
ಶಿವಮೊಗ್ಗ: ಅನೈತಿಕ ಸಂಬಂಧ ಮತ್ತು ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಅವರ ಕಥೆ ದಿನದಿಂದ ದಿನಕ್ಕೆ ಒಂದೊಂದಾಗಿ ಹೊರಬರುತ್ತಿದೆ. ಜ್ಯೋತಿಷ್ಯದ ಮೂಲಕ ಕೋಟಿ ಕೋಟಿ ಸಂಪಾದಿಸಿದ್ದ ಭಟ್ಟರು ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾದ ಸುಚಿತ್ರಾಗೆ ಐಷರಾಮಿ ಕಾರು, ಬಂಗಲೆ ಇನ್ನಿತರ ಆಸ್ತಿ ಕೊಡಿಸಿದ್ದ ಅಂಶ ಹೊರಬಂದಿದೆ.
ಶಿವಮೊಗ್ಗದ ಪಂಪ ನಗರದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಸುಚಿತ್ರಾ ಜೊತೆ ಕಳೆದ 9 ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇದೇ ಕಟ್ಟಡದಲ್ಲಿ ಕನಸು ಎಂಟರ್ಪ್ರೈಸಸ್ ಹೆಸರಿನ ಜ್ಯೋತಿಷಿ ಕೇಂದ್ರ ಮತ್ತು ಸಂಬಂಧಿಸಿದ ಬಿಪಿಓ ನಡೆಸುತ್ತಿದ್ದ. ಈ ಕಟ್ಟಡದ ಮೇಲ್ ಮಹಡಿಯಲ್ಲಿ ಕಮಲಾಕರ ಭಟ್ ಮತ್ತು ಸುಚಿತ್ರಾ ಕುಟುಂಬ ವಾಸವಾಗಿತ್ತು. ಮನೆಯಲ್ಲಿ ಸುಚಿತ್ರ ಮತ್ತು ಕಮಲಾಕರ ಭಟ್ ಒಂದು ಕೋಣೆಯಲ್ಲಿ ವಾಸವಾಗಿದ್ದರೆ, ಆಕೆಯ ಮಕ್ಕಳು ಮತ್ತೊಂದು ಕೋಣೆಯಲ್ಲಿ ವಾಸವಾಗಿದ್ದರು. ಅವರಿಬ್ಬರ ಅನೈತಿಕ ಸಂಸಾರಕ್ಕೆ ಈ ಮನೆ ಸಾಕ್ಷಿಯಾಗಿತ್ತು.
ಈ ಬಿಪಿಓ ಕೇಂದ್ರದಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವಳು ಕೆಲಸ ಬಿಟ್ಟ ಬಳಿಕ ಸುಚಿತ್ರಾಳನ್ನು ಇಲ್ಲಿ ಕೆಲಸಕ್ಕೆ ಸೇರಿಸಿದ್ದಳು ಎಂದು ತಿಳಿದುಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪತಿ ಮಹೇಶ್ ಜೊತೆ ಜಗಳವಾಡಿಕೊಂಡು ಶಿವಮೊಗ್ಗಕ್ಕೆ ತನ್ನ ಮಕ್ಕಳೊಡನೆ ಬಂದಿದ್ದಳು. ಬಳಿಕ ಜ್ಯೋತಿಷಿ ಕಮಲಾಕಾರ್ ಭಟ್ ಮತ್ತು ತಾಯಿ ಸುಚಿತ್ರ ನಡುವೆ ಕಳೆದ 9 ತಿಂಗಳಿಂದ ಅಕ್ರಮ ಸಂಬಂಧ ಇದ್ದ ಮಾಹಿತಿಯನ್ನು ಈ ಬಗ್ಗೆ ಸುಚಿತ್ರ ಪುತ್ರಿ ಸುಮಶ್ರೀ ಬಹಿರಂಗಪಡಿಸಿದ್ದಾಳೆ.
ತಾಯಿ ಸುಚಿತ್ರ ಜೊತೆ ನಾನು ಮತ್ತು ತಂಗಿ ಶಿವಮೊಗ್ಗ ಬಂದು ಇಲ್ಲಿಯೇ ಶಾಲೆಗೆ ಸೇರಿದ್ದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ನಿಧಾನವಾಗಿ ನನ್ನ ತಾಯಿ ಮತ್ತು ಕಮಲಾಕರ್ ಭಟ್ ನಡುವೆ ಸಂಬಂಧ ಬೆಳೆದಂತೆ ನನಗೆ ಬಯ್ಯ ತೊಡಗಿದ್ದಳು. ನೀನು ನಿನ್ನ ತಂದೆ ಬಳಿ ಹೋಗು, ಇಲ್ಲವಾದರೆ ವಿಷ ಕುಡಿಸಿ ಸಾಯಿಸುವುದಾಗಿ ಹೆದರಿಸಿದ್ದಳು. ಹೀಗಾಗಿ ನನ್ನ ತಂದೆಗೆ ಕರೆ ಮಾಡಿ ನನ್ನನ್ನು ಇಲ್ಲಿಂದ ಕರೆದುಕೊಂಡು ಹೋಗು, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದೆ. ಅದರಂತೆ ಫೆಬ್ರವರಿ 1ರಂದು ಶಿವಮೊಗ್ಗದಿಂದ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಅಲ್ಲಿಂದ ರಾತ್ರಿ 7.30ರ ನಂತರ ಮನೆಗೆ ಹೋಗಿದ್ದೆ. ದೊಡ್ಡಪ್ಪ ದೊಡ್ಡಮ್ಮ ಸೇರಿದಂತೆ ಎಲ್ಲರೂ ಪ್ರೀತಿಯಿಂದ ನನ್ನನ್ನು ಬರ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ರಾತ್ರಿ 10.30ರ ವೇಳೆ ತಾಯಿ ಸುಚಿತ್ರ ಕಾರಿನಲ್ಲಿ ಐದಾರು ಜನ ಜೊತೆಗೂಡಿ ಬಂದು ಏಕಾಏಕಿ ಮನೆಗೆ ನುಗ್ಗಿದರು. ಈ ಸಂದರ್ಭದಲ್ಲಿ ತಂದೆಯ ಮೇಲೆ ಹಲ್ಲೆ ಮಾಡಿದರು, ದೊಡ್ಡಪ್ಪ ವಸಂತ್ ನನ್ನು ಚಾಕುವಿನಿಂದ ಚುಚ್ಚಿ ಕೊ*ಲೆ ಮಾಡಿದ್ದಾರೆ. ನನ್ನ ತಾಯಿ ಮುಸ್ಲಿಂ ಯುವಕರ ಜೊತೆ ಬಂದಿದ್ದರು, ಹಿಂದಿಯಲ್ಲಿ ನಮ್ಮ ತಂದೆಯನ್ನು ಬಿಡಬೇಡ ಎಂದು ಅವರಿಗೆ ಹೇಳುತ್ತಿದ್ದರು. ದೊಡ್ಡಪ್ಪನನ್ನು ಕೊ*ಲೆ ಮಾಡಿ ತಂದೆಗೆ ಚಾಕುವಿನಿಂದ ಇರಿದು ಬಿಡಿಸಲು ಬಂದ ಮತ್ತೊಬ್ಬರಿಗೂ ಚಾಕುವಿನಿಂದ ಇರಿಯಲು ಮುಂದಾಗಿದ್ದರು. ಆ ವೇಳೆಗೆ ಪೊಲೀಸರು ಬಂದರು ಎಂದು ನಡೆದ ಘಟನೆಯನ್ನು ಮಹೇಶ್ ಪುತ್ರಿ ಸುಮಶ್ರೀ ಬಿಚ್ಚಿಟ್ಟಿದ್ದಾರೆ.
ನನ್ನ ದೊಡ್ಡಪ್ಪನಿಗೆ ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಏನು ಅರಿಯದ ಮಕ್ಕಳು ತಬ್ಬಲಿಯಾಗಿದ್ದಾರೆ. ನಮ್ಮ ತಾಯಿಯ ಅನೈತಿಕ ಸಂಬಂಧದ ಪರಿಣಾಮ ನನ್ನ ದೊಡ್ಡಮ್ಮ ವಿಧವೆಯಾಗಿದ್ದಾರೆ. ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ, ನನ್ನ ತಂದೆಗೂ ಚಾಕುವಿನ ಏಟು ಬಿದ್ದಿದೆ ಎಂದು ಸುಮಶ್ರೀ ಅಳಲು ತೋಡಿಕೊಂಡಿದ್ದಾರೆ.
ಸ್ವಾಮೀಜಿ ನನಗೆ 8 ವರ್ಷದಿಂದ ಪರಿಚಯ. ಅವರ ಪತ್ನಿ ಕೊರೋನಾದಲ್ಲಿ ಸಾವನಪ್ಪಿದ್ದರು. ಸುಚಿತ್ರ ನಮ್ಮ ಊರ ಕಡೆಯವರು ನಮ್ಮ ಸಂಬಂಧಿಕರೆಂದು ಹೇಳಿದ್ದರು. ಕಮಲಕರ ಭಟ್ಟರ ಪತ್ನಿ ನಮಗೆ ಪರಿಚಯ. ಮುದುವಾಳದಲ್ಲಿ ಗೋಶಾಲೆ ಮಾಡಿದಾಗ ನಾವು ಅಲ್ಲಿ ಕೆಲಸ ಮಾಡಿಸ್ತಾ ಇದ್ವಿ. ಸುಚಿತ್ರ ಅವರು ಬಂದ ಮೇಲೆ ಎರಡು ಮೂರು ಕಾರು ತೆಗೆದುಕೊಂಡಿದ್ದಾರೆ. ಬುಲೆಟ್ ಬೈಕ್ ಕೂಡ ತೆಗೆದುಕೊಂಡಿದ್ದಾರೆ. ಅವರು ಜೊತೆಗೆ ಎಲ್ಲ ಓಡಾಡುತ್ತಿದ್ದರು, ಟೂರ್ ಎಲ್ಲ ಮಾಡ್ತಾ ಇದ್ದರು ಎಂದು ಪಂಪನಗರದಲ್ಲಿ ಕಮಲಾಕರ ಭಟ್ಟರಿಗೆ ಮನೆ ಬಾಡಿಗೆ ನೀಡಿದ್ದ ನಾಗೇಶ್ ತಿಳಿಸಿದ್ದಾರೆ.
ಕಮಲಕರ ಭಟ್ಟ ಅವರು ನಮ್ಮ ಅಕ್ಕನ ಮಗನ ಮನೆಯಲ್ಲಿ ಬಾಡಿಗೆಗೆ ನಾಲ್ಕು ವರ್ಷಗಳಿಂದ ಇದ್ದರು. ಮುದುವಾಳದಲ್ಲಿ 10 ಎಕರೆ ಜಮೀನು ತೆಗೆದುಕೊಂಡಿದ್ದರು. ನಮ್ಮ ಅಂಗಡಿ ಮಳಿಗೆಯಲ್ಲೇ ಕಾಲ್ ಸೆಂಟರ್ ಮಾಡಿ ಇಲ್ಲೇ ಇದ್ದರು. ಎಲ್ಲರಿಗೂ ಸಹಾಯ ಮಾಡುವ ಸ್ವಭಾವ ಇತ್ತು. ಕಾಲ್ ಸೆಂಟರ್ ಕಟ್ಟಡ ಮಹಡಿ ಮನೆಯಲ್ಲಿ ಸುಚಿತ್ರಾ ಜೊತೆ ವಾಸವಿದ್ದರು. ಬಾಡಿಗೆ ಎಲ್ಲ ಚೆನ್ನಾಗಿ ಕೊಟ್ಟಿದ್ದಾರೆ, ಯಾವುದೇ ತೊಂದರೆ ಇರಲಿಲ್ಲ. ಕಮಲಾಕರ ಭಟ್ಟರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಮೊನ್ನೆ ರಾತ್ರಿ ಏನು ಗಲಾಟೆ ಆಯ್ತಂತೆ, ಹೋದೋರು ಇನ್ನೂ ಬಂದಿಲ್ಲ. ಆಕಾಶ್ ಕಾಲ್ ಸೆಂಟರ್ ಕೆಲಸಕ್ಕೆ ಇದ್ದ ಹುಡುಗ. ಅನ್ನಕ್ಕಾಗಿ ಬಂದ ಹುಡುಗ ಅವರ ಜೊತೆಯಲ್ಲಿ ಹೋಗಿದ್ದಕ್ಕೆ ಆರೋಪಿಯಾಗಿದ್ದಾರೆ. ಸುಚಿತ್ರಗೆ ಸಹಾಯ ಮಾಡುವ ಉದ್ದೇಶದಿಂದ ಸ್ವಾಮೀಜಿ ಹೋಗಿದ್ದಾರೆ. ಈಗ ಈ ರೀತಿಯಾಗಿದೆ ಎಂದು ತಿಳಿಸಿದ್ದಾರೆ.