Dharwad: ಡಿಸಿ ಕಚೇರಿಯಲ್ಲಿ ನೌಕರನ ಆತ್ಮ*ತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಪ್ರಧಾನಿ ಮೋದಿಗೆ ಪತ್ರ ಬರೆದು ಕೈ ಕೊಯ್ದುಕೊಂಡ ನೌಕರ!

Published : Aug 18, 2026, 10:04 PM IST
DC Office

ಸಾರಾಂಶ

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಆಘಾತಕಾರಿ ತಿರುವು ಸಿಕ್ಕಿದೆ. ಸ್ನೇಹದ ಸೋಗಿನಲ್ಲಿ ಪರಿಚಯವಾದ ನೆರೆಹೊರೆಯವರು ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದೇ ಈ ಕೃತ್ಯಕ್ಕೆ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ.

ಧಾರವಾಡ ಜಿಲ್ಲಾಧಿಕಾರಿ (ಡಿಸಿ) ಕಚೇರಿ ಸಭಾಂಗಣದಲ್ಲಿ ನೌಕರನೊಬ್ಬ ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಮೊದಲು ಇದೊಂದು ಸಾಮಾನ್ಯ ಘಟನೆ ಅಥವಾ ಕಚೇರಿಯ ಒತ್ತಡದಿಂದ ನಡೆದಿದ್ದಿರಬಹುದು ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಪ್ರಕರಣಕ್ಕೆ ಅತ್ಯಂತ ಆಘಾತಕಾರಿ ಹಾಗೂ ರೋಚಕ ಟ್ವಿಸ್ಟ್ ದೊರೆತಿದೆ.

ಘಟನೆಯ ಹಿನ್ನೆಲೆ ಏನು?

ಆತ್ಮಹತ್ಯೆಗೆ ಯತ್ನಿಸಿದ ನೌಕರನನ್ನು ಶಿವಪ್ರಸಾದ್ ಪಾಟೀಲ್ ಎಂದು ಗುರುತಿಸಲಾಗಿದೆ. ಮೂಲತಃ ಬೆಳಗಾವಿಯ ರಾಮತೀರ್ಥನಗರದ ನಿವಾಸಿಯಾಗಿರುವ ಶಿವಪ್ರಸಾದ್, ಸದ್ಯ ಧಾರವಾಡದ ಕಲ್ಯಾಣ ನಗರದಲ್ಲಿ ವಾಸವಾಗಿದ್ದು, ಖಾದಿ ಗ್ರಾಮೋದ್ಯೋಗ ಇಲಾಖೆಯಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಧಾರವಾಡದ ಡಿಸಿ ಕಚೇರಿಯ ಸಭಾಂಗಣದಲ್ಲಿದ್ದಾಗ ಇವರು ಇದ್ದಕ್ಕಿದ್ದಂತೆ ಚಾಕುವಿನಿಂದ ತಮ್ಮ ಕೈ ಕೊಯ್ದುಕೊಂಡು ರಕ್ತಸ್ರಾವ ಮಾಡಿಕೊಂಡಿದ್ದರು. ತಕ್ಷಣ ಜಾಗರೂಕರಾದ ಸಿಬ್ಬಂದಿ ಹಾಗೂ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಸದ್ಯ ಶಿವಪ್ರಸಾದ್ ಚೇತರಿಸಿಕೊಂಡು ಸುರಕ್ಷಿತವಾಗಿದ್ದಾರೆ.

ಸ್ನೇಹದ ಹೆಸರಿನಲ್ಲಿ ಶುರುವಾಯ್ತು ಕಿರುಕುಳ!

ಶಿವಪ್ರಸಾದ್ ವಾಸವಿದ್ದ ರೂಮ್‌ ಪಕ್ಕದಲ್ಲೇ ಸಂಗಪ್ಪ ತೇಲಿ, ನೇತ್ರಾ ಪೂಜಾರ್ ಹಾಗೂ ಸುಮಾ ಪೂಜಾರ್ ಎಂಬ ಯುವತಿಯರು ವಾಸವಾಗಿದ್ದರು. ಆರಂಭದಲ್ಲಿ ಶಿವಪ್ರಸಾದ್ ಅವರನ್ನು "ಸಾರ್" ಎಂದು ಗೌರವದಿಂದ ಪರಿಚಯ ಮಾಡಿಕೊಂಡಿದ್ದ ಈ ಮೂವರು, ಕ್ರಮೇಣ ಅವರೊಂದಿಗೆ ನಿಕಟ ಸ್ನೇಹ ಬೆಳೆಸಿಕೊಂಡಿದ್ದರು. ಆದರೆ, ದಿನಗಳು ಕಳೆದಂತೆ ಈ ಸ್ನೇಹ ವಿಷವಾಗಿ ಬದಲಾಯಿತು. ಆ ಮೂವರು ಶಿವಪ್ರಸಾದ್ ಅವರನ್ನು ವೈಯಕ್ತಿಕವಾಗಿ ಹಿಯಾಳಿಸಲು ಪ್ರಾರಂಭಿಸಿದರು. "ನೀನು ಅನುಕಂಪದ ಆಧಾರದ ಮೇಲೆ ನೌಕರಿ ಪಡೆದ ಅನಕ್ಷರಸ್ಥ" ಎಂದು ಪದೇ ಪದೇ ಚುಚ್ಚುಮಾತುಗಳಿಂದ ನಿಂದಿಸುತ್ತಿದ್ದರು. ಇಷ್ಟಕ್ಕೇ ನಿಲ್ಲದೆ, ಶಿವಪ್ರಸಾದ್ ಅವರು ತಮ್ಮ ಸ್ವಂತ ಕೊಠಡಿಯಲ್ಲಿ (ರೂಮ್‌) ಕಾಲ ಕಳೆಯುತ್ತಿದ್ದ ಕ್ಷಣಗಳ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಲು ತೊಡಗಿದರು.

ಪ್ರಧಾನಿ ಮೋದಿಗೆ ಪತ್ರ; ವಾಟ್ಸಾಪ್ ಗ್ರೂಪ್‌ನಲ್ಲಿ ಪೋಸ್ಟ್!

ಪಕ್ಕದ ಕೊಠಡಿಯವರ ನಿರಂತರ ಮಾನಸಿಕ ಕಿರುಕುಳ ಮತ್ತು ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆಯಿಂದ ಶಿವಪ್ರಸಾದ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇನ್ನು ಬದುಕಲು ಸಾಧ್ಯವಿಲ್ಲ ಎಂಬ ಹಂತಕ್ಕೆ ತಲುಪಿದ ಅವರು, ನೇರವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಣ್ಣೀರಿನ ಪತ್ರವೊಂದನ್ನು ಬರೆದಿದ್ದಾರೆ ಎನ್ನಲಾಗಿದೆ.

ಇವರೇ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದ ಸಂತ್ರಸ್ತ!

ನನ್ನ ಸಾವಿಗೆ ಸಂಗಪ್ಪ ತೇಲಿ, ನೇತ್ರಾ ಪೂಜಾರ್ ಮತ್ತು ಸುಮಾ ಪೂಜಾರ್ ಅವರೇ ಕಾರಣ. ಅವರು ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ನನ್ನ ಸಾವಿನ ನಂತರ ನನ್ನ ಕುಟುಂಬಕ್ಕೆ ನೀವೇ ನ್ಯಾಯ ಕೊಡಿಸಬೇಕು," ಎಂದು ಪ್ರಧಾನಿಗಳಿಗೆ ಮನವಿ ಮಾಡಿದ್ದರು. ಈ ಪತ್ರವನ್ನು ಬರೆದ ನಂತರ, ಅದನ್ನು ತಮ್ಮ ಕಚೇರಿಯ ಅಧಿಕೃತ ವಾಟ್ಸಾಪ್ ಗ್ರೂಪ್‌ಗೆ ಪೋಸ್ಟ್ ಮಾಡಿ, ಬಳಿಕ ಡಿಸಿ ಕಚೇರಿಯಲ್ಲಿಯೇ ಚಾಕುವಿನಿಂದ ಕೈ ಕೊಯ್ದುಕೊಂಡಿದ್ದರು.

ಪೊಲೀಸರ ತನಿಖೆ ಚುರುಕು!

ಕಚೇರಿಯ ವಾಟ್ಸಾಪ್ ಗ್ರೂಪ್‌ನಲ್ಲಿ ಪತ್ರ ನೋಡಿ ಸಿಬ್ಬಂದಿ ಆತಂಕಗೊಳ್ಳುವಷ್ಟರಲ್ಲಿ ಈ ದುರಂತ ಸಂಭವಿಸಿತ್ತು. ಸದ್ಯ ಶಿವಪ್ರಸಾದ್ ಅಪಾಯದಿಂದ ಪಾರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪತ್ರದಲ್ಲಿ ಹೆಸರಿಸಲಾದ ಸಂಗಪ್ಪ ತೇಲಿ, ನೇತ್ರಾ ಪೂಜಾರ್ ಮತ್ತು ಸುಮಾ ಪೂಜಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಖಾಸಗಿ ವಿಡಿಯೋ ಬೆದರಿಕೆ ಮತ್ತು ಮಾನಸಿಕ ಕಿರುಕುಳದ ಕೋನದಲ್ಲಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

PREV
Read more Articles on
click me!

Recommended Stories

ಕರಾವಳಿ ರೈಲ್ವೆ ಬೇಡಿಕೆಗಳು: ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಲು ಮನವಿ
ಬೆಂಗಳೂರು ಇಸ್ಕಾನ್ ವಿವಾದ, ಯಾರಿಗೆ ಒಲಿಯಲಿದೆ ರಾಜಾಜಿನಗರದ ಹರೇ ಕೃಷ್ಣ ಮಂದಿರ?  ಹೊಸ ಪೀಠ ರಚನೆಗೆ ಸುಪ್ರೀಂ ಸಮ್ಮತಿ!