ಅಧಿಕಾರದಲ್ಲಿದ್ದಾಗ ಸಮಬಾಳು ಕಲ್ಪಿಸಲು ಪ್ರಯತ್ನಿಸಿದ್ದೇನೆ; ಬಿ.ಎಸ್.ಯಡಿಯೂರಪ್ಪ

By Kannadaprabha NewsFirst Published Sep 28, 2022, 8:10 AM IST
Highlights

ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಸವಣ್ಣನವರ ಸರ್ವರಿಗೂ ಸಮಪಾಲು ಸಮಬಾಳು ರೀತಿಯಲ್ಲಿ ಯೋಜನೆಯನ್ನು ಅಕ್ಷರಶಃ ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪರವರು ತಿಳಿಸಿದರು.

ಶಿಕಾರಿಪುರ (ಸೆ.28) : ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಸವಣ್ಣನವರ ಸರ್ವರಿಗೂ ಸಮಪಾಲು ಸಮಬಾಳು ರೀತಿಯಲ್ಲಿ ಯೋಜನೆಯನ್ನು ಅಕ್ಷರಶಃ ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪರವರು ತಿಳಿಸಿದರು.

 

ಬಿಎಸ್‌ವೈಯವರನ್ನು ಪಂಚಮಸಾಲಿ ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಯತ್ನ ವಿಷಾದನೀಯ: ವಿಜಯೇಂದ್ರ

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ನೇಮಕವಾದ ನಂತರದಲ್ಲಿ ಇದೇ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಂಗಳವಾರ ತಾ. ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಯ್ಕೆ ಮಾಡುವ ಪ್ರತಿಷ್ಠಿತ ಕಾರ್ಯಕಾರಿಣಿ ಸಮಿತಿಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವರು, ರಾಷ್ಟಾ್ರಧ್ಯಕ್ಷರು ಅವಕಾಶ ಕಲ್ಪಿಸಿದ್ದಾರೆ. ಮುಖ್ಯಮಂತ್ರಿ ಸಹಿತ ಇದೀಗ ದೊರೆತ ಎಲ್ಲ ಉನ್ನತ ಸ್ಥಾನಮಾನಕ್ಕೆ ತಾಲೂಕಿನ ಕಾರ್ಯಕರ್ತರು ಮುಖಂಡರು ಮತದಾರರಿಗೂ ಈ ಗೌರವ ಸಲ್ಲಲಿದೆ. ಯಾವುದೇ ಹುದ್ದೆ ಸ್ಥಾನಮಾನವಿಲ್ಲದೆ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ತರುವುದಾಗಿ ಭರವಸೆಯನ್ನು ಪ್ರಧಾನಿಗೆ ನೀಡಿದ್ದಾಗಿ ತಿಳಿಸಿದ ಅವರು ಅಭ್ಯರ್ಥಿಗಳ ಆಯ್ಕೆಗೊಳಿಸುವ ಮಹತ್ವದ ಕೇಂದ್ರ ಸಂಸದೀಯ ಮಂಡಳಿಯಲ್ಲಿ 5 ನೇ ಸ್ಥಾನ ನೀಡಿದ್ದು, ಈ ದಿಸೆಯಲ್ಲಿ ರಾಜ್ಯದ ಉದ್ದಗಲಕ್ಕೆ 2 ತಂಡದಲ್ಲಿ ಪ್ರವಾಸ ಮಾಡಿ 140 ಕ್ಕೂ ಅಧಿಕ ಸ್ಥಾನಗಳಿಸುವ ಗುರಿ ಹೊಂದಿದ್ದೇನೆ ಇದರಿಂದ ಮಾತ್ರ ಹುದ್ದೆಗೆ ಸಾರ್ಥಕತೆ ದೊರೆಯಲಿದೆ ಎಂದು ತಿಳಿಸಿದರು.

ಸಂಸದ ರಾಘವೇಂದ್ರರ ಶ್ರಮ, ಗುರುಮೂರ್ತಿಯವರ ಸಲಹೆ ಮೇರೆಗೆ ತಾಲೂಕು ರಾಜ್ಯದಲ್ಲಿಯೇ ನೀರಾವರಿಯಲ್ಲಿ ಮುಂಚೂಣಿಯಲ್ಲಿದೆ. ಇದರಿಂದಾಗಿ ತಾಲೂಕಿನ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರೆತು ಸ್ವಾಭಿಮಾನದಿಂದ ಬದುಕಿದಾಗ ಮಾತ್ರ ನಾವು ಮಾಡಿದ ಕೆಲಸಕ್ಕೆ ಸಾರ್ಥಕತೆ ಸಿಗುತ್ತದೆ. ಪ್ರಧಾನಿ ಮೋದಿ ಸಹ ದೇಶದ ವಿವಿಧ ಭಾಗಗಳಲ್ಲಿಯ ನದಿ ಜೋಡಣೆ ಮಾಡುವ ಮಹತ್ಕಾರ್ಯ ನಡೆಸಿದ್ದಾರೆ ಬೂತ್‌ ಮಟ್ಟದಲ್ಲಿ ಪಕ್ಷ ಸದೃಡವಾಗಬೇಕು ಎಂಬುದು ಪ್ರಧಾನಿ ಮೋದಿ ಅಪೇಕ್ಷೆಯಾಗಿದೆ ಕಾರ್ಯಕರ್ತರು ಮುಖಂಡರು ಈ ದಿಸೆಯಲ್ಲಿ ಶ್ರಮಿಸಿ ಶೇ.75 ಕ್ಕಿಂತ ಅಧಿಕ ಮತಗಳಿಸಿದಲ್ಲಿ ವಿಜಯೇಂದ್ರ ಲಕ್ಷಕ್ಕಿಂತ ಅಧಿಕ ಮತಗಳ ಅಂತರದಲ್ಲಿ ಜಯಗಳಿಸಲು ಸಾದ್ಯ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಮಾತನಾಡಿ,ರಾಜ್ಯಕ್ಕೆ 4 ಬಾರಿ ಸಿಎಂ ಹುದ್ದೆ ಅಲಂಕರಿಸುವ ಜತೆಗೆ 4 ಜನರನ್ನು ಸಿಎಂ ಆಗಿಸಿದ ಹಿರಿಮೆ ಯಡಿಯೂರಪ್ಪನವರಿಗಿದೆ ಉ.ಪ್ರ ಸಿಎಂಗೆ ದೊರೆಯದ ಸ್ಥಾನ ಕೇಂದ್ರ ಸಂಸದೀಯ ಮಂಡಳಿಯಲ್ಲಿ ದೊರೆತಿದೆ ಎಂದ ಅವರು ಯಡಿಯೂರಪ್ಪನವರಿಗೆ ಕುಟುಂಬದ ಜತೆಗೆ ಸಂಪೂರ್ಣ ತಾಲೂಕು ಕುಟುಂಬದ ರೀತಿಯಾಗಿದ್ದು, ಹೋರಾಟದ ಜತೆಗೆ ಎಲ್ಲರ ಜತೆ ಪ್ರೀತಿ ವಿಶ್ವಾಸದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ನಂತರ ರಾಜ್ಯದಲ್ಲಿ 150 ಕ್ಕೂ ಅಧಿಕ ಸ್ಥಾನ ಗೆಲ್ಲಿಸಿ ಪಕ್ಷ ಪುನಃ ಅಧಿಕಾರಕ್ಕೆ ತರುವ ವಾಗ್ದಾನ ನೀಡಿದ ಭೀಷ್ಮರಾಗಿದ್ದಾರೆ ಎಂದು ಬಣ್ಣಿಸಿದರು. ದೇವರಾಜ ಅರಸ್‌ ನಂತರದಲ್ಲಿ ಹಿಂದುಳಿದ ವರ್ಗದ ಸಹಿತ ಬಡವರ ಎಲ್ಲ ವರ್ಗದ ಕಣ್ಣೀರು ಒರೆಸುವ ಪ್ರಾಮಾಣಿಕ ಕಾರ್ಯವನ್ನು ಯಡಿಯೂರಪ್ಪನವರು ಮಾಡಿದ್ದಾರೆ. ಅಧಿಕಾರ ಮನೋರಂಜನೆಗಾಗಿ ಅಲ್ಲ. ತಿಂಗಳಲ್ಲಿ ಹೆಚ್ಚಿನ ಕಾಲ ತಾಲೂಕಿನಲ್ಲಿದ್ದು ಜನತೆಯ ಪ್ರೀತಿ ವಿಶ್ವಾಸಗಳಿಸುವುದಾಗಿ ತಿಳಿಸಿದರು.

ಸಂಸದ ಬಿ ವೈ ರಾಘವೇಂದ್ರರವರು ಮಾತನಾಡಿ, ಪುರಸಭಾ ಸದಸ್ಯನಾಗಿದ್ದ ನನ್ನನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಲು ತಾಲೂಕಿನ ಜನತೆಯೇ ಕಾರಣೀಭೂತರಾಗಿದ್ದಾರೆ. ಹಗಲು ರಾತ್ರಿ ದೇಶದ ರಕ್ಷಣೆಗಾಗಿ ಮೋದಿ ಕಾರ್ಯ ಮಾಡುತ್ತಿದ್ದು, ಅವರ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ತರುವಂತಹಾ ಅವಕಾಶ ಪುನಃ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ.ಹೀಗಾಗಿ ದೇಶದಲ್ಲಿ ಬಿಜೆಪಿ ಪಕ್ಷವನ್ನು ಹೆಚ್ಚು ಸಂಘಟನೆ ಮಾಡುವ ಸದುದ್ದೇಶದಿಂದ ಯಡಿಯೂರಪ್ಪನವರನ್ನು ಸಂಸದೀಯ ಮಂಡಳಿಗೆ ಆಯ್ಕೆಗೊಳಿಸಿದ ಪ್ರಧಾನಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಪಂಚಮಸಾಲಿ ಮೀಸಲಾತಿಗೆ ಯಡಿಯೂರಪ್ಪ ವಿರೋಧ: ಸ್ವಾಮೀಜಿ ಆರೋಪಕ್ಕೆ ವಿಜಯೇಂದ್ರ ಸ್ಪಷ್ಟನೆ

ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರನ್ನು ತಾಲೂಕು ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು. ತಾ.ಬಿಜೆಪಿ ಉಪಾಧ್ಯಕ್ಷರಾಗಿ ವಸಂತಗೌಡ ಹಾಗೂ ಪ್ರ.ಕಾ ಯಾಗಿ ಹನುಮಂತಪ್ಪ ಸಂಕ್ಲಾಪುರ ರವರನ್ನು ನೇಮಕಗೊಳಿಸಲಾಯಿತು. ವೇದಿಕೆಯಲ್ಲಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ,ವಿಪ ಸದಸ್ಯ ರುದ್ರೇಗೌಡ,ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಚನ್ನವೀರಪ್ಪ,ನಿರ್ದೇಶಕ ಬಿ.ಡಿ ಭೂಕಾಂತ್‌, ಗುರುರಾಜ ಜಕ್ಕಿನಕೊಪ್ಪ, ಅಗಡಿ ಆಶೋಕ್‌, ಪುರಸಭಾಧ್ಯಕ್ಷೆ ರೇಖಾಬಾಯಿ, ಜಿಲ್ಲಾಧ್ಯಕ್ಷ ಮೇಘರಾಜ…, ಗಾಯತ್ರಿದೇವಿ,ತಾ.ಅಧ್ಯಕ್ಷ ವೀರೇಶ್‌,ತಲ್ಲೂರು ರಾಜು ಸಹಿತ ಅನೇಕರು ಉಪಸ್ಥಿತರಿದ್ದರು.

click me!