ಕೊರೋನಾ ಅಟ್ಟಹಾಸ: 'ಸೋಂಕು ನಿಯಂತ್ರಣಕ್ಕೆ ಬಂದ್ರೆ ಮಾತ್ರ ಲಾಕ್‌ಡೌನ್‌ ವಾಪಸ್‌'

By Kannadaprabha NewsFirst Published Apr 24, 2020, 9:23 AM IST
Highlights

ರಾಜ್ಯದ 11 ಜಿಲ್ಲೆಗಳಲ್ಲಿ ಗ್ರೀನ್‌ ಝೂನ್‌ ವಾತಾವರಣ| ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಲ್ಲೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುವ ಲಕ್ಷಣ ಕಾಣುತ್ತಿದೆ|ಏಪ್ರಿಲ್‌ ತಿಂಗಳ ಅಂತ್ಯದೊಳಗೆ 10 ಸಾವಿರ ಜನರ ಪರೀಕ್ಷೆಗೆ ಸಿದ್ಧತೆ: ಗೃಹ ಸಚಿವ ಬೊಮ್ಮಾಯಿ|

ಹಾಸನ(ಏ.24): ರಾಜ್ಯಾದ್ಯಂತ ಕೊರೋನಾ ವೈರಸ್‌ ಹರಡುವಿಕೆ ನಿಂತರೇ ಮಾತ್ರ ಲಾಕ್‌ಡೌನ್‌ ವಾಪಸ್‌ ತೆಗೆದುಕೊಳ್ಳಲಾಗುವುದು. ಇದಕ್ಕೆ ಜನರು ಸಂಪೂರ್ಣ ಸಹಕಾರ ನೀಡಿದರೇ ಸಾಧ್ಯವಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಎಸ್‌.ಆರ್‌. ಬೊಮ್ಮಾಯಿ ಹೇಳಿದ್ದಾರೆ. 

ನಗರದ ಹೊರವಲಯದಲ್ಲಿ ಉಡುಪಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 11 ಜಿಲ್ಲೆಗಳಲ್ಲಿ ಗ್ರೀನ್‌ ಝೂನ್‌ ವಾತಾವರಣ ಇದೆ. ಮುಂದಿನ ದಿನಗಳಲ್ಲಿ ಇತರೆ ಜಿಲ್ಲೆಗಳಲ್ಲೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುವ ಲಕ್ಷಣ ಕಾಣುತ್ತಿದೆ ಎಂದರು.

ಮೇ. 3ರ ಒಳಗೆ ಗ್ರಾಫ್‌ ಪ್ಲ್ಯಾಟ್‌ ಮಾಡುವ ಪ್ರಯತ್ನದಲ್ಲಿ ಸರ್ಕಾರ ಇದೆ. ಈಗಾಗಲೇ ಕೊರೋನಾ ಸಂಬಂಧಿಸಿದಂತೆ 3 ಸಾವಿರ ಪರೀಕ್ಷೆಗೆ ಒಳಪಡಿಸಲಾಗಿದೆ. ಏಪ್ರಿಲ್‌ ತಿಂಗಳ ಅಂತ್ಯದೊಳಗೆ 10 ಸಾವಿರ ಜನರ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ. ಈ ಸಮಯದಲ್ಲಿ ಜನರ ಓಡಾಟಗಳು ಕಡಿಮೆ ಆಗಬೇಕಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿಯೇ ಓಡಾಟಕ್ಕೆ ನಿರ್ಬಂಧ ಹೇರಿರುವುದಾಗಿ ತಿಳಿಸಿದ್ದಾರೆ.

ಕೆಲ‌ ಮಂತ್ರಿಗಳಿಗೆ ಕಂಟಕ‌: ಕರ್ನಾಟಕದ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ...! 

ಹಾಸನದಲ್ಲಿ ಗ್ರೀನ್‌ ಝೂನ್‌ ವಾತಾವರಣ ನಿರ್ಮಾಣವಾಗಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಶ್ರಮವು ಇದೆ. ಲಾಕ್‌ಡೌನ್‌ ಅನ್ನು ಜನತೆ ಎಲ್ಲಿವರೆಗೂ ಶಿಸ್ತಿನಿಂದ ಪಾಲಿಸದರೇ ದುಷ್ಪರಿಣಾಮ ಬೀರುವುದಿಲ್ಲ. ಇಂತಹ ವೇಳೆ ಕಾನೂನನ್ನು ಪಾಲಿಸಲು ಸಾರ್ವಜನಿಕರ ಸಹಕಾರ ಅತ್ಯಂತ ಪ್ರಮುಖವಾಗಿದೆ. ಅದರಂತೆ ಜನತೆಯು ಕೂಡ ಸ್ವಯಂ ಪ್ರೇರಿತವಾಗಿ ಶಿಸ್ತನ್ನು ಪಾಲಿಸಬೇಕು ಎಂದರು.

ಕೊರೋನಾ ವೈರಸ್‌ ಹರಡದಂತೆ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ರಕ್ಷಕರು ಮತ್ತು ಭದ್ರತೆಯಲ್ಲಿ ತೊಡಗಿರುವವರಿಗೆ ಹೆಚ್ಚಿನ ರಕ್ಷಣೆ ಕೊಡಬೇಕಾಗಿರುವ ಕಾರಣ ಇಂದಿನಿಂದ ಕೆಲವುಗಳ ಮೇಲೆ ಸುಗ್ರಿವಾಜ್ಞೆ ಜಾರಿ ಮಾಡಲಾಗಿದ್ದು, ಈ ಬಗ್ಗೆ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕರ್ತವ್ಯದ ವೇಳೆ ಯಾರಾದರೂ ಅಡ್ಡಿಪಡಿಸಲು ಬಂದರೇ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಕರ್ನಾಟಕದಲ್ಲಿ ಕೊರೋನಾ ವೈರಸ್‌ ವಿಚಾರವಾಗಿ ಕೆಲ ದಿನಗಳಿಂದ ಹರಡದಂತೆ ಉತ್ತಮವಾದ ರಕ್ಷಣಾ ಕಾರ್ಯಗಳು ನಡೆಯುತ್ತಿದೆ ಎಂದು ಇದೇ ವೇಳೆ ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
 

click me!