ಸೈಬರ್‌ ಮಾಧ್ಯಮದಿಂದ ಅಭದ್ರತೆ: ಪ್ರೊ. ವೆಂಕಟೇಶ್ವರಲು

By Kannadaprabha NewsFirst Published Dec 13, 2023, 9:34 AM IST
Highlights

ಸಮಾಜದಲ್ಲಿ ಎಲ್ಲವನ್ನೂ ಅಳೆದು ತೂಗಿ ನೋಡಬೇಕು. ಸೈಬರ್‌ ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಕೆಮಾಡುವ ಬದಲು ನಕಾರಾತ್ಮಕವಾಗಿ ಬಳಸಿ ಅಭದ್ರತೆಯನ್ನು ಸೃಷ್ಟಿಸುತ್ತಿರುವ ಸೈಬರ್‌ ಅಪರಾಧಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ತುಮಕೂರು ವಿ.ವಿ. ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.

 ತುಮಕೂರು :  ಸಮಾಜದಲ್ಲಿ ಎಲ್ಲವನ್ನೂ ಅಳೆದು ತೂಗಿ ನೋಡಬೇಕು. ಸೈಬರ್‌ ಮಾಧ್ಯಮವನ್ನು ಸಕಾರಾತ್ಮಕವಾಗಿ ಬಳಕೆಮಾಡುವ ಬದಲು ನಕಾರಾತ್ಮಕವಾಗಿ ಬಳಸಿ ಅಭದ್ರತೆಯನ್ನು ಸೃಷ್ಟಿಸುತ್ತಿರುವ ಸೈಬರ್‌ ಅಪರಾಧಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ತುಮಕೂರು ವಿ.ವಿ. ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ತಿಳಿಸಿದರು.

ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಸೈನ್ಸ್ ವಿಭಾಗವು ಮಂಗಳವಾರ ಆಯೋಜಿಸಿದ್ದ ಸೈಬರ್ ಫೊರೆನ್ಸಿಕ್ಸ್: ಡಿಜಿಟಲ್‌ ಡಿಟೆಕ್ಟಿವ್ ವರ್ಕ್ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹ್ಯಾಕರ್ಸ್‌ಗಳ ಸಂಖ್ಯೆ ಹೆಚ್ಚಾಗಿ ಪ್ರಪಂಚದ ಯಾವ ಮೂಲೆಯಿಂದಲಾದರೂ ನಮ್ಮ ವೈಯಕ್ತಿಕ ಮಾಹಿತಿಯನ್ನು, ಖಾಸಗಿ ಬದುಕನ್ನು ತಮ್ಮ ವಶಕ್ಕೆ ಪಡೆಯುವಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸಿ ಬ್ಯಾಂಕ್ ಮಾಹಿತಿ ನೀಡುವುದು, ಅನಗತ್ಯವಾಗಿ ಹಂಚಿಕೊಳ್ಳುವುದು, ಸಾಮಾಜಿಕ ಜಾಲಾತಾಣಗಳಲ್ಲಿ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವುದು ಸೈಬರ್ ಅಪರಾಧಿಗಳಿಗೆ ನಾವೇ ಶರಣಾದಂತೆ ಎಂದು ತಿಳಿಸಿದರು.

ವಿ.ವಿ. ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಕಣ್ಣಿಗೆ ಕಾಣದೆ ಯುದ್ಧ ಸಾರುವ ಮಾರ್ಗವನ್ನು ಸೈಬರ್ ಅಪರಾಧಿಗಳು ಮಾಡುತ್ತಿದ್ದಾರೆ. ಮಾಹಿತಿ ಕಳವು ಮಾಡಿ, ವ್ಯಕ್ತಿಯ, ಸಂಸ್ಥೆಯ, ದೇಶದ ಭದ್ರತೆಯನ್ನು ನಾಶಪಡಿಸುತ್ತಿದ್ದಾರೆ. ಡಿಜಿಟಲ್‌ ಯುಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿ ಅಪರಾಧಗಳನ್ನು ಎಸಗುತ್ತಿರುವವರನ್ನು ಅದೇ ಕೃತಕ ಬುದ್ಧಿಮತ್ತೆಯನ್ನು ಬಳಸಿ ಅಪರಾಧಿಗಳನ್ನು ಹಿಡಿಯುವ ಪ್ರಯತ್ನವಾಗುತ್ತಿದೆ. ಸೈಬರ್‌ ಯುದ್ಧ, ಡೀಪ್ ಫೇಕ್, ಸೈಬರ್ ಭಯೋತ್ಪಾದನೆ ಈಗಿನ ಅಭದ್ರತೆ ಎಂದು ಹೇಳಿದರು.

ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಬೆಂಗಳೂರು ವಿವಿಯ ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕ ಪ್ರೊ.ಎಂ. ಹನುಮಂತಪ್ಪ, ವಿ.ವಿ. ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ.ಶೇಟ್, ವಿಜ್ಞಾನ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ಆರ್. ರಮಣಿ, ಸಹ ಪ್ರಾಧ್ಯಾಪಕ ಡಾ.ಬಿ.ಎಲ್. ಮುಕುಂದಪ್ಪ, ಎಸ್.ಐ.ಟಿ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಆಶಾಗೌಡ ಕರೇಗೌಡ, ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಡಿ., ತಿಪಟೂರಿನ ಸರ್ಕಾರಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ. ಪ್ರಕಾಶ್ ಬಿ.ಆರ್ ಭಾಗವಹಿಸಿದ್ದರು.

ಫೋಟೊ: ಸೈಬರ್ ಫೊರೆನ್ಸಿಕ್ಸ್: ಡಿಜಿಟಲ್‌ ಡಿಟೆಕ್ಟಿವ್ ವರ್ಕ್ ಕುರಿತ ರಾಷ್ಟ್ರಮಟ್ಟದ ಕಾರ್ಯಾಗಾರಕ್ಕೆ ತುಮಕೂರು ವಿ.ವಿಯ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಚಾಲನೆ ನೀಡಿದರು. ಜತೆಗೆ ಕುಲಸಚಿವೆ ನಾಹಿದ ಜಮ್‌ ಜಮ್‌, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್‌ ಕೆ. ಮತ್ತಿತರರು ಇದ್ದಾರೆ.

click me!