ಕಲಬುರಗಿ: ಸಾಧಾರಣ ಮಳೆ, ಭೀಮಾ ನದಿಗೆ ಹರಿವು ಹೆಚ್ಚಳ

By Kannadaprabha NewsFirst Published Jul 20, 2023, 9:45 PM IST
Highlights

ಸೊನ್ನ ಗ್ರಾಮದಲ್ಲಿರುವ ಭೀಮಾ ಏತ ನೀರಾವರಿ ಬ್ಯಾರೇಜ್‌ನಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯ 3.166 ಟಿಎಂಸಿ ಇದ್ದು ಬ್ಯಾರೇಜ್‌ನಲ್ಲಿಗ ಗ್ರಾಸ್‌ ಸ್ಟೋರೇಜ್‌ 0.818 ಟಿಎಂಸಿ ಹಾಗೂ ಲೈವ್‌ ಸ್ಟೋರೇಜ್‌ 0.138 ಟಿಎಂಸಿ ಇದೆ. ಕಳೆದ 24 ಗಂಟೆಗಳಲ್ಲಿ ನದಿಗೆ 150 ಕ್ಯುಸೆಕ್‌ನಷ್ಟು ಸಾಧಾರಣ ಒಳ ಹರಿವು ಬಂದಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಒಳ ಹರಿವು ಹೆಚ್ಚಾಗಿ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಬಹುದಾಗಿದೆ.

ಚವಡಾಪುರ(ಜು.20): ಪ್ರಸಕ್ತ ವರ್ಷದ ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆಯುವ ಸಮಯದಲ್ಲಿ ಕಳೆದ ಎರಡು ದಿನಗಳಿಂದ ಅಫಜಲ್ಪುರ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನ ಜೀವನದಿಯಾಗಿರುವ ಭೀಮಾ ನದಿಯಲ್ಲಿ 150 ಕ್ಯುಸೆಕ್‌ನಷ್ಟುಅಲ್ಪ ಪ್ರಮಾಣದ ಒಳ ಹರಿವು ಕಂಡು ಬಂದಿದೆ.

ಸೊನ್ನ ಗ್ರಾಮದಲ್ಲಿರುವ ಭೀಮಾ ಏತ ನೀರಾವರಿ ಬ್ಯಾರೇಜ್‌ನಲ್ಲಿ ಒಟ್ಟು ಸಂಗ್ರಹ ಸಾಮರ್ಥ್ಯ 3.166 ಟಿಎಂಸಿ ಇದ್ದು ಬ್ಯಾರೇಜ್‌ನಲ್ಲಿಗ ಗ್ರಾಸ್‌ ಸ್ಟೋರೇಜ್‌ 0.818 ಟಿಎಂಸಿ ಹಾಗೂ ಲೈವ್‌ ಸ್ಟೋರೇಜ್‌ 0.138 ಟಿಎಂಸಿ ಇದೆ. ಕಳೆದ 24 ಗಂಟೆಗಳಲ್ಲಿ ನದಿಗೆ 150 ಕ್ಯುಸೆಕ್‌ನಷ್ಟು ಸಾಧಾರಣ ಒಳ ಹರಿವು ಬಂದಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಒಳ ಹರಿವು ಹೆಚ್ಚಾಗಿ ಬ್ಯಾರೇಜ್‌ನಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಬಹುದಾಗಿದೆ.

KALABURAGI CRIMES: ಎತ್ತು ಕಳ್ಳನ ಹಿಡಿದು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ

ಮಹಾರಾಷ್ಟ್ರದ ಯಾವುದೇ ಜಲಾಶಯಗಳಿಂದ ನೀರು ನದಿಗೆ ಹರಿಬಿಟ್ಟಿಲ್ಲ ಎಂದು ಕೆಎನ್‌ಎನ್‌ಎಲ್‌ ಅಧಿಕಾರಿ ಸಂತೋಷ ಸಜ್ಜನ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಇನ್ನೂ ಮಳೆ ಸುರಿದ ಕುರಿತಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎಚ್‌. ಗಡಗಿಮನಿ ಕೂಡ ಮಾಹಿತಿ ನೀಡಿದ್ದು ಕಳೆದ 24 ಗಂಟೆಗಳಲ್ಲಿ ಅಫಜಲ್ಪುರ ವಲಯದಲ್ಲಿ 19.9 ಮಿ.ಮಿ, ಕರ್ಜಗಿ ವಲಯದಲ್ಲಿ 26 ಮಿ.ಮಿ, ಅತನೂರ ವಲಯದಲ್ಲಿ 33.4 ಮಿ.ಮಿ ಹಾಗೂ ಗೊಬ್ಬೂರ(ಬಿ) ವಲಯದಲ್ಲಿ 45.4 ಮಿ.ಮಿ ಮಳೆ ದಾಖಲಾಗಿದೆ. ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ ಇನ್ನೂ ಉತ್ತಮ ಮಳೆಯಾಗುವ ಲಕ್ಷಣವಿದೆ. ಹೀಗಾಗಿ ರೈತರು ಇನ್ನೂ ಮುಂಗಾರು ಬಿತ್ತನೆ ಮಾಡಲು ಸಮಯವಿದೆ. ಆದಷ್ಟುಬೀಜ, ಗೊಬ್ಬರ ಸಿದ್ದಪಡಿಸಿಕೊಂಡು ಬಿತ್ತನೆಗೆ ಪೂರಕವಾದಷ್ಟುಮಳೆಯಾದ ತಕ್ಷಣ ಬಿತ್ತನೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂಗಾರು ಆರಂಭಗೊಂಡು ಒಂದೂವರೆ ತಿಂಗಳ ಬಳಿಕ ಮಳೆ ಬರುತ್ತಿರುವುದನ್ನು ಕಂಡು ತಾಲೂಕಿನಾದ್ಯಂತ ರೈತಾಪಿ ವರ್ಗದವರಲ್ಲಿ ಮಂದಹಾಸ ಮೂಡಿದ್ದು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಉತ್ತಮ ಮಳೆಯಾಗಿ ಅಂತರ್ಜಲ ಮಟ್ಟವೃದ್ಧಿಯಾಗಿ ಬೆಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರಿನ ತಾಪತ್ರಯವಾಗದಂತಾದರೆ ಒಳ್ಳೆಯದಾಗುತ್ತದೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

click me!