ಸಿದ್ದರಾಮಯ್ಯಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿವಿಮಾತು

By Kannadaprabha NewsFirst Published Sep 17, 2019, 12:49 PM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊನ್ನಾಳಿ ಶಾಸಕ ಬಿಜೆಪಿ ಮುಖಂಡ ಕಿವಿ ಮಾತು ಹೇಳಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಲಿ ಎಂದಿದ್ದಾರೆ. 

ದಾವಣಗೆರೆ [ಸೆ.17]: ಯಡಿಯೂರಪ್ಪನವರಿಗೆ ಹೇಡಿ ಸಿಎಂ ಎಂಬುದಾಗಿ ಬಾಯಿಗೆ ಬಂದಂತೆ ಟೀಕಿಸುವ ಸಿದ್ದರಾಮಯ್ಯ ಮೊಸರಲ್ಲಿ ಕಲ್ಲು ಹುಡುಕುವುದನ್ನು ಮೊದಲು ಬಿಡಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿವಿಮಾತು ಹೇಳಿದರು.

ನ್ಯಾಮತಿ ತಾ. ಸವಳಂಗ ಗ್ರಾಮದಲ್ಲಿ ಶಾಲಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಪ್ರತಿಪಕ್ಷ ನಾಯಕ ಸ್ಥಾನವು ಖಾಲಿಯಾಗಿ ಒಂದೂವರೆ ತಿಂಗಳಾಯಿತು ಸಿದ್ದರಾಮಯ್ಯನವರೇ ಅದರ ಬಗ್ಗೆ ಗಮನ ಹರಿಸಿ ಎಂದರು.

ರಾಜ್ಯದಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಖಾಲಿಯಾಗಿ ಒಂದೂವರೆ ತಿಂಗಳಾಗಿದ್ದರೂ ರಾಷ್ಟ್ರೀಯ ಅಧ್ಯಕ್ಷರೇ ಇಲ್ಲದ, ನಿರ್ಜೀವ ಕೇಂದ್ರ ನಾಯಕರಿರುವ ಕಾಂಗ್ರೆಸ್ಸಿನಿಂದ ಪ್ರತಿಪಕ್ಷ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡಲಾಗಿಲ್ಲ. ನಾಯಕತ್ವವೇ ಇಲ್ಲದೇ ಕಾಂಗ್ರೆಸ್‌ ಈಗ ಮುಳುಗುವ ಹಡಗು ಅಷ್ಟೇ. ಸಿದ್ದರಾಮಯ್ಯ ಫೋಸ್‌ ಕೊಟ್ಟರೆ ಅದೆಲ್ಲಾ ನಡೆಯುವ ಕಾಲವೂ ಇದಲ್ಲ ಎಂದು ರೇಣು ವಾಗ್ಧಾಳಿ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿಪಕ್ಷ ನಾಯಕ ಸ್ಥಾನವನ್ನೂ ದಕ್ಕಿಸಿಕೊಳ್ಳಲಾಗದ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾ, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಮುಳುಗುವ ಹಡಗು. ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲಿರುವವರೆಲ್ಲರೂ ಖಾಲಿಯಾಗುತ್ತಾರೆ. ಈಗಿರುವ ನಿಮ್ಮ ಪಕ್ಷದ ಬಹುತೇಕ ಶಾಸಕರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದೆ ಬರುತ್ತಿದ್ದಾರೆ. ಕಾಂಗ್ರೆಸ್ಸಿಗಂತೂ ದೇಶದಲ್ಲಿ, ರಾಜ್ಯದಲ್ಲಿ ಅಸ್ತಿತ್ವವೇ ಇಲ್ಲ. ದೇಶ, ರಾಜ್ಯದಲ್ಲಿ ಬಿಜೆಪಿ ಸುಭದ್ರ ಅಧಿಕಾರವನ್ನು ನೀಡಲಿದೆ. ಮುಂದೆಯೂ ರಾಜ್ಯ, ರಾಷ್ಟ್ರದಲ್ಲೂ ನಮ್ಮದೇ ಪಕ್ಷವು ಅಧಿಕಾರಕ್ಕೆ ಬರಲಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

click me!