್ಚದಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣವಾಗಲಿದ್ದು, ಮೇಜರ್‌ ಆರ್ಟೀರಿಯಲ್‌ ರಸ್ತೆ ನಿರ್ಮಾಣ ಮಾಡುತ್ತಿರುವ ಸ್ಟಾರ್‌ ಇನ್‌ಫೋಟೆಕ್‌ ಕಂಪನಿಯೇ ಈ ಕೆಳಸೇತುವೆ ನಿರ್ಮಾಣದ ಟೆಂಡರ್‌ ಪಡೆದುಕೊಂಡಿದೆ. ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ನಡುವೆ ಬರುವ ಚಲ್ಲಘಟ್ಟದಲ್ಲಿ ಈ ಕೆಳ ಸೇತುವೆಯು ಮೆಟ್ರೋ ನಿರ್ಮಿಸುತ್ತಿರುವ ಸುರಂಗ ಮಾರ್ಗವನ್ನು ಸಂಪರ್ಕಿಸಲಿದ್ದು, ಇದು ನಾಲ್ಕುಪಥದ ರಸ್ತೆಯಾಗಿರಲಿದೆ.

click me!