ಐತಿಹಾಸಿಕ ಕೃಷ್ಣಾನಗರ ಕೋಟೆ ಸ್ವಚ್ಛತೆಗೆ ಹಿಂದೇಟು

By Kannadaprabha NewsFirst Published Dec 23, 2022, 12:33 PM IST
Highlights

ಕೋಟೆಯ ಸ್ವಚ್ಛತಾ ಕಾರ್ಯಕ್ಕೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಮುಂದಾಗದೆ ಪುರಾತತ್ವ ಇಲಾಖೆ ನಿಯಮಗಳಿಂದ ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಇತ್ತೀಚಿಗೆ ಅಲ್ಲೊಂದು ಇಲ್ಲೊಂದು ಕಲ್ಲು ಬಂಡೆಗಳು ಉದುರುತ್ತಿದ್ದು ಕೋಟೆಯು ಅಳಿವಿನಂಚಿಗೆ ಸಾಗುತ್ತಿದೆ.

ರಾಮು ಅರಕೇರಿ

 ಸಂಡೂರು (ಡಿ.23) : ಇತಿಹಾಸ ಸೃಷ್ಟಿಸಬೇಕಾದರೆ ಇತಿಹಾಸ ಅರಿತಿರಬೇಕು ಎಂಬ ಮಾತಿದೆ. ಪುರಾತನ ಕಾಲದ ಇತಿಹಾಸವನ್ನು ಆ ಕಾಲದಲ್ಲಿ ಕಟ್ಟಿದ ದೇವಾಲಯ, ಕೋಟೆ, ಸ್ಮಾರಕಗಳು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿಕೊಡುತ್ತವೆ. ಹೀಗೆ ಇತಿಹಾಸದ ಕುರುಹು ಉಳಿದ ಸಂಡೂರು ತಾಲೂಕಿನ ಕೃಷ್ಣಾನಗರದ ಐತಿಹಾಸಿಕ ಕೋಟೆಯೂ ಒಂದು. ಆದರೆ ಈ ಕೋಟೆ ಅವಸಾನವಾಗುತ್ತಿದ್ದು, ಇದರ ರಕ್ಷಣೆಗೆ ಮಾತ್ರ ಯಾರೂ ಮುಂದಾಗುತ್ತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಕೋಟೆಯ ಸ್ವಚ್ಛತಾ ಕಾರ್ಯಕ್ಕೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಮುಂದಾಗದೆ ಪುರಾತತ್ವ ಇಲಾಖೆ ನಿಯಮಗಳಿಂದ ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಇತ್ತೀಚಿಗೆ ಅಲ್ಲೊಂದು ಇಲ್ಲೊಂದು ಕಲ್ಲು ಬಂಡೆಗಳು ಉದುರುತ್ತಿದ್ದು ಕೋಟೆಯು ಅಳಿವಿನಂಚಿಗೆ ಸಾಗುತ್ತಿದೆ.

ಕಲಬುರಗಿ: ಸೋಮೇಶ್ವರ ಮಂದಿರ ಜೀರ್ಣೋದ್ಧಾರಕ್ಕೆ ಆಂದೋಲಾ ಸಿದ್ದಲಿಂಗ ಸ್ವಾಮಿಜಿ ಆಗ್ರಹ

 

ಕೃಷ್ಣಾನಗರ ಕೋಟೆಯು ಐತಿಹಾಸಿಕ ಹಿನ್ನೆಲೆ ಹೊಂದಿದ್ದು. ಇದನ್ನು ಹೈದರಾಲಿ ಆರಂಭಿಸಿದ್ದರೆ ಆತನ ಮಗ ಟಿಪ್ಪುಸುಲ್ತಾನ್‌ ಪೂರ್ಣಗೊಳಿಸಿದ ಎಂದು ಹೇಳಲಾಗುತ್ತದೆ. ಸುಮಾರು 200-250 ವರ್ಷಗಳ ಇತಿಹಾಸವಿರುವ ಕೋಟೆಯು ಅಲ್ಲಲ್ಲಿ ಶಿಥಿಲಗೊಂಡು ಮಳೆಯ ಕಾರಣಕ್ಕೆ ಬಿದ್ದು ಹೋಗಿದ್ದು, ಅದನ್ನು ದುರಸ್ತಿ ಮಾಡಲಾಗಿದೆ. ಆದರೆ ಇತ್ತೀಚಿಗೆ ಇಲ್ಲಿನ ತಾಯಮ್ಮ ಗುಡಿಯ ಬಳಿಯ ದ್ವಾರದ ಕಲ್ಲುಗಳು ಉರುಳಿ ಬಿದ್ದಿದ್ದು ದಿನದಿನಕ್ಕೂ ಸ್ಮಾರಕಗಳು ಹಾಳಾಗುತ್ತಿವೆ. ಇನ್ನೊಂದೆಡೆ ಕೋಟೆಯ ಮೇಲೆ ಗಿಡಗಂಟಿ ಹಾಗೂ ದೊಡ್ಡ ಮರಗಳು ಬೆಳೆದು ಮತ್ತಷ್ಟುಶಿಥಿಲಗೊಳಿಸುತ್ತಿವೆ. ಕೋಟೆಯ ಒಳಗಡೆ ಕೃಷ್ಣಾನಗರ ಗ್ರಾಮಸ್ಥರ ವಾಸವಿದ್ದು, ಸಾರ್ವಜನಿಕ ಶೌಚಾಲಯಕ್ಕೂ ಇದೇ ಕೋಟೆ ಬಳಸಲಾಗುತ್ತಿದೆ ಎಂಬುದು ವಿಷಾದನೀಯ ಸಂಗತಿ.

ಸ್ವಚ್ಛತೆಗೆ ಹಿಂದೇಟು:

ಕೃಷ್ಣಾ ನಗರ ಸ್ವಂತ ಗ್ರಾಪಂ ಮುಖ್ಯ ಕಚೇರಿ ಹೊಂದಿದ್ದು, ಸ್ಥಳೀಯ ಆಡಳಿತವು ಸ್ವಚ್ಛತಾ ಕಾರ್ಯಕ್ಕೆ ಹಿಂದೇಟು ಹಾಕುತ್ತಿದೆ. ಪುರಾತತ್ವ ಇಲಾಖೆ ನಿಯಮದಂತೆ ಇಲ್ಲಿನ ಕೋಟೆಯ ಮೇಲೆ ಯಾವುದೇ ಕಾಮಗಾರಿ ಕೈಗೊಳ್ಳಲು ಹಿಂಜರಿಕೆ ಎನ್ನುತ್ತಾರೆ ಇಲ್ಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು. ಸ್ವಚ್ಛತೆ ವೇಳೆ ಯಾವುದೇ ಸ್ಮಾರಕಕ್ಕೆ ಹಾನಿಯಾದರೆ ಕಾನೂನು ತೊಡಕಾಗುತ್ತದೆ ಎಂಬುದು ಇವರ ವಾದ. ಅಲ್ಲದೇ ಪುರಾತತ್ವ ಇಲಾಖೆ ಅಧಿಕಾರಿಗಳು ಕೂಡಾ ಮುತುವರ್ಜಿ ವಹಿಸಿ ಕನಿಷ್ಠ ಸ್ವಚ್ಛತೆಗೂ ಮುಂದಾಗದೆ ಐತಿಹಾಸಿಕ ಕೋಟೆ ಹಾಳಾಗುತ್ತಿರುವುದಂತೂ ಸತ್ಯ. ರಾಜ್ಯ ಪುರಾತತ್ವ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸ್ವಚ್ಛತೆ ಸಂದರ್ಭದಲ್ಲಿ ಮುಂದೆ ನಿಂತು ಗ್ರಾಪಂ ಸ್ವಚ್ಛತಾ ಕಾರ್ಯಕ್ಕೆ ಸಹಕರಿಸುವ ವಾಗ್ದಾನ ಇಲಾಖೆಯ ಅಧಿಕಾರಿ ಪ್ರಹ್ಲಾದ್‌ ನೀಡಿದ್ದಾರೆ.

ಹಂಪಿಯಲ್ಲಿ ಧರೆಗುರುಳಿದ ಐತಿಹಾಸಿಕ ಕೋಟೆ ಗೋಡೆ

ಕೃಷ್ಣಾನಗರಕೋಟೆಯ ಸ್ವಚ್ಛತೆಗೆ ಗ್ರಾಪಂನಿಂದ 2ಲಕ ್ಷಅನುದಾನ ಮೀಸಲಿಟ್ಟಿದ್ದೇವೆ. ಪುರಾತತ್ವ ಇಲಾಖೆ ಅಧಿಕಾರಿಗಳು ಸಮ್ಮತಿಸಿದರೆ ಅವರ ಸಮ್ಮುಖದಲ್ಲೇ ಸ್ವಚ್ಛತಾ ಕಾರ್ಯ ನಡೆಸಲಾಗುವುದು.

ಗುರುಪ್ರಸಾದ್‌, ಪಿಡಿಒ ಕೃಷ್ಣಾನಗರ

ಐತಿಹಾಸಿಕ ಕೃಷ್ಣಾನಗರಕೋಟೆಯ ಅಭಿವೃದ್ಧಿ ತಾಂತ್ರಿಕವಾಗಿ ಕಷ್ಟಸಾಧ್ಯವಾಗಿದ್ದು, ಆದಾಗ್ಯೂ ಕೋಟೆಗೆ ಲೇಸರ್‌ ಲೈಟ್‌ ಹಾಕಿಸಿ ಅವಶ್ಯಕವಿರುವ ಕಡೆಗಳಲ್ಲಿ ಪಾರ್ಕ್ ಮಾಡಲು ಸಿದ್ಧನಿದ್ದೇನೆ.

ಇ.ತುಕಾರಾಮ್‌ ಶಾಸಕ

click me!