
ಉತ್ತರ ಕನ್ನಡ (ಫೆ.06): ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಆತನ ಪ್ರೇಯಸಿ ಸುಚಿತ್ರಾ ಸೇರಿಕೊಂಡು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರೆಕೊಪ್ಪದಲ್ಲಿ ವಸಂತ ನಾಯ್ಕ್ ಎಂಬುವರನ್ನು ಬರ್ಬರ ಹತ್ಯೆಗೈದ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ನಿರ್ಲಕ್ಷ್ಯದ ಆರೋಪ ಕೇಳಿಬಂದ ಬೆನ್ನಲ್ಲೇ, ಕರ್ತವ್ಯ ಲೋಪದ ತನಿಖೆಗಾಗಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ. ಜೊತೆಗೆ, ಪ್ರಕರಣದ ಸಮಗ್ರ ತನಿಖೆಯ ಜವಾಬ್ದಾರಿಯನ್ನು ಶಿರಸಿ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ ಎಂದು ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ತಿಳಿಸಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ದೀಪನ್, ಪ್ರಕರಣದ ಗಂಭೀರತೆ ಮತ್ತು ಸಾರ್ವಜನಿಕರ ಆಕ್ರೋಶವನ್ನು ಪರಿಗಣಿಸಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಿದರು. 'ಈ ಘಟನೆ ನಡೆದ ದಿನ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮತ್ತು ಪ್ರಕರಣವನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ. ತನಿಖೆಯ ದೃಷ್ಟಿಯಿಂದ ಮತ್ತು ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂಬ ಉದ್ದೇಶದಿಂದ ಸದ್ಯ ಓರ್ವ ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ಗಣಪತಿ ಭಂಟ್ ಕಾರವಾರ ನಗರಕ್ಕೆ ವರ್ಗಾವಣೆ ಮತ್ತು ಓರ್ವ ಹೆಡ್ ಕಾನ್ಸ್ಟೇಬಲ್ (HC) ರಾಘವೇಂದ್ರ ನಾಯ್ಕ್ ಅವರನ್ನು ಹಳಿಯಾಳ ಠಾಣೆಗೆ ವರ್ಗಾವಣೆ ಮಾಡಲಾಗಿದೆ' ಎಂದು ಸ್ಪಷ್ಟಪಡಿಸಿದರು.
ಮೃತ ವಸಂತ ನಾಯ್ಕ್ ಅವರ ಕುಟುಂಬಸ್ಥರು ಮಗಳ ರಕ್ಷಣೆ ಕೋರಿ ಮೊದಲೇ ಪೊಲೀಸರ ಗಮನಕ್ಕೆ ತಂದಿದ್ದರೂ, ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ, 'ಠಾಣೆಯಲ್ಲಿ ಯಾರಾದರೂ ನಿರ್ಲಕ್ಷ್ಯ ವಹಿಸಿದ್ದಾರೆಯೇ? ಕರ್ತವ್ಯ ಲೋಪವಾಗಿದೆಯೇ? ಎಂಬ ಬಗ್ಗೆಯೂ ಶಿರಸಿ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಇಲಾಖಾ ತನಿಖೆ ನಡೆಯಲಿದೆ. ತಪ್ಪಿತಸ್ಥರು ಕಂಡುಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು' ಎಂದು ಭರವಸೆ ನೀಡಿದರು.
ಆರೋಪಿಗಳಾದ ಸುಚಿತ್ರಾ ಮತ್ತು ಕಮಲಾಕರ್ ಭಟ್ ಅವರ ಹಿನ್ನೆಲೆಯನ್ನು ಕೆದಕುತ್ತಿರುವ ಪೊಲೀಸರಿಗೆ, ಇವರು ಬೇರೆಯವರಿಗೂ ಮೋಸ ಮಾಡಿರುವ ಶಂಕೆ ಮೂಡಿದೆ. 'ಈ ತಂಡವು ಕೇವಲ ಕೌಟುಂಬಿಕ ಕಲಹಕ್ಕೆ ಸೀಮಿತವಾಗಿದೆಯೇ ಅಥವಾ ಬೇರೆ ಯಾರಿಗಾದರೂ ಬ್ಲ್ಯಾಕ್ಮೇಲ್ (Blackmail) ಮಾಡಿ ಹಣ ಸುಲಿಗೆ ಮಾಡಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪೂರ್ವಾಪರ ಮತ್ತು ಸಂಪರ್ಕ ಜಾಲದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ' ಎಂದು ಎಸ್ಪಿ ಮಾಹಿತಿ ನೀಡಿದರು.
ತನಿಖೆಯ ವೇಳೆ ಹಲವು ಆಘಾತಕಾರಿ ಸಂಗತಿಗಳು ಬಯಲಾಗಿವೆ. ಆರೋಪಿ ಸುಚಿತ್ರಾ ಮತ್ತು ಆಕೆಯ ಪ್ರಿಯಕರ ಕಮಲಾಕರ್ ಭಟ್, ಮಗಳು ಸುಮಶ್ರೀಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬುದು ದೃಢಪಟ್ಟಿದೆ. ಮಗಳು ತಾಯಿಯ ಜೊತೆ ಇರಲು ನಿರಾಕರಿಸಿದ್ದರೂ, ಘಟನೆಯ ದಿನ ಬಲವಂತವಾಗಿ ಆಕೆಯನ್ನು ಕರೆದೊಯ್ಯಲು ಸುಚಿತ್ರಾ ಗ್ಯಾಂಗ್ ಮನೆಗೆ ನುಗ್ಗಿತ್ತು. ಇದನ್ನು ತಡೆಯಲು ಹೋದಾಗ ವಸಂತ ನಾಯ್ಕ್ ಅವರ ಹತ್ಯೆ ನಡೆದಿದೆ ಎಂದು ಎಸ್ಪಿ ವಿವರಿಸಿದರು. ಒಟ್ಟಾರೆಯಾಗಿ, ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಈಗ ಎಚ್ಚೆತ್ತುಕೊಂಡಿದ್ದು, ನಿಷ್ಪಕ್ಷಪಾತ ತನಿಖೆಗೆ ಮುಂದಾಗಿದೆ.