
ಚಾಮರಾಜನಗರ (ಜೂ. 26): ಮಲೆಮಹದೇಶ್ವರ ವನ್ಯಧಾಮದ ಮೀಸಲು ಅರಣ್ಯ ವಲಯದಲ್ಲಿ ತಾಯಿ ಹುಲಿ ಮತ್ತು ಅದರ 4 ಮರಿಗಳ ಅಸಹಜ ಸಾವು ನಡೆದಿದೆ. ಈ ಘಟನೆ ಅರಣ್ಯ ಇಲಾಖೆ ಮತ್ತು ಪ್ರಾಣಿಪ್ರೇಮಿಗಳಲ್ಲಿ ಆತಂಕ ಉಂಟುಮಾಡಿದ್ದು, ಯಾರೋ ಕಿಡಿಗೇಡಿಗಳು ವಿಷಪ್ರಾಶನ ಮಾಡಿ ಸಾಯಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಈ ಘಟನೆ ನಡೆದ ತಕ್ಷಣವೇ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ತ್ವರಿತ ತನಿಖೆಗೆ ಪ್ರಾರಂಭವಾಗಿದೆ. ಈ ನಿಷ್ಕರಣೆಯ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಪಿಸಿಸಿಎಫ್ (ಪ್ರಿನ್ಸಿಪಲ್ ಚೀಫ್ ಕಾಂಸರ್ವೇಟರ್ ಆಫ್ ಫಾರೆಸ್ಟ್) ಅವರ ನೇತೃತ್ವದಲ್ಲಿ ತಕ್ಷಣ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
ಅರಣ್ಯ ಸಚಿವ ಖಂಡ್ರೆ ಅವರು ಮಾಧ್ಯಮಗಳೊಂದಿಗೆ '5 ಹುಲಿಗಳ ಅಸಹಜ ಸಾವಿಗೆ ಕಾರಣವಾದ ವಿಷಯವನ್ನು ಆಳವಾಗಿ ಪರಿಶೀಲಿಸಿ, ತನಿಖೆ ನಡೆಸಬೇಕು. ಅರಣ್ಯ ಸಿಬ್ಬಂದಿಯಿಂದ ನಿರ್ಲಕ್ಷ್ಯ ನಡೆದಿದೆ ಎಂಬುದಾದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ವಿಷಪ್ರಾಶನದ ಫಲಿತಾಂಶವಲ್ಲವೆಂಬುದು ಸಾಬೀತಾದರೆ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಹುಲಿಗಳ ಅಸಹಜ ಸಾವು ಕೇಸ್ 3 ದಿನದೊಳಗೆ ವರದಿ ಸಲ್ಲಿಕೆಗೆ ಸಚಿವರ ಆದೇಶ
ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು 4 ಮರಿಗಳು ಅಸಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಕ್ತ ತನಿಖೆ ಮಾಡುವಂತೆ ಸಚಿವ ಈಶ್ವರ ಖಂಡ್ರೆ ಅವರು ಲಿಖಿತ ಸೂಚನೆ ನೀಡಿದ್ದಾರೆ. 5 ಹುಲಿಗಳು ಸಾವಿಗೀಡಾಗಿರುವುದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕು.
ಕರ್ನಾಟಕ 563 ಹುಲಿಗಳೊಂದಿಗೆ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಹುಲಿ ಸಂರಕ್ಷಣೆಗೆ ಹೆಸರಾಗಿರುವ ರಾಜ್ಯದಲ್ಲಿ, ಒಂದೇ ದಿನ 5 ಹುಲಿಗಳು ಅಸಹಜ ಸಾವಿಗೀಡಾಗಿರುವುದು ಅತ್ಯಂತ ನೋವು ತಂದಿದೆ. ಸ್ಥಳ ತನಿಖೆ ಕೈಗೊಂಡು, ಅರಣ್ಯ ಸಿಬ್ಬಂದಿ ನಿರ್ಲಕ್ಷ್ಯ ಇದ್ದರೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಸ್ಪರ್ಶ, ವಿಷ ಪ್ರಾಷನ ಇತ್ಯಾದಿ ಸಾವಿಗೆ ಕಾರಣವಾಗಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. 3 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ.