ಇಂದಿರಾ ಕ್ಯಾಂಟೀನ್ ಸದ್ಬಳಕೆ ಮಾಡಿಕೊಂಡು ಸಹಕರಿಸಿ: ಸಚಿವ ಮಧು ಬಂಗಾರಪ್ಪ

Published : Mar 15, 2026, 04:30 PM IST
Madhu Bangarappa

ಸಾರಾಂಶ

ಕಾರ್ಮಿಕ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಅತ್ಯಂತ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್‌ನ್ನು ಸದ್ಬಳಕೆ ಮಾಡಿಕೊಂಡು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಹೊಳೆಹೊನ್ನೂರು (ಮಾ.15): ಕಾರ್ಮಿಕ ವರ್ಗ, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಅತ್ಯಂತ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್‌ನ್ನು ಸದ್ಬಳಕೆ ಮಾಡಿಕೊಂಡು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಗಾಂಧಿ ಸರ್ಕಲ್ ಬಳಿ ನೂತನವಾಗಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್‌ನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಗೆ ಒಟ್ಟು 16 ಇಂದಿರಾ ಕ್ಯಾಂಟೀನ್ ಮಂಜೂರಾಗಿದ್ದು, ಹೊಳೆಹೊನ್ನೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಈ ಕ್ಯಾಂಟೀನ್ 12ನೆಯದ್ದಾಗಿದೆ.

ಇಂದಿರಾ ಕ್ಯಾಂಟೀನ್‌ನಿಂದಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸಹಕಾರ ಆಗಲಿದೆ. ಮಾಜಿ ಪ್ರಧಾನಿಯವರಾದ ಇಂದಿರಾ ಗಾಂಧಿಯವರ 20 ಅಂಶಗಳ ಕಾರ್ಯದಲ್ಲಿ ಮೊದಲನೆಯದ್ದೇ ಆಹಾರ ಭದ್ರತೆಯಾಗಿತ್ತು. ನಮ್ಮ ಮುಖ್ಯಮಂತ್ರಿಯವರು ಸಹ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ 2013ರಲ್ಲಿ ಮೊದಲಿಗೆ ಆದ್ಯತೆ ನೀಡಿದ್ದು ಅನ್ನಭಾಗ್ಯ ಯೋಜನೆಗೆ ಎಂದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿ ದಿನ ವಿವಿಧ ಬಗೆಯ ತಿಂಡಿ ಮತ್ತು ಊಟ ಲಭ್ಯವಿದ್ದು, ತಿಂಡಿಗೆ ರು.5 ಮತ್ತು ಊಟಕ್ಕೆ ರು.10 ಇರುತ್ತದೆ. ಸಾರ್ವಜನಿಕರು ಕ್ಯಾಂಟೀನ್‌ಗೆ ಬರಬೇಕು, ಆಹಾರದ ಗುಣಮಟ್ಟದ ಪರೀಕ್ಷೆ ಮಾಡಿ, ಕ್ಯಾಂಟೀನ್‌ನೊಂದಿಗೆ ಸಹಕರಿಸಬೇಕು ಎಂದು ಹೇಳಿದರು. ಶಾಲೆಗಳಲ್ಲಿ 57 ಲಕ್ಷ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ, ಹಾಲನ್ನು ನೀಡಲಾಗುತ್ತಿದೆ. ನಾನು ಸಹ ಶಾಲೆಗಳಿಗೆ ಭೇಟಿ ನೀಡಿದ ವೇಳೆ ಬಿಸಿಯೂಟ ಸೇವನೆ ಮಾಡುತ್ತೇನೆ. ಅಧಿಕಾರಿಗಳು ಸಹ ಭೇಟಿ ನೀಡಿದ ವೇಳೆ ಬಿಸಿಯೂಟ ಸೇವಿಸಿ, ಗುಣಮಟ್ಟವನ್ನು ಪರೀಕ್ಷಿಸಬೇಕು ಎಂದರು.

ಹೊಳೆಹೊನ್ನೂರಿಗೆ ಕೆಪಿಎಸ್ ಶಾಲೆ: ಹೊಳೆಹೊನ್ನೂರು ಸರ್ಕಾರಿ ಪ್ರೌಢಶಾಲೆಯನ್ನು ಕೆಪಿಎಸ್ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು ಇಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತವಾಗಿ ಒಂದೇ ಸೂರಿನಡಿ ಶಿಕ್ಷಣ ಮತ್ತು ಉಚಿತ ಸಾರಿಗೆ ವ್ಯವಸ್ಥೆ, ಕಂಪ್ಯೂಟರ್, ಕೌಶಲ್ಯಾಭಿವೃದ್ದಿ, ಕಲೆ ಇತರೆ ಪೂರಕ ಶಿಕ್ಷಣವನ್ನು ಇಲ್ಲಿ ನೀಡಲಾಗುವುದು. 3500 ಕೋಟಿ ರು. ವೆಚ್ಚದಲ್ಲಿ 1000 ಕೆಪಿಎಸ್ ಶಾಲೆಗಳಿಗೆ ಗುದ್ದಲಿ ಪೂಜೆಯನ್ನು ಏಪ್ರಿಲ್ ಅಂತ್ಯದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಶಿವಮೊಗ್ಗದಲ್ಲಿಯೇ ನೆರವೇರಿಸುವರು ಎಂದು ತಿಳಿಸಿದರು. ಈ ಭಾಗದಲ್ಲಿನ ಕುಡಿಯುವ ನೀರು, ಬಸ್ ವ್ಯವಸ್ಥೆ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವರ್ಗಾವಣೆ ಸಮಸ್ಯೆಗಳ ಕುರಿತು ಸಭೆ ನಡೆಸಿ, ಚರ್ಚಿಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಇಂದಿರಾ ಕ್ಯಾಂಟೀನ್ ಬಹು ಉಪಯುಕ್ತ

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಕಾರ್ಮಿಕ ವರ್ಗ, ಬಡ ವರ್ಗದವರಿಗೆ ಇಂದಿರಾ ಕ್ಯಾಂಟೀನ್ ಬಹು ಉಪಯುಕ್ತವಾಗಿದೆ. ಇಲ್ಲಿ ಆಹಾರದ ಗುಣಮಟ್ಟ ನಿರ್ವಹಣೆ ಚೆನ್ನಾಗಿ ಮಾಡಿಕೊಂಡು ಹೋದರೆ ಇಂದಿರಾ ಕ್ಯಾಂಟೀನ್ ಯೋಜನೆ ಸಾರ್ಥಕವಾಗುತ್ತದೆ. ಆಹಾರ ಭದ್ರತೆಗಾಗಿ ಹೋರಾಡಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಈ ಕ್ಯಾಂಟೀನ್‌ಗೆ ಇಟ್ಟಿರುವುದು ಅತ್ಯಂತ ಸೂಕ್ತವಾಗಿದ್ದು, ಎಲ್ಲರೂ ಕ್ಯಾಂಟೀನ್‌ನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿದರು. ಇದೇ ವೇಳೆ ಹೊಳೆಹೊನ್ನೂರು ಸಮುದಾಯ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ಬೇರೆಡೆ ವರ್ಗಾವಣೆ ಮಾಡಬಾರದು ಎಂದು ಸಾರ್ವಜನಿಕರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದರು.

ಡಿಯುಡಿಸಿ ಯೋಜನಾ ನಿರ್ದೇಶಕ ರಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಗೆ 7 ಕ್ಯಾಂಟೀನ್ ಮಂಜೂರಾಗಿ, ಅವು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ. 2022-23ನೇ ಸಾಲಿಗೆ 9 ಕ್ಯಾಂಟೀನ್ ಮಂಜೂರಾಗಿದ್ದು, ಹೊಳೆಹೊನ್ನೂರಲ್ಲಿ ಇಂದು ಉದ್ಘಾಟಿಸುತ್ತಿರುವುದು 12ನೇ ಕ್ಯಾಂಟೀನ್ ಆಗಿದೆ. ಪ್ರತಿ ದಿನ ಬೆಳಿಗ್ಗೆ 2 ತರಹದ ತಿಂಡಿ ಸಿದ್ಧವಿರುತ್ತದೆ. ಬೆಳಗಿನ ತಿಂಡಿಗೆ ರು. 5 ಮತ್ತು ಮಧ್ಯಾಹ್ನ, ರಾತ್ರಿ ಊಟಕ್ಕೆ ತಲಾ 10 ರು. ದರ ನಿಗದಿಪಡಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ದೇವಿಕುಮಾರ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಪಾಲ್ಗೊಂಡಿದ್ದರು.

PREV
Read more Articles on
click me!

Recommended Stories

ಪಾರಂಪರಿಕ ಕಲಾ ಉತ್ಪನ್ನಗಳಿಗೆ ಬೆಂಗಳೂರಿನಲ್ಲಿ ಹೊಸ ಮಾರುಕಟ್ಟೆ: ಸಚಿವ ಶಿವಾನಂದ ಪಾಟೀಲ
ಕರ್ನಾಟಕದಲ್ಲಿ 1 ರೂ.ಗೆ ಹಾಲು ಮಾರಾಟ: ತನಿಖೆಗೆ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಆಗ್ರಹ