
ಅನೈತಿಕ ಸಂಬಂಧ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಕಥೆ ದಿನದಿಂದ ದಿನಕ್ಕೆ ಒಂದೊಂದಾಗಿ ಹೊರಬರುತ್ತಿದೆ. ಜ್ಯೋತಿಷ್ಯದ ಮೂಲಕ ಕೋಟಿ ಕೋಟಿ ಸಂಪಾದಿಸಿದ್ದ ಭಟ್ಟರು ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾದ ಸುಚಿತ್ರಾಗೆ ಐಷರಾಮಿ ಕಾರು, ಬಂಗಲೆ ಇನ್ನಿತರ ಆಸ್ತಿ ಕೊಡಿಸಿದ್ದ ಅಂಶ ಹೊರಬಂದಿದೆ. ಇದೀಗ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಶಿರಸಿ ಉಪವಿಭಾಗದ ಡಿವೈಎಸ್ಪಿ ಅವರಿಗೆ ವಹಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾಹಿತಿ ನೀಡಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಜೊತೆಗೆ ಪೊಲೀಸರಿಂದ ಯಾವುದೇ ನಿರ್ಲಕ್ಷ್ಯ ಅಥವಾ ಕರ್ತವ್ಯ ಲೋಪವಾಗಿದೆಯೇ ಎಂಬುದರ ಮೇಲೂ ಸಮಗ್ರ ತನಿಖೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಯ ದಿನ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿಯನ್ನೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಪ್ರಕರಣದ ತನಿಖೆಯ ದೃಷ್ಟಿಯಿಂದ, ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಹಾಗೂ ಹೆಡ್ ಕಾನ್ಸ್ಟೇಬಲ್ರನ್ನು ತಾತ್ಕಾಲಿಕವಾಗಿ ಜಿಲ್ಲೆಯಲ್ಲಿ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆ ಕ್ರಮ ಶುದ್ಧ ತನಿಖೆಗೆ ಅನುಕೂಲವಾಗುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಎಸ್ಪಿ ದೀಪನ್ ಎಂ.ಎನ್. ಸ್ಪಷ್ಟಪಡಿಸಿದರು. ಠಾಣೆಯಲ್ಲಿ ಯಾರಾದರೂ ಅಧಿಕಾರಿಗಳು ಅಥವಾ ಸಿಬ್ಬಂದಿಯಿಂದ ನಿರ್ಲಕ್ಷ್ಯ ನಡೆದಿದೆಯೇ, ಪ್ರಕರಣವನ್ನು ಸೂಕ್ತವಾಗಿ ನಿರ್ವಹಿಸಲಾಗಿದೆಯೇ ಎಂಬುದರ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ನಡೆಯಲಿದೆ ಎಂದು ಅವರು ಹೇಳಿದರು.
ಪ್ರಕರಣದ ಹಿನ್ನೆಲೆ ಕುರಿತು ಮಾತನಾಡಿದ ಎಸ್ಪಿ, ಆರೋಪಿ ಸುಚಿತ್ರಾ ಮತ್ತು ಕಮಲಾಕರ್ ಭಟ್ ಪುತ್ರಿ ಸುಮಶ್ರೀಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗುತ್ತಿತ್ತು. ಸುಚಿತ್ರಾ ಹಾಗೂ ತಂಡದವರೊಂದಿಗೆ ಸಂಬಂಧ ಬೇಡ ಎಂದು ಹಲವು ಬಾರಿ ಹೇಳಿದ್ದರೂ, ಅವರು ಬಿಡದೆ ಕಿರುಕುಳ ನೀಡುತ್ತಿದ್ದರು. ಘಟನೆಯ ದಿನವೂ ಸುಚಿತ್ರಾ ಮತ್ತು ಆಕೆಯ ತಂಡ ಕಮಲಾಕರ್ ಭಟ್ ಅವರ ಮನೆಗೆ ಬಂದು ಪುತ್ರಿ ಸುಮಶ್ರೀ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾಗ ಪರಿಸ್ಥಿತಿ ತೀವ್ರವಾಗಿ ಉದ್ವಿಗ್ನಗೊಂಡಿದ್ದು, ಇದೇ ಕೊಲೆ ಘಟನೆಗೆ ಕಾರಣವಾಯಿತೇ ಎಂಬ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ.
ಇದಲ್ಲದೆ, ಆರೋಪಿ ಸುಚಿತ್ರಾ ಮತ್ತು ಆಕೆಯ ತಂಡ ಇದೇ ರೀತಿಯಲ್ಲಿ ಇತರರನ್ನೂ ಬ್ಲ್ಯಾಕ್ಮೇಲ್ ಮಾಡಿದ್ದಾರೆಯೇ ಎಂಬ ಅಂಶವನ್ನೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿದಿದೆ ಎಂದು ಎಸ್ಪಿ ದೀಪನ್ ಎಂ.ಎನ್. ತಿಳಿಸಿದ್ದಾರೆ.