13 ವರ್ಷಗಳ ಬಳಿಕ ಜೆಡಿಎಸ್‌ಗೆ ಗೆಲುವು : ದಳಪತಿಗಳ ಪಾಲಾದ ಅಧಿಕಾರ

By Kannadaprabha NewsFirst Published Nov 9, 2021, 10:11 AM IST
Highlights
  •  ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ನಡೆದ ಚುನಾವಣೆ
  • ಜೆಡಿಎಸ್‌ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್‌  ಪ್ರಾಬಲ್ಯ

ಚನ್ನಪಟ್ಟಣ (ನ.09): ಇಲ್ಲಿನ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ (Election) ನಡೆದ ಚುನಾವಣೆಯಲ್ಲಿ ಜೆಡಿಎಸ್‌ (JDS) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ, ಎಚ್‌ಡಿಕೆ (HD Kumaraswamy) ಸ್ವಕ್ಷೇತ್ರದಲ್ಲಿ ಜೆಡಿಎಸ್‌ (JDS) ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ.

ಸೋಮವಾರ ನಡೆದ ನಗರಸಭಾ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ (President Vice President Election) ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 26ನೇ ವಾರ್ಡ್‌ನ ಪ್ರಶಾಂತ್‌, ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 19ನೇ ವಾರ್ಡ್‌ನ ಅಸೀನಾ ಜೆಡಿಎಸ್‌ (JDS) ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಈ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾ​ಕಾರಿಯಾಗಿ (Election) ಕರ್ತವ್ಯ ನಿರ್ವಹಿಸಿದ್ದು ಉಪವಿಭಾಗ​ಕಾರಿ ಮಂಜುನಾಥ್‌ ಘೋಷಿಸಿದರು.

ಜೆಡಿಎಸ್‌ಗೆ ನೀರಸ ಗೆಲುವು:  ನಗರಸಭೆಯ 31 ಸ್ಥಾನಗಳ ಪೈಕಿ ಜೆಡಿಎಸ್‌ 16 ಸ್ಥಾನ, ಕಾಂಗ್ರೆಸ್‌ (Congress) 7 ಸ್ಥಾನ, ಬಿಜೆಪಿ (BJP) 7 ಸ್ಥಾನ, ಒಂದು ಸ್ಥಾನ ಪಕ್ಷೇತರ ಸದಸ್ಯೆಯ ಪಾಲಾಗಿತ್ತು. ಸರಳ ಬಹುಮತ ಹೊಂದಿದ್ದ ಜೆಡಿಎಸ್‌ ನಗರಸಭೆ ಚುಕ್ಕಾಣಿ ಹಿಡಿಯುವುದು ಖಚಿತವಾಗಿತ್ತು. ಈ ಮಧ್ಯೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರಾಜಕೀಯ (Politics) ವಿದ್ಯಮಾನಗಳು ಈ ಚುನಾವಣೆಯ ಬಗ್ಗೆ ತೀವ್ರ ಕೂತೂಹಲ ಹುಟ್ಟು ಹಾಕಿತ್ತು.

ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್‌ (JDS) ಪಕ್ಷದ ಮುಖಂಡರು ನಡೆಸಿದ ರಾಜಕೀಯ ತಂತ್ರಗಾರಿಕೆ ಹಾಗೂ ಸೈದ್ದಾಂತಿಕ ಕಾರಣದಿಂದಾಗಿ ಕಾಂಗ್ರೆಸ್‌- ಬಿಜೆಪಿ (BJP) ಸದಸ್ಯರ ಮೈತ್ರಿಗೆ ಆಯಾ ಪಕ್ಷದ ವರೀಷ್ಟರು ಅಂಕಿತವಾಕದೇ ಇದಿದ್ದು ಜೆಡಿಸ್‌ ಅಭ್ಯರ್ಥಿಗಳ ನಿರಾಯಸ ಗೆಲುವಿಗೆ ಸಹಕಾರಿಯಾಯಿತು. ಚುನಾವಣೆಗೆ (Election) ಮುನ್ನಾ ರಾಜಕೀಯ ಹೈಡ್ರಾಮ ನಡೆಯಲಿದೆ ಎಂಬ ನಿರೀಕ್ಷೆ ಮೂಡಿತ್ತಾದರೂ ಕೊನೆಕ್ಷಣದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಚ್‌ಡಿಕೆ (HD Kumaraswamy) ಸ್ವಕ್ಷೇತ್ರದಲ್ಲಿ ಜನತಾದಳ ಗೆಲುವಿನ ನಗೆ ಬೀರಿದೆ.

ಫಲಿಸದ ವಿರೋಧಪಕ್ಷಗಳ ತಂತ್ರ:  ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ 14ನೇ ವಾರ್ಡ್‌ ಸದಸ್ಯ ಶ್ರೀನಿವಾಸಮೂರ್ತಿ, 26ನೇ ವಾರ್ಡ್‌ನ ಪ್ರಶಾಂತ್‌ ಹಾಗೂ 11ನೇ ವಾರ್ಡ್‌ನ ಲೋಕೇಶ್‌ ಪ್ರಬಲ ಆಕಾಂಕ್ಷಿಗಳಾಗಿದ್ದರು. ಇನ್ನೊಂದೆಡೆ ಸಾಮಾನ್ಯ ವರ್ಗಕ್ಕೆ ಮೀಸಲು ನಿಗ​ಯಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಹಲವು ಮಂದಿ ಸದಸ್ಯರು ಆಕಾಂಕ್ಷಿಗಳಾಗಿದ್ದರು. ಈ ಮಧ್ಯೆ ಕಾಂಗ್ರೆಸ್‌ (Congress) ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಒರ್ವ ಪಕ್ಷೇತರ ಸದಸ್ಯೆ ಹಾಗೂ ಜೆಡಿಎಸ್‌ನ ಅತೃಪ್ತ ಸದಸ್ಯರನ್ನು ಹೈಜಾಕ್‌ ಮಾಡಿ ಸ್ವಕ್ಷೇತ್ರದಲ್ಲಿ ಮಾಜಿ ಸಿಎಂಗೆ ಮುಖಭಂಗ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಈ ಎಲ್ಲಾ ಕಾರಣದಿಂದಾಗಿ ಜೆಡಿಎಸ್‌ ಸದಸ್ಯರನ್ನು ಮಾಜಿ ಸಿಎಂ ಎಚ್‌ಡಿಕೆ ಮಾರ್ಗದರ್ಶನದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಈ ಪ್ರವಾಸದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ 14ನೇ ವಾರ್ಡ್‌ನ ಶ್ರೀನಿವಾಸ್‌ಮೂರ್ತಿ (Shrinivas Murthy) ಹೊರಉಳಿಯುವ ಮೂಲಕ ಈ ಎಲ್ಲಾ ಊಹಾಪೋಹಕ್ಕೆ ದಾರಿ ಮಾಡಿಕೊಟ್ಟಿದ್ದರು.

ಆದರೆ, ಶ್ರೀನಿವಾಸಮೂರ್ತಿ ಅಂತಿಮವಾಗಿ ಈ ಸದಸ್ಯ ಕೂಡ ಚುನಾವಣೆ (Election) ನಡೆಯುವ ವೇಳೆಗೆ ಜೆಡಿಎಸ್‌ ಸದಸ್ಯರನ್ನು ಕೂಡಿಕೊಂಡರು. ಇನ್ನೊಂದೆಡೆ ಕೈ ಮತ್ತು ಕಮಲ ಸದಸ್ಯರ ನಡುವೆಯೂ ಮೈತ್ರಿ ಬಗ್ಗೆ ಹೊಂದಾಣಿಕೆ ಮೂಡದ ಕಾರಣ ಹಾಗೂ ಆ ಪಕ್ಷಗಳ ವರಿಷ್ಠರು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ವಿರೋಧ ಪಕ್ಷಗಳ ತಂತ್ರ ಫಲಿಸದೆ ಜೆಡಿಎಸ್‌ಗೆ ಈ ಎರಡುಸ್ಥಾನಗಳು ಆನಾಯಾಸವಾಗಿ ಲಭಿಸಿದವು.

ಸಂಭ್ರಮಾಚರಣೆ:  ಹಲವು ವರ್ಷಗಳ ಬಳಿಕ ನಗರಸಭೆ ಚುಕ್ಕಾಣಿ ಜೆಡಿಎಸ್‌ ವಶವಾದ ಹಿನ್ನೆಲೆ ಪಕ್ಷದ ಕಾರ್ಯಕರ್ತರು ನಗರಸಭೆ ಆವರಣದಲ್ಲಿ ಸಂಭ್ರಮಿಸಿದರು. ನಗರಸಭೆ ಆವರಣದ ಹೊರಗೆ ಅರ್ಧಗಂಟೆಗೂ ಹೆಚ್ಚುಕಾಲ ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಲಾಯಿತು. ಪಕ್ಷದ ಬಾವುಟಗಳು ನಗರಸಭೆಯ ಮುಂಭಾಗ ರಾರಾಜಿಸಿದವು. ನೂತನ ಅಧ್ಯಕ್ಷ ಮತ್ತು ಈ ಗೆಲುವಿಗೆ ಕಾರಣರಾದ ಪಕ್ಷದ ಮುಖಂಡರನ್ನು ತಲೆಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು.

ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕುರುದೊಡ್ಡಿ ಜಯರಾಂ, ಪಕ್ಷದ ಮುಖಂಡರಾದ ವಡ್ಡರಹಳ್ಳಿ ರಾಜಣ್ಣ, ರಘುಕುಮಾರ್‌, ನರ್ಸರಿ ಲೋಕೇಶ್‌, ಬೈ ಶ್ರೀನಿವಾಸ್‌, ಎಲೇಕೇರಿ ನಂದೀಶ್‌, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಖಾ ಉಮಾಶಂಕರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

13 ವರ್ಷಗಳ ಬಳಿಕ ಜೆಡಿಎಸ್‌ಗೆ ಅಧಿಕಾರ

ನಗರಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳು 13 ವರ್ಷಗಳ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಪಡೆಯುವಲ್ಲಿ ಸಫಲ ಗೊಂಡಿದ್ದಾರೆ. 2008 ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಲಕ್ಷ್ಮಮ್ಮ ಕೆಂಪೇಗೌಡ ಗೆಲುವು ಸಾಧಿಸಿದ್ದರು. ನಂತರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಉಚುನಾವಣೆಗಳಲ್ಲಿ ಜೆಡಿಎಸ್‌ ಅತಿಹೆಚ್ಚು ಸ್ಥಾನ ಗಳಿಸಿತ್ತಾದರೂ ರಾಜಕೀಯ ಮೇಲಾಟದಲ್ಲಿ ಅ​ಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. 13 ವರ್ಷಗಳ ಬಳಿಕ ಇದೀಗ ಮತ್ತೆ ಜೆಡಿಎಸ್‌ ಅಧಿಕಾರ ಹಿಡಿದಿದ್ದು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಈ ಗೆಲುವು ಉತ್ಸಾಹ ಮೂಡಿಸಿದೆ.

ನನ್ನ ಆಯ್ಕೆಗೆ ಸಹಕರಿಸಿದ ಜೆಡಿಎಸ್‌ ವರೀಷ್ಟಎಚ್‌.ಡಿ.ಕುಮಾರಸ್ವಾಮಿ, ತಾಲೂಕು ಜೆಡಿಎಸ್‌ನ ಎಲ್ಲಾ ಮುಖಂಡರು, ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲರ ನಂಬಿಕೆಗೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸುತ್ತೇನೆ. ನಗರದ ಕಸ ವಿಲೇವಾರಿ ಸಮಸ್ಯೆಗೆ ಪ್ರಮುಖ ಆದ್ಯತೆ ನೀಡುತ್ತೇನೆ. ನಗರದ ಸರ್ವಾಂಗೀಣ ಅಭಿವೃದ್ಧಿ ಮಾಡುವ ಮೂಲಕ ಪ್ರಾಮಾಣಿಕವಾದ ಸೇವೆ ಸಲ್ಲಿಸುತ್ತೇನೆ.

- ಪ್ರಶಾಂತ್‌, ನಗರಸಭೆ ನೂತನ ಅಧ್ಯಕ್ಷ.

ಹಲವು ವರ್ಷಗಳ ಬಳಿಕ ನಮ್ಮ ಪಕ್ಷ ನಗರಸಭೆ ಚುಕ್ಕಾಣಿ ಹಿಡಿದಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ನಗರದ ಜನತೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಆರ್ಶೀವಾದ ಮಾಡಿದ್ದರು. ಅದರಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಮ್ಮ ಪಕ್ಷದ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಜನರ ನಂಬಿಕೆಗೆ ಚ್ಯುತಿ ಬರದಂತೆ ನಮ್ಮ ಪಕ್ಷದ ಸದಸ್ಯರು ಆಡಳಿತ ನಡೆಸಲಿದ್ದಾರೆ.

- ಎಚ್‌.ಸಿ.ಜಯಮುತ್ತು, ತಾಲೂಕು ಜೆಡಿಎಸ್‌ ಅಧ್ಯಕ್ಷ.

click me!