ಇತಿಹಾಸ ತಿಳಿದು ಮಾತಾಡ್ಲಿ: ಸಂಸದ ಮುನಿಸ್ವಾಮಿಗೆ ಶಾಸಕ ಟಾಂಗ್

By Kannadaprabha NewsFirst Published Jul 19, 2020, 9:54 AM IST
Highlights

ಸಂಸದ ಎಸ್‌.ಮುನಿಸ್ವಾಮಿ ಹೊಸದಾಗಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಇತಿಹಾಸದ ಮಾಹಿತಿ ತಿಳಿದು ಮಾತನಾಡಬೇಕು ಎಂದು ಶಾಸಕ ಕೆ. ಶ್ರೀನಿವಾಸಗೌಡರು ಗುಡುಗಿದ್ದಾರೆ.

ಕೋಲಾರ(ಜು.19): ಕೋಚಿಮುಲ್‌ ಮತ್ತು ಡಿಸಿಸಿ ಬ್ಯಾಂಕ್‌ ಅವಿಭಜಿತ ಜಿಲ್ಲೆಯ ಆಧಾರ ಸ್ತಂಭಗಳು. ಅವುಗಳ ಬಗ್ಗೆ ಮಾತಾಡುವಾಗ ಎಚ್ಚರಿಕೆಯಿಂದ ಮಾತಾಡಬೇಕು. ಬಾಯ ಚಪಲಕ್ಕೆ ಇಲ್ಲಸಲ್ಲದ್ದನ್ನು ಮಾತಾಡುವುದು ಸರಿಯಯಲ್ಲ ಎಂದು ಶಾಸಕ ಕೆ. ಶ್ರೀನಿವಾಸಗೌಡರು ಗುಡುಗಿದರು.

ನಗರದ ತಮ್ಮ ನಿವಾಸದಲ್ಲಿ ಶನಿವಾರ ಇಫ್ಕೋ ಟೋಕಿಯೋ ಸಂಸ್ಥೆಯಿಂದ ಸುಮಾರು 10 ಮಂದಿ ಫಲಾನುಭವಿಗಳಿಗೆ ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನವಾಗಿ 2,10,000 ರು.ಗಳ ಚೆಕ್‌ಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ರೈತರ ಜೀವನಾಡಿಯಾಗಿ ಕೋಚಿಮುಲ್‌, ಹೆಣ್ಣು ಮಕ್ಕಳ ಆರ್ಥಿಕ ಬಲವರ್ಧನೆಗೆ ಡಿಸಿಸಿ ಬ್ಯಾಂಕ್‌ ಮುಂದಾಗಿದೆ. ಉದ್ದೇಶ ಪೂರ್ವಕವಾಗಿ ಮಾತನಾಡುವುದಲ್ಲ ಸಂಸದ ಎಸ್‌.ಮುನಿಸ್ವಾಮಿ ಹೊಸದಾಗಿ ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಇತಿಹಾಸದ ಮಾಹಿತಿ ತಿಳಿದು ಮಾತನಾಡಬೇಕು ಎಂದರು.

ಸಚಿನ್‌ ಪೈಲಟ್‌ ಬಣ ಶಾಸಕರು ಬೆಂಗಳೂರಿಗೆ ಶಿಫ್ಟ್‌?

ಸುಮಾರು ವರ್ಷಗಳಿಂದ ತಾವು ಇಫ್ಕೋ ಟೋಕಿಯೋ ಸಂಸ್ಥೆಯಿಂದ ಈ ರೀತಿ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುತ್ತಾ ಬಂದಿದ್ದು, ಇದು ನಿರಂತರವಾಗಿರುತ್ತದೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಾರಕ ರೋಗ ಕೊರೋನಾ ನಮ್ಮ ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದು, ಜನತೆ ಭಯಭೀತರಾಗದೇ ಇದನ್ನು ಎದುರಿಸಬೇಕಾದ ಅನಿವಾರ್ಯತೆ ನಮಗಿದೆ. ಈ ನಿಟ್ಟಿನಲ್ಲಿ ಜಾಗರೂಕತೆ ವಹಿಸಿ ಅಗತ್ಯವಾದ ಚಿಕಿತ್ಸೆ ಪಡೆಯುವ ಮೂಲಕ ಕೊರೋನಾವನ್ನು ಹೊಡೆದು ಓಡಿಸಬೇಕಾಗಿದೆ ಎಂದರು.

ಕೋವಿಡ್‌ ಬಗ್ಗೆ ಜನತೆ ಭಯ ಪಡುವುದು ಬೇಡ. ಅದರ ಬದಲು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್‌ ಧರಿಸಿ, ಸ್ಯಾನಿಟೈಸರ್‌ನಿಂದ ಕೈ ತೊಳೆದು ಎಚ್ಚರಿಕೆ ವಹಿಸಿ. ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇನ್ನೂ ಹೆಚ್ಚಿನ ಆದ್ಯತೆ ನೀಡಿ ಈ ಕೊರೋನಾ ರೋಗವನ್ನು ತಡೆಗಟ್ಟಬೇಕು ಎಂದರು.

ಕ್ವಾರಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿ ಹೋಟೆಲ್‌ ತೆರೆದಿದ್ದ..!

ಎಸ್ಸೆನ್ನಾರ್‌ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗೆ ಮೀಸಲಿರಿಸಿ, ಉಳಿದ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಇಟಿಸಿಎಂ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ರೋಗವನ್ನು ತಡೆಗಟ್ಟಲು ಲಸಿಕೆಯಿಂದ ಸಾಧ್ಯ. ಅದನ್ನು ಆದಷ್ಟುಬೇಗ ಸರ್ಕಾರಗಳು ಗಮನ ಹರಿಸಬೇಕು. ಲಾಕ್‌ಡೌನ್‌ ವಿಚಾರವು ಜಿಲ್ಲಾಡಳಿತಕ್ಕೆ ಬಿಟ್ಟಿದ್ದು, ಸಾಧ್ಯತೆ ಬಾಧ್ಯತೆಗಳ ಮೇಲೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ ಎಂದರು. ಈ ವೇಳೆ ತಾಪಂ ಸದಸ್ಯ ಮುರಳೀಧರ, ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಅನ್ವರ್‌ ಪಾಷಾ ಇದ್ದರು.

click me!