Chikkaballapur: ವರುಣಘಾತಕ್ಕೆ 1,348.48 ಹೆಕ್ಟೇರ್‌ ಬೆಳೆ ನಾಶ: ರೈತರಿಗೆ ಸಂಕಷ್ಟ

By Govindaraj SFirst Published Sep 11, 2022, 12:47 PM IST
Highlights

ಸತತ ಎರಡು ವರ್ಷಗಳ ಕಾಲ ಕಾಡಿದ ಕೋವಿಡ್‌ ಸಂಕಷ್ಟಬಳಿಕ ಸುಧಾರಿಸಿಕೊಳ್ಳುತ್ತಿದ್ದ ರೈತರ ಬದುಕಿಗೆ ಈಗ ಮಳೆ ಅಪ್ಪಳಿಸಿದ್ದು ಜಿಲ್ಲೆಯಲ್ಲಿ ಸುರಿದ ಭಾರೀ ವರ್ಷಧಾರೆ ಜಿಲ್ಲಾದ್ಯಂತ ಬರೋಬ್ಬರಿ 1,348.84 ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶ ಆಗಿರುವುದು ಕೃಷಿ ಇಲಾಖೆ ನಡೆಸಿರುವ ಪ್ರಾಥಮಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಚಿಕ್ಕಬಳ್ಳಾಪುರ (ಸೆ.11): ಸತತ ಎರಡು ವರ್ಷಗಳ ಕಾಲ ಕಾಡಿದ ಕೋವಿಡ್‌ ಸಂಕಷ್ಟಬಳಿಕ ಸುಧಾರಿಸಿಕೊಳ್ಳುತ್ತಿದ್ದ ರೈತರ ಬದುಕಿಗೆ ಈಗ ಮಳೆ ಅಪ್ಪಳಿಸಿದ್ದು ಜಿಲ್ಲೆಯಲ್ಲಿ ಸುರಿದ ಭಾರೀ ವರ್ಷಧಾರೆ ಜಿಲ್ಲಾದ್ಯಂತ ಬರೋಬ್ಬರಿ 1,348.84 ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶ ಆಗಿರುವುದು ಕೃಷಿ ಇಲಾಖೆ ನಡೆಸಿರುವ ಪ್ರಾಥಮಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಮೊದಲೇ ಜಿಲ್ಲಾದ್ಯಂತ ಮಳೆಯ ತೀವ್ರತೆಯ ಪರಿಣಾಮ ಇಲ್ಲಿಯವರೆಗು ಶೇ. 75ರಷ್ಟುಮಾತ್ರ ಕೃಷಿ ಬೆಳೆಗಳು ಜಿಲ್ಲಾದ್ಯಂತ ಬಿತ್ತನೆಗೊಂಡಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಂಗಾ ಹಾಗೂ ರಾಗಿ ಮತ್ತಿತರ ಏಕದಳ ಹಾಗು ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣ ಸಾಕಷ್ಟುಕುಂಠಿತಗೊಂಡಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ.

ಬೆಳೆಯಲ್ಲ ನೀರುಪಾಲು: ಈಗಾಗಲೇ ಜಿಲ್ಲೆಯಲ್ಲಿ ಮಳೆಯ ಅವಾಂತಾರಕ್ಕೆ ಸಾರ್ವಜನಿಕರ ಆಸ್ತಿ, ಪಾಸ್ತಿಗಳಿಗೆ ಸಾಕಷ್ಟುನಷ್ಟಉಂಟು ಮಾಡಿರುವುದು ಒಂದಡೆಯಾದರೆ ಉತ್ತಮ ಬೆಳೆ ನಿರೀಕ್ಷೆಯೊಂದಿಗೆ ಬಿತ್ತನೆ ಮಾಡಿದ್ದ ರೈತರ ಬೆಳೆಗಳು ಎಡಬಿಡದೇ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಬಿತ್ತನೆ ಆಗಿದ್ದ ರಾಗಿ. ಶೇಂಗಾ, ಅವರೆ, ತೊಗರಿ, ಮುಸುಕಿನ ಜೋಳ ಮತ್ತಿತರ ಮಳೆ ಆಶ್ರಿತ ಕೃಷಿ ಬೆಳೆಗಳು ಹೆಕ್ಟೇರ್‌ಗಟ್ಟಲೇ ತಮ್ಮ ಕಣ್ಣು ಎದುರೇ ನೀರು ಪಾಲಾಗುತ್ತಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ. ಮಳೆಯ ತೀವ್ರತೆಗೆ ಕೃಷಿ ಬೆಳೆಗಳ ಹಾನಿ ಇನ್ನಷ್ಟುಹೆಚ್ಚಾಗುವ ಆತಂಕ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳಲ್ಲಿ ಮನೆ ಮಾಡಿದ್ದು ಮಳೆಯಿಂದ ಬೆಳೆ ಕಳೆದುಕೊಂಡ ರೈತರ ಪರಿಸ್ಥಿತಿ ಅಂತೂ ಅಕ್ಷರಶಃ ಕಣ್ಣೀರು ಸುರಿಸುವಂತಾಗಿದೆ.

ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ  391.57 ಕೋಟಿ ಹಾನಿ, ಮಳೆಗೆ ಒಟ್ಟು 6 ಮಂದಿ ಬಲಿ

ಮುಂಗಾರು ಆರಂಭದಿಂದಲೂ ಬಿತ್ತನೆ ಕಾರ್ಯಕ್ಕೆ ಮಳೆ ಕಾಟ ಶುರುವಾಗಿತ್ತು. ಬಳಿಕ ಕೆಲ ತಿಂಗಳ ಕಾಲ ಬಿಡುವ ಕೊಟ್ಟಮಳೆ ಇದೀಗ ಮತ್ತೆ ಸುರಿಯುತ್ತಿರುವ ಪರಿಣಾಮ ಬೆಳೆಗಳಿಗೆ ಬಿಸಿಲು ಕಾರಣದೇ ಬೆಳೆಗಳ ಬೆಳವಣಿಗೆಯಲ್ಲಿ ಭಾರೀ ಕುಂಠಿತ ಕಂಡಿರುವುದರ ಜೊತೆಗೆ ಬೆಳೆದು ನಿಂತಿದ್ದ ಬೆಳೆಗಳಿಗೂ ಕೂಡ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ರೈತರ ಕೃಷಿ ಬೆಳೆಗಳು ಜಲಾವೃತ ಆಗಿ ಹಾನಿಯಾಗಿರುವುದು ಕೃಷಿ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಕಂಡು ಬಂದಿದೆ.

1129.08 ಹೆಕ್ಟರ್‌ ತೋಟಗಾರಿಕೆ ಬೆಳೆ ಹಾನಿ: ಸಣ್ಣ, ಅತಿ ಸಣ್ಣ ರೈತರು ಮಳೆ ನಂಬಿ ಇಟ್ಟಿರುವ ಕೃಷಿ ಬೆಳೆಗಳು ಮಳೆಯಿಂದ ಈ ರೀತಿ ಹಾನಿಯಾದರೆ ಲಕ್ಷಾಂತರ ರು, ಬಂಡವಾಳ ಸುರಿದು ವಾಣಿಜ್ಯ ಬೆಳಗಳಾದ ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕಾ ಬೆಳೆಗಳು ಜಿಲ್ಲೆಯಲ್ಲಿ ಬರೋಬ್ಬರಿ 1129.08 ಹೆಕ್ಟರ್‌ ಪ್ರದೇಶದಲ್ಲಿ ಮಳೆಗೆ ಹಾನಿಯಾಗಿರುವುದು ತೋಟಗಾರಿಕಾ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ ಕಂಡು ಬಂದಿದೆ.

219 ಹೆಕ್ಟೇರ್‌ನಲ್ಲಿ ಕೃಷಿ ಬೆಳೆ ನಾಶ: ಕೃಷಿ ಇಲಾಖೆ ಮಾಹಿತಿ ಪ್ರಕಾಶ ಜಿಲ್ಲೆಯಲ್ಲಿ ಒಟ್ಟು ಮಳೆಗೆ 219.76 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು ಭತ್ತ 3.39 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ 51.15 ಹೆಕ್ಟೇರ್‌ ಪ್ರದೇಶದಲ್ಲಿ, ಮುಸುಕಿನ ಜೋಳ ಬರೋಬ್ಬರಿ 144.85 ಹೆಕ್ಟರ್‌ ಪ್ರದೇಶದಲ್ಲಿ ಶೇಂಗಾ 14.8 ಹೆಕ್ಟೇರ್‌ ಪ್ರದೇಶದಲ್ಲಿ ಇತರೇ ಅವರೆ, ತೊಗರಿ, ಅಲಸಂದಿ ಮತ್ತಿತರ ಬೆಳೆಗಳು ಒಟ್ಟು 5 ಹೆಕ್ಟೇರ್‌ ಪ್ರದೇಶದಲ್ಲಿ ಹಾನಿಯಾಗಿವೆ.

Chikkaballapur Nandi Hill: ‌ಮಳೆಗೆ ಮತ್ತೆ ನಂದಿ ಬೆಟ್ಟದ 3 ಕಡೆ ಗುಡ್ಡ ಕುಸಿತ

ತಾಲೂಕು ಬೆಳೆ ನಾಶ ಹೆಕ್ಟೇರ್‌
ಚಿಕ್ಕಬಳ್ಳಾಪುರ 54
ಚಿಂತಾಮಣಿ 30
ಬಾಗೇಪಲ್ಲಿ 11.35
ಗೌರಿಬಿದನೂರು 73.77
ಗುಡಿಬಂಡೆ 38.14
ಶಿಡ್ಲಘಟ್ಟ 12.50

click me!