ಮೈಸೂರು ರಾಜರ ಬಗ್ಗೆ ವಿವಾದಿತ ಹೇಳಿಕೆ : ಕ್ಷಮೆ ಯಾಚಿಸಿದ ಮುಖಂಡ

By Kannadaprabha NewsFirst Published Jan 31, 2021, 9:18 AM IST
Highlights

ಮೈಸೂರು ಮಹಾರಾಜರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಮುಖಂಡ ಇದೀಗ ಕ್ಷಮೆ ಯಾಚಿಸಿದ್ದಾರೆ. ತಮ್ಮ ಹೇಳಿಕೆಯಿಂದ ನೋವಾಗಿದ್ದಲ್ಲಿ ಕ್ಷಮಿಸಿ ಎಂದಿದ್ದಾರೆ. 

ಮೈಸೂರು (ಜ.31):  ಮೈಸೂರು ರಾಜರು ಯುದ್ಧ ಮಾಡಿಲ್ಲ. ಶೋಕಿಪ್ರಿಯರು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌  ಅಧ್ಯಕ್ಷ ಎಂ. ಅಪ್ಪಣ್ಣ ಕ್ಷಮೆಯಾಚಿಸಿದ್ದಾರೆ.

ಚಾಮರಾಜನಗರದಲ್ಲಿ ನಡೆದ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮೈಸೂರು ರಾಜವಂಶಸ್ಥರು ಯಾರ ಮೇಲೂ ಯುದ್ಧ ಮಾಡಿಲ್ಲ. ಶಾಂತಿಯಾಗಿ ಸುಖ ಜೀವನ ನಡೆಸಿದರು. ಅವರು ಶಾಂತಿಪ್ರಿಯರು ಎಂದು ಹೇಳುವ ಭರದಲ್ಲಿ ಶೋಕಿ ಎಂದು ಹೇಳಿದ್ದೆ. ಇದು ಮಹಾ ಅಪರಾಧ. ಇದರಿಂದಾಗಿ ಬಹಳ ಜನರ ಮನಸ್ಸಿಗೆ ನೋವಾಗಿದೆ. ಈ ತಪ್ಪಿಗಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತ್ರಿಶಿಕಾ ಕುಮಾರಿಯವರಿಂದ ಹೊಸ ಬ್ಯುಸಿನೆಸ್ , ಕಾಯ್ದಿರಿಸಿದ್ದಾರೆ ಸಸ್ಪೆನ್ಸ್...!

ನನ್ನದಲ್ಲದ ತಪ್ಪಿಗೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಗುರುತರ ಆರೋಪಗಳು ಮನಸ್ಸಿಗೆ ಬಹಳ ಬೇಸರ ಮೂಡಿಸಿವೆ. ನನಗಾಗದವರು ಮೈಸೂರು ರಾಜವಂಶಸ್ಥರನ್ನು ಹೀಯಾಳಿಸಿದ್ದೇನೆಂದು ತಿದ್ದಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಚಾರದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವರು ತಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನನ್ನ ಇಡೀ ಜೀವಮಾನವನ್ನು ಯದುವಂಶದವರ ಇತಿಹಾಸ ಕೇಳುತ್ತಾ ಕಳೆದಿದ್ದೇನೆ. ಸಾಮಾನ್ಯ ಕುಟುಂಬದಿಂದ ಬಂದಿರುವ ನಾನು ಮಹಾರಾಜರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.

'ವಿಜ್ಞಾನಕ್ಕೆ ಸವಾಲಾದ ಅಲಮೇಲಮ್ಮನ ಶಾಪ' .

ಮೈಸೂರು ರಾಜವಂಶಕ್ಕೆ ನಮ್ಮ ವಾಲ್ಮೀಕಿ ನಾಯಕ ಸಮಾಜ ಹೇಗೆ ಸೇವೆ ಸಲ್ಲಿಸಿತು. ಮದಕರಿನಾಯಕರು ಹಾಗೂ ಇತರರು ಯದುವಂಶಕ್ಕೆ ತಮ್ಮ ರಾಜನಿಷ್ಠೆಯನ್ನು ಹೇಗೆ ತೋರಿಸಿದರು ಎಂಬ ಬಗ್ಗೆಯೂ ನಾನು ಮಾತನಾಡಿದ್ದೇನೆ. ನಾವು ದೇಶ ಸೇವಕರು. ವಾಲ್ಮೀಕಿ ಸಮಾಜ ಈಗಲೂ ದೇಶ ಸೇವೆ ಮಾಡುತ್ತಿದೆ ಎಂದಿದ್ದಾರೆ.

ಮೈಸೂರು ಮಹಾರಾಜರ ಕೊಡುಗೆಯಾದ ಲಲಿತಮಹಲ್‌ ಅನ್ನು ಉಳಿಸಲು ನಾನು ಕ್ರಮಕೈಗೊಂಡಿದ್ದನ್ನು ಎಲ್ಲಾ ಮಾಧ್ಯಮಗಳು ಪ್ರಕಟಿಸಿವೆ. ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ ಸೇವೆ ಸ್ಮರಣೀಯ. ಎಂದೆಂದಿಗೂ ನಾವು ಯದುವಂಶದವರಿಗೆ ನಿಷ್ಠರಾಗಿಯೇ ಇರುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

click me!