ಕಾರವಾರ: ಸಮುದ್ರ ಸ್ವಚ್ಛತೆಗಾಗಿ ಮೀನುಗಾರರಿಗೆ ಸ್ಪರ್ಧೆ

By Suvarna NewsFirst Published Sep 18, 2022, 11:28 PM IST
Highlights

ತೀರದ ಬಳಿ ವಾಸವಾಗಿರುವ ಮೀನುಗಾರರಿಗೆ ಬೀಚ್ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಕಡಲತೀರವನ್ನು ಪ್ರವಾಸಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಂಡಿದೆ.

ಭರತ್‌ರಾಜ್ ಕಲ್ಲಡ್ಕ  ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಸೆ.18): ಅವರೆಲ್ಲರೂ ಮತ್ಸ್ಯ ಶಿಕಾರಿ ಮೂಲಕ ನಿತ್ಯವೂ ಬ್ಯೂಸಿಯಾಗಿರುತ್ತಿದ್ದ ಮೀನುಗಾರರು. ಪ್ರತಿನಿತ್ಯ ಕಡಲತೀರದಲ್ಲೇ ತಮ್ಮ ಉದ್ಯೋಗ ಮಾಡಿಕೊಂಡಿದ್ದರೂ, ಸಮುದ್ರ ಸ್ವಚ್ಛತೆ ಕುರಿತು ಹೆಚ್ಚು ಗಮನಹರಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ತೀರದ ಬಳಿ ವಾಸವಾಗಿರುವ ಮೀನುಗಾರರಿಗೆ ಬೀಚ್ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಕಡಲತೀರವನ್ನು ಪ್ರವಾಸಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಮೀನುಗಾರರನ್ನು ಪ್ರೋತ್ಸಾಹಿಸಿ, ಉತ್ತಮ ಬಾಂಧವ್ಯ ಬೆಳೆಸಲು ವಿಭಿನ್ನ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದೆ.‌ ಒಂದೆಡೆ ಕಡಲ ತೀರದುದ್ದಕ್ಕೂ ಬಿದ್ದಿರುವ ತ್ಯಾಜ್ಯದ ರಾಶಿಯನ್ನು ಸಂಗ್ರಹಿಸುತ್ತಿರುವ ಜನರು. ಇನ್ನೊಂದೆಡೆ ನಾ ಮುಂದು ತಾ ಮುಂದು ಎಂದು ಸಮುದ್ರದಲ್ಲಿ ಹುಟ್ಟು ಹಾಕುತ್ತ ದೋಣಿ ಗುರಿ ತಲುಪಿಸಲು ಯತ್ನಿಸುತ್ತಿರುವ ಮೀನುಗಾರರು. ಮತ್ತೊಂದೆಡೆ ಹಗ್ಗಜಗ್ಗಾಟದಲ್ಲಿ ಬಲಪ್ರದರ್ಶನ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸುತ್ತಿರುವ ಯುವಕರು. ಈ‌ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಾರವಾಡ ಗ್ರಾಮದಲ್ಲಿ ಅಂತರಾಷ್ಟ್ರೀಯ ಕಡಲತೀರದ ಸ್ವಚ್ಚತಾ ದಿನದ ಅಂಗವಾಗಿ ಬೆಲೆಕೇರಿಯ ಕರಾವಳಿ ಕಾವಲು ಪೊಲೀಸ್ ಠಾಣೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ.ಜಿಲ್ಲೆಯ ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಮತ್ತು ಅವರ ಕುಟುಂಬಸ್ಥರು ಹಾರವಾಡದ ಕಡಲತೀರದಲ್ಲಿ ಸ್ವಚ್ಛತೆ ನಡೆಸಿದರು.

ಕಡಲತೀರದುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಬಾಟಲ್, ಬಲೆ ಸೇರಿದಂತೆ ತರಗೆಲೆಯ ತ್ಯಾಜ್ಯವನ್ನು ಒಟ್ಟುಗೂಡಿಸಿ ಬೀಚ್ ಸ್ವಚ್ಛಗೊಳಿಸಲಾಯಿತು. ಬಳಿಕ ಸ್ಥಳೀಯರಿಗೆ ಇದೇ ಮೊದಲ ಬಾರಿಗೆ ಕಡಲತೀರದಲ್ಲಿಯೇ ಹುಟ್ಟಿನ ದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು. ಒಟ್ಟು 12 ದೋಣಿಗಳಲ್ಲಿ ತಲಾ ಇಬ್ಬರಂತೆ ಮೀನುಗಾರರು ಭಾಗವಹಿಸಿದ್ದು‌, ನಿತ್ಯ ಕಸುಬಿನಲ್ಲಿ ನಿಧಾನವಾಗಿ ದೋಣಿ ಓಡಿಸುತ್ತಿದ್ದವರು ಈ ಭಾರಿ ಸ್ಪರ್ಧೆಗಾಗಿ ಇರುವ ಶಕ್ತಿಯನ್ನೆಲ್ಲಾ ಬಳಸಿ ದೋಣಿ ಓಡಿಸಿ ಎಲ್ಲರ ಗಮನ ಸೆಳೆದರು.

ಕಡಲತೀರದ ಮೀನುಗಾರರಿಗೆ ಕೇವಲ ಮೀನುಗಾರಿಕೆ ಮೂಲಕ ಜೀವನ ನಡೆಸುವುದು ಕಷ್ಟವಾಗಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆ ಕಡಲತೀರವನ್ನು ಸ್ವಚ್ಚಗೊಳಿಸಿ ಪ್ರವಾಸಿ ಸ್ನೇಹಿಯಾಗಿಸಲು ಪ್ರಯತ್ನಿಸಲಾಗುತ್ತಿದೆ. ಅದರಂತೆ ಇಂತಹ ಅಪರೂಪದ ಸ್ಪರ್ಧೆಗಳನ್ನು ಆಯೋಜಿಸಿ ಕಡಲತೀರವನ್ನು ಸ್ವಚ್ಚವಾಗಿಡಲು ಪ್ರಯತ್ನಿಸಲಾಗುತ್ತಿದೆ ಅಂತಾರೆ ಅಧಿಕಾರಿಗಳು.

ಅಂದಹಾಗೆ, ದೋಣಿ ಸ್ಪರ್ಧೆ ಮಾತ್ರವಲ್ಲದೇ ಗುಂಡು ಎಸೆತ, ಹೆಣ್ಣು ಮಕ್ಕಳಿಗೆ ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆದವು. ಹಗ್ಗ ಜಗ್ಗಾಟದಲ್ಲಿ‌ ಸ್ಥಳೀಯ ಮೀನುಗಾರರೇ ನಾಲ್ಕು ತಂಡ ಮಾಡಿಕೊಂಡು ಬಲ ಪ್ರದರ್ಶನ ನಡೆಸಿದ್ದು, ರೋಚಕವಾಗಿದ್ದ ಸ್ಪರ್ಧೆಯನ್ನು ನೋಡುವುದಕ್ಕೆ ವಿದ್ಯಾರ್ಥಿಗಳು, ಸ್ಥಳೀಯರು ಸೇರಿದ್ದರು. ಇನ್ನು ಇದೇ ಮೊದಲ ಬಾರಿಗೆ ಸ್ಥಳೀಯ ಆಡಳಿತ ಹಾಗೂ ಜನರ ಸಹಕಾರ ಪಡೆದು ಉತ್ತಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಉಡುಪಿಯ ವರ್ಲ್ಡ್ ನಂಬರ್ ವನ್ ಸೈಕ್ಲಿಂಗ್ ಬೀಚ್‌ಗೆ ವಿದೇಶಿಗರ ಮೆಚ್ಚುಗೆ

ಇದರಿಂದ ನಮ್ಮ ಕಡಲತೀರವನ್ನು ನಾವು ಸ್ವಚ್ಚವಾಗಿಟ್ಟುಕೊಳ್ಳಬೇಕೆಂಬ ಅರಿವು ಮೀನುಗಾರರಿಗೆ ಬಂದಿದೆ. ನಾವು ಕೂಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದೇವೆ. ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕಿದ್ದು, ಇದರಿಂದ ಮೀನುಗಾರರು ಹಾಗೂ ಅಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಬೆಳೆಯುತ್ತದೆ ಅಂತಾರೆ ಸ್ಥಳೀಯರು.

Coastal Cleanup Day; ಕಾರವಾರ ಕಡಲತೀರ ಸ್ವಚ್ಛಗೊಳಿಸಿದ ಗವರ್ನರ್ ಥಾವರಚಂದ್

ಒಟ್ಟಿನಲ್ಲಿ ಅಂತರಾಷ್ಟ್ರೀಯ ಕಡಲತೀರ ಸ್ವಚ್ಚತಾ ದಿನದ ಅಂಗವಾಗಿ ಮೀನುಗಾರರ ಸಹಭಾಗಿತ್ವದೊಂದಿಗೆ ಬೀಚ್‌ನಲ್ಲಿ ಬಿದ್ದಿದ್ದ ಕಸ ಸಂಗ್ರಹಿಸುವುದರ ಜತೆಗೆ ವಿವಿಧ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಮೂಲಕ ಕಡಲತೀರದ ಸ್ವಚ್ಛತೆ ಕುರಿತು ಜಾಗೃತಿಯೊಂದಿಗೆ ಪ್ರವಾಸೋದ್ಯಮದ ದೃಷ್ಠಿಯಲ್ಲೂ ಬೀಚ್ ಬಳಕೆ ಮಾಡಿಕೊಳ್ಳುವುದರ ಕುರಿತು ಜಾಗೃತಿ ಮೂಡಿಸಿದ್ದು ನಿಜಕ್ಕೂ ಶ್ಲಾಘನೀಯ.

click me!