Heavy Rain Vijayapur: ಪ್ರವಾಹ, ಬೆಳೆಹಾನಿ; ಕೇಂದ್ರದ ಅಧ್ಯಯನ ತಂಡ ಭೇಟಿ

By Ravi NayakFirst Published Sep 9, 2022, 11:49 AM IST
Highlights

ಭಾರತ ಸರ್ಕಾರದ ಅಂತರ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಮಳೆಯಿಂದಾದ ಹಾನಿಯ ಪರಿಶೀಲನೆಗಾಗಿ ವಿಜಯಪುರ ಜಿಲ್ಲೆಗೆ ಭೇಟಿ ನೀಡಿತು.

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ.09): ಭಾರತ ಸರ್ಕಾರದ ಅಂತರ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡವು ಮಳೆಯಿಂದಾದ ಹಾನಿಯ ಪರಿಶೀಲನೆಗಾಗಿ ವಿಜಯಪುರ ಜಿಲ್ಲೆಗೆ ಭೇಟಿ ನೀಡಿತು.
ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ಹಾಗೂ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ ಅವರನ್ನೊಳಗೊಂಡ ಕೇಂದ್ರ ಅಧ್ಯಯನ ತಂಡವು ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಸಿಂದಗಿ ಮಾರ್ಗವಾಗಿ ವಿಜಯಪುರ ಜಿಲ್ಲೆಗೆ ಪ್ರವೇಶಿಸಿ, ಜಿಲ್ಲೆಯ ದೇವರಹಿಪ್ಪರಗಿ, ತಾಳಿಕೋಟೆ ಮತ್ತು ಮುದ್ದೆಬಿಹಾಳ ತಾಲೂಕಿನಲ್ಲಿ ಸಂಚರಿಸಿತು.

ವಿಜಯಪುರ: ಗಣೇಶ ಹೋದ, ಜೋಕುಮಾರಸ್ವಾಮಿ ಬಂದ ದಾರಿ ಬಿಡಿ..!

ದೇವರಹಿಪ್ಪರಗಿ ತಾಲೂಕಿನಲ್ಲಿ ಪರಿಶೀಲನೆ:

ಅಧ್ಯಯನ ತಂಡವು ಮೊದಲಿಗೆ ದೇವರಹಿಪ್ಪರಗಿ(Devarahipparagi) ತಾಲೂಕಿಗೆ ಭೇಟಿ ನೀಡಿ, ತಾಲೂಕಿನ ಸಾತಿಹಾಳ(Satihala) ಗ್ರಾಮದಲ್ಲಿ ಮಳೆಯಿಂದಾದ ಹಾನಿಯ ವೀಕ್ಷಣೆ ನಡೆಸಿತು. ದೇವರಹಿಪ್ಪರಗಿ ತಾಲೂಕಿನಲ್ಲಿ ಮಳೆಯಿಂದಾಗಿ 1,102 ಹೆಕ್ಟೇರ್ ಪ್ರದೇಶದಲ್ಲಿನ ಹತ್ತಿ, ಸೂರ್ಯಕಾಂತಿ ಮತ್ತು ಇನ್ನೀತರ ಬೆಳೆಗಳಿಗೆ ಹಾನಿಯಾಗಿದ್ದು, ಇದರಿಂದಾಗಿ ಅಂದಾಜು 850 ರೈತರು ಬಾಧೀತರಾಗಿದ್ದಾರೆಂದು ಮಾಹಿತಿ ಇದೆ. 

ತೀವ್ರ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು:

ತೀವ್ರ ಮಳೆಯಿಂದಾಗಿ ಸಾತಿಹಾಳ ಗ್ರಾಮದಲ್ಲಿ 8 ಮನೆಗಳಿಗೆ ಮತ್ತು ದೇವೂರ (Devooru) ಗ್ರಾಮದಲ್ಲಿ 18 ಮನೆಗಳಿಗೆ ನೀರು ನುಗ್ಗಿದ್ದು ಇದಕ್ಕಾಗಿ ತಲಾ 10 ಸಾವಿರ ರೂ ಪರಿಹಾರ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ. ತಾಲೂಕಿನಲ್ಲಿ ಭಾಗಶಃ ಹಾನಿಗೀಡಾದ 26 ಮನೆಗಳಿಗೆ ಈಗಾಗಲೇ ತಲಾ 3,200 ಪರಿಹಾರ ನೀಡಿ ಪರಿಹಾರ ಪೋರ್ಟಲನಲ್ಲಿ ಎಂಟ್ರಿ ಮಾಡಲಾಗಿದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ(Dr. Vijay Mahantesh) ದಾನಮ್ಮನವರ ಅವರು ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಸುರಿದ ಮಳೆಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಡಳಿತ:

ದೇವರ ಹಿಪ್ಪರಗಿ ತಾಲೂಕಿನಲ್ಲಿ ಸೆಪ್ಟೆಂಬರ್ 7ರವರೆಗೆ ವಾಡಿಕೆಗಿಂತ 435ರಷ್ಟು ಮಳೆ ಸುರಿದು ಶೇ.47ರಷ್ಟು ಹೆಚ್ಚಿಗೆ ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ತಾಳಿಕೋಟೆ(Talikote) ತಾಲೂಕಿನಲ್ಲು ಅಧ್ಯಯನ ತಂಡದ ಪರಿಶೀಲನೆ..!

ಬಳಿಕ ಅಧ್ಯಯನ ತಂಡವು ತಾಳಿಕೋಟೆ ತಾಲೂಕಿನಲ್ಲಿ ಸಂಚರಿಸಿತು. ಮೊದಲಿಗೆ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಬೆಳೆಹಾನಿ ಮತ್ತು ಮಿನಿಜಗಿ ಗ್ರಾಮದ ಸೇತುವೆಯ ವೀಕ್ಷಣೆ ನಡೆಸಿತು. ಬಳಿಕ ತಾಳೀಕೋಟೆಯ ನಂತರ ಬೋಳವಾಡ ಮತ್ತು ಗುತ್ತಿಹಾಳದಲ್ಲಿ ಮಳೆಯಿಂದಾದ ಹಾನಿ ಪರಿಶೀಲಿಸಿದರು.

ಮೂಕಿಹಾಳ ಸೇತುವೆ ಪರಿಶೀಲಿಸಿದ ಕೇಂದ್ರ ತಂಡ:

ಅಧ್ಯಯನ ತಂಡವು ಮೂಕಿಹಾಳ(Mookihal) ಗ್ರಾಮಕ್ಕೆ ತೆರಳಿ ಅಲ್ಲಿನ ಸಣ್ಣ ಸೇತುವೆಯನ್ನು ಮತ್ತು ರಸ್ತೆಯ ವೀಕ್ಷಣೆ ನಡೆಸಿತು. ಬಳಿಕ ತಂಡವು ಮುದ್ದೆಬಿಹಾಳ ತಾಲೂಕಿಗೆ ತೆರಳಿ ಅಲ್ಲಿ ಅಡವಿಹುಲಗಬಾಳ ಮತ್ತು ಅಡವಿಸೋಮನಾಳ ಗ್ರಾಮದಲ್ಲಿ ಮಳೆಯಿಂದಾಗಿ ಕಿತ್ತು ಹೋದ ಸೇತುವೆಯನ್ನು ಮತ್ತು ರಸ್ತೆಗಳ ವೀಕ್ಷಣೆ ನಡೆಸಿತು. 

ತಾಳಿಕೋಟೆಯಲ್ಲಿ ಬಿದ್ದಮಳೆ ಎಷ್ಟು? ಹಾನಿ ಎಷ್ಟು?

ತಾಳಿಕೋಟೆ ತಾಲೂಕಿನಲ್ಲಿ ವಾಡಿಕೆ ಮಳೆ 251 ಮಿ ಮೀಗಿಂತ 484 ಮಿ ಮೀನಷ್ಟು ಹೆಚ್ಚಿನ ಪ್ರಮಾಣದಲ್ಲಿ ಶೇ.93ರಷ್ಟು ಮಳೆ ಬಿದ್ದಿದೆ. ತಾಲೂಕಿನಲ್ಲಿ ಹತ್ತಿ, ತೊಗರಿ, ಸೂರ್ಯಕಾಂತಿ ಸೇರಿ ಒಟ್ಟು 1651 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ತಾತ್ಕಾಲಿಕ ವರದಿಯಂತೆ 19 ಮನೆಗಳು ಸೇರಿ ಒಟ್ಟು 52 ಮನೆಗಳಿಗೆ ಹಾನಿಯಾಗಿದೆ ಎಂದು ಅಲ್ಲಿನ ತಹಸೀಲ್ದಾರ ಅವರು ಅಧ್ಯಯನ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಿಜಯಪುರ: ಸೆ. 9ರಂದು 1000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಚಾಲನೆ, ಯತ್ನಾಳ

ಕೇಂದ್ರ ತಂಡಕ್ಕೆ ಜಿಲ್ಲಾಡಳಿತದ ಅಧಿಕಾರಿಗಳ ಸಾಥ್:

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ವಿಜಯಪುರ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಇಂಡಿಯ ರಾಮಚಂದ್ರ ಗಡಾದೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪಾ ಎಲ್., ತಹಸೀಲ್ದಾರರಾದ ದೇವರಹಿಪ್ಪರಗಿಯ ಸಿ.ಎ.ಗುಡದಿನ್ನಿ. ತಾಳಿಕೋಟೆಯ ಶ್ರೀಧರ ಗೋಟರ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ದೇವರಹಿಪ್ಪರಗಿಯ ಸುನೀಲ್ ಮದ್ದೀನ್, ತಾಳಿಕೋಟೆಯ ಬಸವಂತರಾಯ ಬಿರಾದಾರ, ಕೃಷಿ ಅಧಿಕಾರಿಗಳಾದ ಸೋಮನಗೌಡ ಬಿರಾದಾರ, ಮಹಾದೇವಪ್ಪ, ತಾಳಿಕೋಟೆಯ ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ತಾಲೂಕು ಆರೋಗ್ಯಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇದ್ದರು.

click me!