
ಬೆಂಗಳೂರು (ಏ.16): ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಎರಡೂವರೆ ವರ್ಷಕ್ಕೆ ಸಚಿವ ಸಂಪುಟ ಪುನಾರಚನೆಯಾಗುತ್ತದೆ ಎಂದು ಬಹುತೇಕರು ತಿಳಿದಿದ್ದರು. ಈಗ ಮೂರು ವರ್ಷಗಳಾಗುತ್ತಿದ್ದು, ಶಾಸಕರು ಸಚಿವ ಸ್ಥಾನ ಕೇಳುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಮ್ಮ ಸರ್ಕಾರ ಬಂದು ಮೂರು ವರ್ಷಗಳಾಗುತ್ತಿದೆ.
ಎರಡೂವರೆ ವರ್ಷಕ್ಕೆ ಸಚಿವ ಸಂಪುಟ ಪುನಾರಚನೆಯಾಗುತ್ತದೆ ಎಂದು ಬಹುತೇಕರು ತಿಳಿದಿದ್ದರು. ಹೀಗಾಗಿ ಶಾಸಕರು ಸಹಜವಾಗಿ ಸಚಿವರಾಗಬೇಕು ಎಂಬ ಆಸೆಯಿಂದಿದ್ದಾರೆ. ಅವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ, ಈ ವಿಚಾರವಾಗಿ ಯಾರೂ ಮಾಧ್ಯಮಗಳ ಮುಂದೆ ಮಾತನಾಡಬಾರದು. ನಮ್ಮ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಸೇರಿ ಇತರ ನಾಯಕರನ್ನು ಶಾಸಕರು ಭೇಟಿ ಮಾಡಿದರೆ ತಪ್ಪೇನು ಇಲ್ಲ ಎಂದರು.
ಸಚಿವ ಸಂಪುಟ ಪುನಾರಚನೆ ಮಾಡಿದರೆ ಹಿರಿಯರನ್ನು ಸಂಪುಟದಿಂದ ಕೈಬಿಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಹೊಸಬರು ಸಂಪುಟಕ್ಕೆ ಬರಬೇಕಾದರೆ ಈಗಿರುವ ಕೆಲವರು ಹೊರಗೆ ಹೋಗಬೇಕಾಗುತ್ತದೆ. ಯಾರನ್ನು ಬಿಡಬೇಕು. ಯಾರನ್ನು ತೆಗೆದುಕೊಳ್ಳಬೇಕು ಎನ್ನುವುದು ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದರು.
ಸೋಲೂರು ಆಡಳಿತಾತ್ಮಕವಾಗಿ ಮಾಗಡಿ ತಾಲೂಕಿನಿಂದ ನೆಲಮಂಗಲ ತಾಲೂಕಿಗೆ ಅಧಿಕೃತ ಸೇರ್ಪಡೆಯಾಗಿದ್ದು, ಶಾಸಕ ಎನ್.ಶ್ರೀನಿವಾಸ್ರವರ ನಿರಂತರ ಪ್ರಯತ್ನದ ಫಲವಾಗಿ ಮಾತ್ರ ಈ ಕೆಲಸವಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸೋಲೂರು ಸೇರ್ಪಡೆ ಹಾಗೂ ದಾಖಲಾತಿಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೆಲಮಂಗಲಕ್ಕೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಹಳಷ್ಟು ಯೋಜನೆಗಳನ್ನು ನೀಡಿದೆ. ಶಾಸಕರ ಕ್ರೀಯಾಶೀಲತೆಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ. ಸೋಲೂರು ಸೇರ್ಪಡೆಯಲ್ಲಿ ಸಚಿವರು, ಸರ್ಕಾರದ ಪ್ರಯತ್ನ ಶೇ.10ರಷ್ಟಿದ್ದರೆ, ಶಾಸಕ ಶ್ರೀನಿವಾಸ್ ಪ್ರಯತ್ನ ಶೇ.90ರಷ್ಟಿದೆ. ಸೋಲೂರು ದಾಖಲಾತಿಗಳು ನೆಲಮಂಗಲಕ್ಕೆ ಹಸ್ತಾಂತರವಾಗಿದ್ದು ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ಶೀಘ್ರದಲ್ಲಿ ನೆಲಮಂಗಲಕ್ಕೆ ಬರಲಿವೆ ಎಂದು ಹೇಳಿದರು.