ಹರಪನಹಳ್ಳಿ: ಸಾಂಕ್ರಾಮಿಕ ಕಾಯಿಲೆ ಭೀತಿಯಲ್ಲಿ ಕನ್ನನಾಯಕನಹಳ್ಳಿ

By Suvarna NewsFirst Published Dec 12, 2019, 8:32 AM IST
Highlights

150ಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದರೂ ಸುಳಿಯದ ಆರೋಗ್ಯಾಧಿಕಾರಿಗಳು| ಇಡೀ ಗ್ರಾಮವೇ ಶುದ್ಧ ಕುಡಿಯುವ ನೀರನ್ನು ಬಳಸುತ್ತಿದೆ. ಆದರೂ ಸಾಂಕ್ರಾಮಿಕ ರೋಗದಿಂದ ಮುಕ್ತಿ ಸಿಗುತ್ತಿಲ್ಲ| ಗ್ರಾಮದ ಪ್ರತಿ ಮನೆಯ ಒಬ್ಬಿಬ್ಬರು ಜ್ವರದಿಂದ ಬಳಲುತ್ತಿದ್ದಾರೆ| ಸಂಬಂದಪಟ್ಟ ಆರೋಗ್ಯಾಧಿಕಾರಿಗಳ ಗಮನಕ್ಕೆ ವಿಷಯ ತಂದರೂ ಪ್ರಯೋಜನವಾಗಿಲ್ಲ|

ಹರಪನಹಳ್ಳಿ(ಡಿ.12): ಇಡೀ ಗ್ರಾಮವೇ ಜ್ವರದಿಂದ ಬಳಲುತ್ತಿರುವ ಘಟನೆ ತಾಲೂಕಿನ ಕನ್ನನಾಯಕನಹಳ್ಳಿ (ಅಗ್ರಹಾರ) ಗ್ರಾಮದಲ್ಲಿ ಕಂಡು ಬಂದಿದೆ. 260 ರಿಂದ 300 ಮನೆಗಳ ಚಿಕ್ಕಗ್ರಾಮ ಕನ್ನನಾಯಕನಹಳ್ಳಿ ಜ್ವರದಿಂದ ಬಳಲುತ್ತಿದೆ. ಆದರೂ ಆರೋಗ್ಯಾಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಸುಮಾರು 150 ಕ್ಕೂ ಹೆಚ್ಚು ಜನ ಡೆಂಘೀ ಮಲೇರಿಯಾ ಚಿಕೂನ್‌ಗುನ್ಯ, ಟೈಪಾಯಿಡ್‌ ಸೇರಿದಂತೆ ವಿವಿಧ ಜ್ವರದಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಇಡೀ ಗ್ರಾಮವೇ ಶುದ್ಧ ಕುಡಿಯುವ ನೀರನ್ನು ಬಳಸುತ್ತಿದೆ. ಆದರೂ ಸಾಂಕ್ರಾಮಿಕ ರೋಗದಿಂದ ಮುಕ್ತಿ ಸಿಗುತ್ತಿಲ್ಲ. ಗ್ರಾಮದ ಪ್ರತಿ ಮನೆಯ ಒಬ್ಬಿಬ್ಬರು ಜ್ವರದಿಂದ ಬಳಲುತ್ತಿದ್ದಾರೆ. ಸಂಬಂದಪಟ್ಟಆರೋಗ್ಯಾಧಿಕಾರಿಗಳ ಗಮನಕ್ಕೆ ವಿಷಯ ತಂದರೂ ಪ್ರಯೋಜನವಾಗಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗ್ರಾಮದ ಪಕ್ಕದಲ್ಲೇ ಇರುವ ಮೊರಾರ್ಜಿ ವಸತಿ ಶಾಲೆಯಿಂದ ತ್ಯಾಜ್ಯ ನೀರು ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಗೆ ಸೇರುತ್ತಿರುವುದು ಜ್ವರಕ್ಕೆ ಕಾರಣವಿರಬಹುದು ಎನ್ನಲಾಗಿದೆ. ಇನ್ನಾದರೂ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಲಿ ಎಂದು ಗ್ರಾಮದ ಯುವ ಮುಖಂಡ ಬಿ.ಶಿವಪ್ಪ ಅವರು ಹೇಳಿದ್ದಾರೆ. 

ಕನ್ನನಾಯಕನಹಳ್ಳಿ ಹಾರಕನಾಳು ಗ್ರಾಮ ಪಂಚಾಯಿಯಿಂದ ಇಲ್ಲಿವರೆಗೂ ಒಂದು ನಯಾಪೈಸೆ ಅನುದಾನದ ಅಭಿವೃದ್ಧಿ ಕಂಡಿಲ್ಲ. ಹಣವಿಲ್ಲದ್ದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಇತ್ತ ಸುಳಿಯುವುದಿಲ್ಲ. ಚರಂಡಿ ಹಾಗೂ ರಸ್ತೆ ಸ್ವಚ್ಛತೆಗೆ ಮುಂದಾಗಿಲ್ಲ. ಆದ್ದರಿಂದ ಜ್ವರದ ಭೀತಿ ಗ್ರಾಮಕ್ಕೆ ಆವರಿಸಿದೆ ಎನ್ನುತ್ತಾರೆ ಗ್ರಾಪಂ ಸದಸ್ಯೆ ಭಾಗ್ಯಮ್ಮನವರ ಪತಿ ಕೆ. ಅಶೋಕ್‌.
 

click me!