ಯಾದಗಿರಿ: ಹೆದ್ದಾರಿ ಪರಿಹಾರ, ಪ್ರಭಾವಿಗಳಿಗೆ ಬೆಣ್ಣೆ, ಬಡವರಿಗೆ ಸುಣ್ಣ!

By Kannadaprabha NewsFirst Published Sep 15, 2022, 10:28 AM IST
Highlights

ಸೂರತ್‌- ಚೆನ್ನೈ ಎಕ್ಸಪ್ರೆಸ್‌ ವೇ ಭೂಸ್ವಾಧೀನ ವಿಚಾರ, ರಾಜಕಾರಣಿಗಳಿಂದಲೇ ಸರ್ಕಾರಕ್ಕೆ ಮೋಸ?, ಸ್ವಾಧೀನ ಪ್ರದೇಶದಲ್ಲಿ ಗಿಡಮರಗಳ ನೆಟ್ಟು ಹೆಚ್ಚು ಪರಿಹಾರ

ಆನಂದ್‌ ಎಂ. ಸೌದಿ

ಯಾದಗಿರಿ(ಸೆ.15):  ಕೇಂದ್ರ ಸರ್ಕಾರದ, ಭಾರತಮಾಲಾ ಯೋಜನೆಯಡಿ ಸೂರತ್‌ ಚೆನ್ನೈ ಆರು ಪಥಗಳ ಎಕ್ಸಪ್ರೆಸ್‌ ವೇ ನಿರ್ಮಾಣಕ್ಕಾಗಿ ಭೂಸ್ವಾ​ಧೀನ ವಿಚಾರದಲ್ಲಿ, ಬಡ ರೈತರ ದಿಕ್ಕು ತಪ್ಪಿಸಿದ ಪ್ರಭಾವಿಗಳು, ತಾವು ಹೆಚ್ಚಿನ ಪರಿಹಾರ ಲಾಭ ಪಡೆಯಲು ಸರ್ಕಾರಕ್ಕೆ ವಂಚಿಸಿದರೇ? ಅನ್ನೋ ಪ್ರಶ್ನೆಗಳು ಮೂಡಿ ಬರುತ್ತಿವೆ.

ಸ್ವಾಧೀನ ಪಡಿಸಿಕೊಳ್ಳಬೇಕಿದ್ದ ಜಮೀನುಗಳ ಮೌಲ್ಯ ನಿರ್ಧರಿಸುವ ವೇಳೆ, ಅಲ್ಲಿನ ಪ್ರತಿಯೊಂದು ಗಿಡ -ಮರಗಳ ಲೆಕ್ಕ, ಕೃಷಿ ಹೊಂಡ, ಬಾವಿ, ಅಥವಾ ಬೋರ್ವೆಲ್‌ ಗಳಿದ್ದರೆ ಅಂತಹ ಮುಂತಾದ ನೀರಾವರಿ ಪೂರಕ ಅಂಶಗಳನ್ನು ಸಹ ಪರಿಗಣಿಸಲಾಗುತ್ತದೆ. ಹೀಗಾಗಿ, ತಮ್ಮ ತಮ್ಮ ಪ್ರದೇಶಗಳಲ್ಲಿ ಎಕ್ಸ್ಪೆ್ರಸ್‌ ವೇ ನಿರ್ಮಾಣವಾಗಲಿದೆ ಎಂಬ ಮಾಹಿತಿಯನ್ನು ಮೊದಲೇ ಅರಿತಂತಿದ್ದ ಕೆಲವು ರಾಜಕೀಯ ಪ್ರಭಾವಿಗಳು, ಆ ಮಾರ್ಗದಲ್ಲಿಯೇ ಬರುವ ಜಮೀನುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಲಾಭ ಪಡೆಯುವ ದುರುದ್ದೇಶದಿಂದ, ಆ ಜಮೀನುಗಳಲ್ಲಿ ಕೃಷಿ ಹೊಂಡ- ಬಾವಿ ತೋಡಿಸುವಿಕೆ, ಹತ್ತಾರು ಬೋರ್ವೆಲ್‌ ಗಳು ಹಾಗೂ ಸಾವಿರಾರು ಗಿಡಮರಗಳನ್ನು ನೆಟ್ಟು ಪರಿಹಾರ ಹಣವನ್ನು ದ್ವಿಗುಣಗೊಳಿಸುವ ಹುನ್ನಾರ ನಡೆಸಿದ್ದರು ಎನ್ನಲಾಗಿದೆ.

PSI Recruitment Scam:ಪಿಎಸ್‌ಐ ಅಕ್ರಮ: ತುಮಕೂರು, ದಾವಣಗೆರೆ, ಮೂಡಬಿದಿರೆಗೂ ಲಿಂಕ್‌..!

ಗಂಧದ ಮರಗಳ ಮೇಲೆ ಪರಿಹಾರದ ಹುನ್ನಾರ:

ರಾಜ್ಯ ಸರ್ಕಾರದ ಪ್ರಮುಖ ಹುದ್ದೆಯ ಪ್ರಭಾವಿಯೊಬ್ಬರು ನೈಸರ್ಗದತ್ತವಾಗಿ ಬೆಳೆದ ಸರ್ಕಾರಿ ನೂರಾರು ಗಂಧದ ಮರಗಳನ್ನು ತಾವು ಬೆಳೆಸಿದ್ದೇವೆಂದು ಬಿಂಬಿಸುವ ಪ್ರಯತ್ನ ನಡೆಸಿದ್ದರಲ್ಲದೆ, ಅದಕ್ಕಾಗಿ ಹೆಚ್ಚಿನ ಲಾಭ ಪಡೆಯುವ ಹವಣಿಕೆಯನ್ನು ಕೂಡ ನಡೆಸಿದ್ದರು ಎಂದು ‘ಕನ್ನಡಪ್ರಭ’ಕ್ಕೆ ಹೆಸರೇಳಲಿಚ್ಛಿಸದ ಸರ್ಕಾರಿ ಅ​ಧಿಕಾರಿಯೊಬ್ಬರು ತಿಳಿಸಿದರು.

ಇನ್ನು, ಕೆಲ ರಾಜಕೀಯ ಪ್ರಮುಖರು, ಯಾವ ಮಾರ್ಗದಲ್ಲಿ ಈ ಎಕ್ಸ್ಪೆ್ರಸ್‌ ವೇ ಹಾದು ಹೋಗುತ್ತದೆಯೋ, ಅದೇ ಮಾರ್ಗದಲ್ಲಿ ಮಾತ್ರ ಇಂತಹ ನೂರಾರು ಗಿಡಮರಗಳನ್ನು ಹಚ್ಚಿ, ಕೃಷಿ ಹೊಂಡ ಬೋರವೆಲ್‌ಗಳನ್ನು ಹಾಕಿಸಿ ಪರಿಹಾರದ ಲಾಭ ಪಡೆದಿದ್ದಾರೆ. ಅಚ್ಚರಿ ಎಂದರೆ, ಹೈವೇಗಾಗಿ ಅ​ಧಿಸೂಚನೆ ಹೊರಡಿಸಿದ ನಂತರ ಈ ಪ್ರಭಾವಿಗಳು ಸರಕಾರಕ್ಕೇ ವಂಚಿಸಿದರೆಯೇ ಎಂಬ ಅನುಮಾನಗಳ ಮೂಡಿದೆ. ಗಿಡಮರಗಳ ಮೊದಲೇ ಹೆಚ್ಚಿದ್ದೆವು ಎಂಬುದನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಲು ಆಂಧ್ರಪ್ರದೇಶ, ತಮಿಳುನಾಡು ಮುಂದಾದೆಡೆಯ ನರ್ಸರಿಗಳಲ್ಲಿ ಬೆಳೆದು ಮಾರಾಟ ಮಾಡಲಾಗುವ ಮೂರ್ನಾಲ್ಕು ವರ್ಷಗಳ ಬೆಳೆಗಳನ್ನು ತಂದು ನೆಡಲಾಗಿತ್ತಂತೆ !
ಸರ್ಕಾರಕ್ಕೇ ವಂಚಿಸಿದವರಿಗೆ ಲಾಭ ಮಾಡಲು ಹೊರಟ ಸರ್ಕಾರ, ನಿಜವಾದ ನೀರಾವರಿ ರೈತರ ಜಮೀನುಗಳನ್ನು ಖುಷ್ಕಿ ಎಂದು ಪರಿಗಣಿಸಿ, ಕಡಮೆ ಮೊತ್ತದ ಪರಿಹಾರ ನೀಡಲು ಮುಂದಾಗಿರುವುದು ಅದೆಷ್ಟರ ಮಟ್ಟಿಗೆ ಸರಿ ಅನ್ನೋದು ರೈತರ ಮಾತಾಗಿದೆ.

ಸೂರತ್‌-ಚೆನ್ನೈ ಎಕ್ಸಪ್ರೆಸ್‌ ವೇ

ಗುಜರಾತ್‌, ಮಹರಾಷ್ಟ್ರ, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳ ಸಂಪರ್ಕಿಸುವ, ರಾಜ್ಯದ ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರ ಜಿಲ್ಲೆಗಳ ಮಾರ್ಗವಾಗಿ, ಈ ಎಕ್ಸ್ಪೆ್ರಸ್‌ ವೇ ನಿರ್ಮಾಣಗೊಳ್ಳುತ್ತಿದೆ. ಯಾದಗಿರಿ ಜಿಲ್ಲೆಯ ವಡಗೇರಾ ಹಾಗೂ ಶಹಾಪೂರ ತಾಲೂಕುಗಳ 21 ಹಳ್ಳಿಗಳ ಮೂಲಕ ಈ ಎಕ್ಸ್ಪೆ್ರಸ್‌ ವೇ ಸಾಗಿ ಬರಲಿದೆ. ಇದಕ್ಕಾಗಿ 540 ಹೆಕ್ಟರ್‌ ರಷ್ಟುಜಮೀನುಗಳನ್ನು ಸ್ವಾಧಿ​ೕನ ಪಡಿಸಿಕೊಳ್ಳಲಾಗುತ್ತಿದೆ. 718 ಬಹುತೇಕ ಸಣ್ಣ ರೈತರ ಜಮೀನುಗಳು ಈ ಸ್ವಾ​ಧೀನ ವ್ಯಾಪ್ತಿಗೆ ಬರುತ್ತಿವೆ. ಡಿಸೆಂಬರ್‌ 2025ರೊಳಗೆ ಈ ಯೋಜನೆ ಪೂರ್ಣಗೊಳ್ಳಬೇಕಿದೆ. ಸೂರತ್‌ ಹಾಗೂ ಚೆನೈ್ನ ನಡುವಿನ ಈ ಹಿಂದಿನ ಅಂತರವನ್ನು ಸುಮಾರು 400 ಕಿ.ಮೀ ನಷ್ಟು ಕಡಿಮೆ ಆಗಲಿದೆ. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಯಿದು.

Yadgir: ಪರಿಹಾರ ಕೊಟ್ಟು ಪುಣ್ಯಾ ಕಟ್ಟಿಕೊಳ್ರಿ, ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ರೈತರ ಅಳಲು

ಯಾವುದಕ್ಕೆ ಎಷ್ಟು ಪರಿಹಾರ ?

ಭೂಸ್ವಾಧೀನ ಕ್ಷೇತ್ರದಲ್ಲಿನ ಬರುವ ಆಸ್ತಿಪಾಸ್ತಿ ಅಳತೆ ಹಾಗೂ ಪರಿಹಾರ ನಿಗದಿಯನ್ನು ಏಜೆನ್ಸಿಯೊಂದಕ್ಕೆ ನೀಡಲಾಗಿರುತ್ತದೆ. ಎಲ್ಲ ಲೆಕ್ಕಾಚಾರಗಳ ಏಜೆನ್ಸಿಯೇ ನಿರ್ಧರಿಸುತ್ತದೆ. ಉದಾಹರಣೆಗೆ ಚಟ್ನಳ್ಳಿ ಭಾಗದ ತೆರೆದ ಬಾವಿಯೊಂದಕ್ಕೆ 44,567 ರು.ಗಳ ನಿರ್ಧರಿಸಿದರೆ, ಅಣಬಿ ಭಾಗದಲ್ಲಿನ ಪಿವಿಸಿ ಪೈಪ್‌ಲೈನ್‌ಗೆ 23,580 ರು.ಗಳು, ಕೃಷಿ ಹೊಂಡಗಳಿಗೆ 14.77 ಲಕ್ಷ ರು.ಗಳು, ನಿಗದಿ ಪಡಿಸಲಾಗಿದೆ. ಏಜೆನ್ಸಿ ನಿರ್ಧರಿಸಿದ ದರದ ಎರಡು ಪಟ್ಟು ಪರಿಹಾರ ನೀಡಲಾಗುತ್ತದೆ. ಉದಾಹರಣೆಗೆ ಒಂದು ಕೃಷಿ ಹೊಂಡಕ್ಕೆ 14.77 ಲಕ್ಷ ರು.ಗಳ ನಿರ್ಧಾರವಾದರೆ ಸರ್ಕಾರ ಇದರ 2 ಪಟ್ಟು ಪರಿಹಾರ ನೀಡುತ್ತದೆ. ಇನ್ನುಳಿದಂತೆ,

ಒಂದು ಬೋರ್‌ವೆಲ್‌ಗೆ : 2,16,370 ರು.ಗಳು
ಒಂದು ಜಾಲಿ ಗಿಡಕ್ಕೆ : 6,680 ರು.ಗಳು
ಎರಡು ಬನ್ನಿಗಿಡಗಳಿಗೆ : 9,540 ರು.ಗಳು
ಸಾಗವಾನಿ : 24,450 ರು.ಗಳು,
ಎರಡು ಬೇವಿನ ಮರಗಳು : 9,969 ರು.ಗಳು
ಎಸ್‌ಎಸ್‌ಎಂ ಗೋಡೆ ಅಥವಾ ವಾಲ್‌ : 12,52,390
 

click me!