ಹಿರಿಯ ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರ್‌ ಇನ್ನಿಲ್ಲ

By Kannadaprabha NewsFirst Published Nov 25, 2019, 8:19 AM IST
Highlights

ಕಲ್ಯಾಣ ಕರ್ನಾಟಕದ ಹಿರಿಯ ಮತ್ತು ಕನ್ನಡ ಸಾರಸತ್ವ ಲೋಕದ ಅಹರ್ನಿಶಿ ಬರಹಗಾರ, ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ(78) ಭಾನುವಾರ ರಾತ್ರಿ 10 ಗಂಟೆಗೆ ಮನೆಯಲ್ಲಿ ನಿಧನರಾಗಿದ್ದಾರೆ. 

ಕಲಬುರಗಿ (ನ. 25): ‘ಯಾವ ಅಕ್ಷರದಿಂದ ಬರೆದು ತೋರಿಸಲಯ್ಯ ನನ್ನ ಜನಗಳಿಗಾದ ಎದೆಯ ಬ್ಯಾನಿ’ ಎಂದು ಕೇಳುತ್ತಲೇ ದಲಿತರ, ಶೋಷಿತರ ನೋವಿನ ಮೂಕ ವೇದನೆಗೆ ಗಟ್ಟಿಧ್ವನಿಯಾಗಿ ಹಾಡಿದ್ದ ಚೆನ್ನಣ್ಣ ವಾಲೀಕಾರ ಧ್ವನಿ ನಿಶ್ಯಬ್ಧವಾಗಿದೆ.

ಕಲ್ಯಾಣ ಕರ್ನಾಟಕದ ಹಿರಿಯ ಮತ್ತು ಕನ್ನಡ ಸಾರಸತ್ವ ಲೋಕದ ಅಹರ್ನಿಶಿ ಬರಹಗಾರ, ಬಂಡಾಯ ಸಾಹಿತಿ ಚನ್ನಣ್ಣ ವಾಲೀಕಾರ(78) ಭಾನುವಾರ ರಾತ್ರಿ 10 ಗಂಟೆಗೆ ಮನೆಯಲ್ಲಿ ನಿಧನರಾಗಿದ್ದಾರೆ.

ಕಲ್ಯಾಣ ಕರ್ನಾಟಕದ ಕನಸಿಗೆ ರೆಕ್ಕೆ ಪುಕ್ಕ!

ಕಳೆದ 9 ತಿಂಗಳಿಂದ ಕಾಮಾಲೆ ಮತ್ತು ಪಿತ್ತಜನಕಾಂಗ(ಲಿವರ್‌) ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಿ ಭಾನುವಾರ ರಾತ್ರಿ ಮನೆಗೆ ವಾಪಸ್‌ ಕರೆತರಲಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಮನೆಯಲ್ಲಿಯೇ ವಾಳೀಕಾರ್‌ ಅವರು ಕೊನೆಯುಸಿರೆಳೆದಿದ್ದಾರೆ.

ಸೋಮವಾರ ಬೆಳಗ್ಗೆ 11 ರಿಂದ 12 ಗಂಟೆವರೆಗೆ ಕಲಬುರಗಿಯ ಹಿಂದಿ ಪ್ರಚಾರ ಸಭೆ ಆವರಣದಲ್ಲಿ ಸಾರ್ವಜನಿಕರಿಗಾಗಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ ಅವರ ಸ್ವಗ್ರಾಮ ಚಿತ್ತಾಪುರ ತಾಲೂಕಿನ ಶಂಕರವಾಡಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಮೃತರು ಪತ್ನಿ, ಶಿಷ್ಯರು, ಬಂಧುಬಳಗ ಸೇರಿ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ. ಅಪಾರ ಅಭಿಮಾನಿಗಳು ಹಾಗೂ ಓದುಗರ ಬಳಗ ಹೊಂದಿದ್ದ ವಾಲೀಕಾರ್‌ ನಾಟಕ ವಿಮರ್ಶೆ ಕಾದಂಬರಿ ಕಥೆ ಸೇರಿದಂತೆ ಸಾಹಿತ್ಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ ಮಹಾನ್‌ ಸಾಹಿತಿ ಎನಿಸಿಕೊಂಡಿದ್ದರು.

ಚಪ್ಪಲಿಯ ಜಾಡು ಹಿಡಿದು ಕೊಲೆ ಪ್ರಕರಣ ಭೇದಿಸಿದ ಪೊಲೀಸರು! ಬೇಕು ಇಂಥ ಚಾಣಾಕ್ಷರು

ಸಾಹಿತಿ ನಾಡೋಜ ಡಾ. ಗೀತಾ ನಾಗಭೂಷಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಾಹಿತಿ ಶಿವರಂಜನ್‌ ಸತ್ಯಂಪೇಟೆ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಸೇರಿದಂತೆ ವಾಲೀಕಾರರ ಶಿಷ್ಯರು, ಸಾಹಿತ್ಯಾಭಿಮಾನಿಗಳು, ಗೆಳೆಯರು ಆಸ್ಪತ್ರೆಗೆ ಭೇಟಿ ನೀಡಿದ್ದರು.

click me!