ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ ಹೊಸಪೇಟೆ ಎಪಿಎಂಸಿ ಆವರಣ!

By Kannadaprabha NewsFirst Published Nov 26, 2022, 12:25 PM IST
Highlights
  • ಎಪಿಎಂಸಿಯಲ್ಲಿ ಸ್ವಚ್ಛತೆ ಮಾಯ!
  • ಗಬ್ಬುನಾರುತ್ತಿದೆ ವಿಜಯನಗರದ ಎಪಿಎಂಸಿ ಆವರಣ
  • ಪ್ರವಾಸಿ ನಗರಿಯಲ್ಲಿ ಇಲ್ಲ ಹೈಜೇನಿಕ್‌

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ನ.26) : ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ಎಪಿಎಂಸಿಗೆ ಕಾಲಿಟ್ಟರೆ ಸಾಕು, ಗಬ್ಬು ವಾಸನೆ ಮೂಗಿಗೆ ಅಡರುತ್ತದೆ. ಈ ಎಪಿಎಂಸಿ ಆವರಣದಲ್ಲಿ ತರಕಾರಿ ಸೇರಿ ವಿವಿಧ ಆಹಾರೋತ್ಪನ್ನ ಮಾರಾಟ ಮಾಡಲಾಗುತ್ತದೆ. ಆದರೆ, ಹೈಜೆನಿಕ್‌, ಶುಚಿತ್ವ ಮಾತ್ರ ಮಾಯವಾಗಿದೆ.

ನಗರದ ಎಪಿಎಂಸಿ ಆವರಣ 24 ಎಕರೆ ಇದ್ದು, 168 ಮಳಿಗೆ ಪೈಕಿ 114 ಮಳಿಗೆ ಹಂಚಿಕೆಯಾಗಿದೆ. ಡ್ಯಾಂ ರಸ್ತೆಯಲ್ಲಿ 35 ವಾಣಿಜ್ಯ ಮಳಿಗೆಗಳು ಸೇರಿದಂತೆ ಬಡಾವಣೆ ಪೊಲೀಸ್‌ ಠಾಣೆ, ಕೃಷಿ ಇಲಾಖೆ ಸೇರಿದಂತೆ ಇತರೆ ಮಳಿಗೆಗಳು ಇವೆ. ಇವುಗಳ ಆದಾಯ ಇದ್ದರೂ ಎಪಿಎಂಸಿಯಲ್ಲಿ ರೈತರಿಗೆ ವಿದ್ಯುತ್‌, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಸೌಕರ್ಯ ಇಲ್ಲದಾಗಿದೆ.

ಹೊಸಪೇಟೆಯ ಎಪಿಎಂಸಿ ಎಂಬುದು ದಲ್ಲಾಳಿಗಳ ಅಡ್ಡೆಯಾಗಿ ಮಾರ್ಪಟ್ಟಿರುವ ಬೆನ್ನಿಗೆ ಸ್ವಚ್ಛತೆ ಕೊರತೆಯಿಂದ ಗಬ್ಬೆದ್ದು ನಾರುತ್ತಿದೆ. ಹಾಗಾಗಿ ರೈತರು ಹಾಗು ಜನರು ಸ್ವಚ್ಛತೆಗೆ ಆದ್ಯತೆ ನೀಡಲು ಆಗ್ರಹಿಸಿದ್ದಾರೆ. ಎಪಿಎಂಸಿಯಲ್ಲಿ ಶೇಖರಣೆಯಾಗುವ ತ್ಯಾಜ್ಯದ ರಾಶಿಗಿಂತಲೂ ಹೆಚ್ಚಾದ ದುರ್ವಾಸನೆ ಇಲ್ಲಿ ರಾಚುತ್ತಿದೆ. ಕೊಳೆತ ತರಕಾರಿಯಿಂದ ಜನ ಹೈರಾಣಾಗುತ್ತಿದ್ದಾರೆ. ಇದರಿಂದ ರೋಗರುಜೀನಕ್ಕೂ ಎಡೆ ಮಾಡಿದಂತಾಗುತ್ತಿದೆ.

ಘನತ್ಯಾಜ್ಯ ಘಟಕದಿಂದ ಒಂದೂವರೆ ಕಿ.ಮೀ.ವರೆಗೂ ದುರ್ನಾತ

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಅನುಕೂಲಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಿದ್ದೇವೆ ಎಂದು ಆಡಳಿತ ಮಂಡಳಿಯವರು ಹೇಳಿಕೊಂಡರೂ ಮಗ್ಗುಲಲ್ಲೇ ಹೊಲಸೆದ್ದು ನಾರುವ ಜಾಗದಲ್ಲಿ ರೈತರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಇಲ್ಲಿ ಉತ್ಪತ್ತಿಯಾಗುವ ಸೊಳ್ಳೆ, ನೊಣಗಳು ಈ ಭಾಗದ ಮನೆಗಳಿಗೂ ಮುತ್ತಿಗೆ ಹಾಕುತ್ತಿವೆ. ಮಧ್ಯವರ್ತಿಗಳ ಹಾವಳಿಗಂತೂ ಕಡಿವಾಣ ಹಾಕಲಾಗದೆ ಸೋತು ಕುಳಿತಿರುವ ಎಪಿಎಂಸಿ ಆಡಳಿತ ಮಂಡಳಿ ಕನಿಷ್ಠ ಪಕ್ಷ ಆವರಣದ ಸ್ವಚ್ಛತೆಯನ್ನಾದರೂ ಕಾಪಾಡಲು ಗಮನಹರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ನಗರದ ಎಪಿಎಂಸಿಗೆ ಬಾಳೆ, ಹುಣಸೆ, ಮೆಣಸಿನಕಾಯಿ, ಈರುಳ್ಳಿ, ಬದನೆ, ಟೊಮ್ಯಾಟೊ ಸೇರಿ ಇತರೆ ತರಕಾರಿ ಹಾಗು ರೈತರ ಇತರೆ ಉತ್ಪನ್ನಗಳನ್ನು ತರಲಾಗುತ್ತದೆ. ಹೀಗಿದ್ದರೂ ಎಪಿಎಂಸಿ ಆವರಣದಲ್ಲಿ ವಿದ್ಯುತ್‌, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಇಲ್ಲದೇ ಪರದಾಡುವಂತಾಗಿದೆ. ಎಪಿಎಂಸಿ ಆವರಣದಲ್ಲಿ ರಾಶಿ ಹಾಕಿದ ತರಕಾರಿ ಕೊಳೆತು ನಾರುತ್ತಿದೆ. ಎಪಿಎಂಸಿ ಹಾಗು ನಗರಸಭೆ ಜಂಟಿಯಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು.ಇಂತಹ ಪ್ರದೇಶದಲ್ಲಿ ರೈತರು ಹೇಗೆ ವ್ಯಾಪಾರ,ವಹಿವಾಟು ನಡೆಸಬೇಕು.ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಶುಚಿತ್ವ ಕಾಪಾಡಬೇಕು ಎಂಬುದು ರೈತರ ಒತ್ತಾಯವಾಗಿದೆ. ವಿಜಯಪುರ: ಕುಡಿಯುವ ನೀರಿನಲ್ಲಿ ಹುಳ, ಗಬ್ಬು ವಾಸನೆ, ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ!

click me!