BBMP: ನ್ಯಾಯಾಂಗ ನಿಂದನೆ: ಜೈಲಿಗೆ ಹೋಗಲು ಬ್ಯಾಗ್‌ ಸಮೇತ ಸಿದ್ಧರಾಗಿ ಬನ್ನಿ: ಹೈಕೋರ್ಟ್‌

By Kannadaprabha NewsFirst Published Feb 16, 2022, 4:51 AM IST
Highlights

*  ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿಯಲ್ಲಿ ಕಸ ವಿಲೇವಾರಿಗೆ ಕಿಡಿ
*  ಖುದ್ದು ವಿಚಾರಣೆಗೆ ಹಾಜರಾಗುವಂತೆ ಆಯುಕ್ತರಿಗೆ ತಾಕೀತು
*  ವಿಚಾರಣೆಯನ್ನು ಮ.5ಕ್ಕೆ ಮುಂದೂಡಿದ ಹೈಕೋರ್ಟ್‌ 
 

ಬೆಂಗಳೂರು(ಫೆ.16): ನ್ಯಾಯಾಲಯದ ನಿರ್ಬಂಧ ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯವನ್ನು ಸುರಿಯುತ್ತಿರುವ ಪಾಲಿಕೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಗುಡುಗಿರುವ ಹೈಕೋರ್ಟ್‌(High Court of Karnataka), ಮಾ.5ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಿಬಿಎಂಪಿ(BBMP) ಮುಖ್ಯ ಆಯುಕ್ತರಿಗೆ ತಾಕೀತು ಮಾಡಿದೆ.

ಬಿಬಿಎಂಪಿ ಅಧಿಕಾರಿಗಳನ್ನು ನ್ಯಾಯಾಲಯದ ಅಂಗಳದಿಂದಲೇ ಜೈಲಿಗೆ ಕಳುಹಿಸಲಾಗುವುದು. ಜೈಲಿಗೆ(Jail) ಹೋಗಲು ಗಂಟು ಮೂಟೆ ಕಟ್ಟಿಕೊಂಡು ಸಿದ್ಧವಾಗಿ ಬರುವಂತೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಪಾಲಿಕೆಯ ವಕೀಲರಿಗೆ ಹೈಕೋರ್ಟ್‌ ಇದೇ ವೇಳೆ ಮೌಖಿಕವಾಗಿ ತಿಳಿಸಿತು.

News Hour: ಎಕ್ಸಾಂ ಬಿಡ್ತೇವೆ, ಆದರೆ ಹಿಜಾಬ್ ತೆಗೆಯಲ್ಲ... ಹೈಕೋರ್ಟ್‌ನಲ್ಲಿ ಏನೇನಾಯ್ತು?

ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮಪರ್ಕವಾಗಿ ವಿಲೇವಾರಿ ಮಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ತಿಳಿಸಿ 2012ರಲ್ಲಿ ಸಲ್ಲಿಸಲಾಗಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕೆಂಡಕಾರಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಸುರಿಯುವುದರಿಂದ ಬಿಬಿಎಂಪಿಯನ್ನು ನಿರ್ಬಂಧಿಸಿ 2021ರ ಮಾ.6ರಂದು ಹೈಕೋರ್ಟ್‌ ಆದೇಶಿಸಿತ್ತು. ಆದರೂ ನ್ಯಾಯಾಲಯದ ಆದೇಶದ ನಂತರವೂ ಮಿಟ್ಟಗಾನಹಳ್ಳಿಯಲ್ಲಿ ಕ್ವಾರಿ ಪ್ರದೇಶಲ್ಲಿ ಕಸ ಸುರಿಯಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಸಾಮಾಜಿಕ ಸುಧಾರಣೆ ತರಲು ಒಂದು ಧರ್ಮದ ಮೂಲ ಆಚರಣೆಗಳನ್ನೇ ತಿದ್ದಬಾರದು: ಕಾಮತ್‌ ಪ್ರತಿಪಾದನೆ

ಕೆಎಸ್‌ಪಿಸಿಬಿ ಪರ ವಕೀಲರು, ತ್ಯಾಜ್ಯ(Waste) ಸುರಿಯಲು ಮಂಡಳಿಯಿಂದ ಪಾಲಿಕೆಗೆ ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂದು ಇದೇ ವೇಳೆ ನ್ಯಾಯಪೀಠಕ್ಕೆ ಸ್ಪಷ್ಟಪಸಿದರು.

ಮತ್ತೊಂದೆಡೆ ಪ್ರಕರಣ ಸಂಬಂಧ ಸ್ವತಃ ಬಿಬಿಎಂಪಿಯೇ 2021ರ ನ.23ರಂದು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯವನ್ನು ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ ಎಂದು ಹೇಳಿತ್ತು.

ಇದರಿಂದ ತೀವ್ರ ಬೇಸರಗೊಂಡ ನ್ಯಾಯಪೀಠ, ಮಾ.6ರ ನ್ಯಾಯಾಲಯ(Court) ನೀಡಿರುವ ಆದೇಶವನ್ನು ಬಿಬಿಎಂಪಿ ಉಲ್ಲಂಘನೆ ಮಾಡಿರುವುದು ಪ್ರಮಾಣ ಪತ್ರದಿಂದ ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ನ್ಯಾಯಾಂಗ ನಿಂದನೆಯಾಗಿದೆ(Judicial Abuse). ಯಾರ ಆದೇಶದ ಮೇರೆಗೆ ಕ್ವಾರಿ ಪ್ರದೇಶದಲ್ಲಿ ತ್ಯಾಜ್ಯ ಸುರಿಯಲಾಗಿದೆ ಎಂದು ಪಾಲಿಕೆ ಪರ ವಕೀಲರನ್ನು ಪ್ರಶ್ನಿಸಿತು. ಅಲ್ಲದೆ, ಮುಂದಿನ ವಿಚಾರಣೆಗೆ ಬಿಬಿಎಂಪಿ ಆಯುಕ್ತರು ಹಾಜರಾಗಲಿ. ಅವರು ಜೈಲಿಗೆ ಹೋಗಲಿ. ನ್ಯಾಯಾಲಯವು ತಮ್ಮನ್ನು ಜೈಲಿಗೆ ಕಳುಹಿಸಲಿ ಎಂಬುದಾಗಿ ಬಿಬಿಎಂಪಿಯ ಕೆಲ ಅಧಿಕಾರಿಗಳು ಬಯಸುತ್ತಿದ್ದಾರೆ ಎಂದು ಮೌಖಿಕವಾಗಿ ನುಡಿಯಿತು.

Hijab Row: ಹೈಕೋರ್ಟ್‌ ಆದೇಶ ಉಲ್ಲಂಘಿಸಿದರೆ ಮುಲಾಜಿಲ್ಲದೇ ಕ್ರಮ: ರಾಮನಗರ ಎಸ್‌ಪಿ ಖಡಕ್‌ ವಾರ್ನಿಂಗ್‌

ನಂತರ ಪ್ರಕರಣ ಸಂಬಂಧ ಮುಂದಿನ ವಿಚಾರಣೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರು(BBMP Chief Commissioner) ಖುದ್ದು ಹಾಜರಾಗಬೇಕು. ಹೈಕೋರ್ಟ್‌ ನಿರ್ಬಂಧ ಆದೇಶದ ಹೊರತಾಗಿಯೂ ಯಾರ ಆದೇಶದ ಮೇರೆಗೆ ಘನತ್ಯಾಜ್ಯವನ್ನು ಕ್ವಾರಿ ಪ್ರದೇಶದಲ್ಲಿ ಸುರಿಯಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಮುಖ್ಯ ಆಯುಕ್ತರು ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮ.5ಕ್ಕೆ ಮುಂದೂಡಿತು.

ಅಲ್ಲದೆ, ಜೈಲಿಗೆ ಹೋಗಲು ಬ್ಯಾಗು ಹಾಗು ಅಗತ್ಯ ವಸ್ತುಗಳೊಂದಿಗೆ ಸಿದ್ಧರಾಗಿ ಬರುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ. ಅಧಿಕಾರಿಗಳನ್ನು ಈ ಬಾರಿ ಖಂಡಿತವಾಗಿ ನ್ಯಾಯಾಲಯದ ಅಂಗಳದಿಂದಲೇ ಜೈಲಿಗೆ ಕಳುಹಿಸಲಾಗುವುದು. ಹೈಕೋರ್ಟ್‌ ಏನೆಂಬುದನ್ನು ಅಧಿಕಾರಿಗಳಿಗೆ ಪಾಠ ಕಲಿಸಬೇಕು. ಕೋರ್ಟ್‌ ಆದೇಶ ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದನ್ನು ಅವರಿಗೆ ಅರಿವಾಗಬೇಕು ಎಂದು ಕಟುವಾಗಿ ನುಡಿಯಿತು.
 

click me!