
ಕಾರವಾರ (ಜು.04) ಆರೋಗ್ಯ ಸಚಿವ ಯುಟಿ ಖಾದರ್ ತೆರಳುತ್ತಿದ್ದ ವೇಳೆ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ವರದರಾಜ್ ಹೋಟಲ್ ಬಳಿ ನಡೆದಿದೆ. ವೇಗವಾಗಿ ಸಾಗುತ್ತಿದ್ದ ಪೊಲೀಸ್ ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿದೆ. ಪರಿಣಾಮ ಎರಡೂ ವಾಹನ ರಸ್ತೆಯಿಂದ ಪಕ್ಕದ ಪೊದೆಯತ್ತ ಸರಿದಿದೆ. ಅಪಘಾತದಲ್ಲಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ವಾಹನ ನಿಲ್ಲಿಸಲು ಸೂಚಿಸಿದ ಯುಟಿ ಖಾದರ್ ಗಾಯಾಳುವನ್ನು ಆಸ್ಪತ್ರೆ ದಾಖಳಿಸಲು ಸ್ಥಳೀಯ ಪೊಲೀಸರು ಸೂಚಿಸಿದ್ದಾರೆ.
ಆರೋಗ್ಯ ಸಚಿವ ಯುಟಿ ಖಾದರ್ ಕಾರವಾರದಿಂದ ಉಡುಪಿಯತ್ತ ಸಾಗಿದ್ದರು. ಖಾದರ್ಗೆ ಪೊಲೀಸ್ ಪಡೆ ಬೆಂಗಾವಲಾಗಿ ರಕ್ಷಣೆ ನೀಡಿತ್ತು. ಉಡುಪಿಯತ್ತ ಸಾಗುತ್ತಿದ್ದ ವೇಳೆ ಅಂಕೋಲದ ಬಳಿಕ ಸ್ಕೂಟಿ ಡಿಕ್ಕಿಯಾಗಿದೆ. ಸ್ಕೂಟಿ ರೈಡರ್ ಅಲಗೇರಿ ಮೂಲದ ಸಂದೀಪ್ ನಾಯಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಆರೋದ್ಯ ವಿಚಾರಿಸಿದ ಯುಟಿ ಖಾದರ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರಂತೆ ಸ್ಥಳೀಯ ಪೊಲೀಸರು ಗಾಯಾಳುವನ್ನು ಅಂಕೋಲ ಪಟ್ಟಣದ ಆರ್ಯ ಮೆಡಿಕಲ್ ಹಾಸ್ಪಿಟಲ್ಗೆ ದಾಖಲಿಸಿದ್ದಾರೆ.
ಸ್ಕೂಟಿ ಬಹುತೇಕ ನಜ್ಜು ಗುಜ್ಜಾಗಿದೆ. ವೇಗವಾಗಿದ್ದ ಕಾರಣ ಪೊಲೀಸ್ ಜೀಪ್ ಪಕ್ಕದ ಪೊದೆಗೆ ಡಿಕ್ಕಿಯಾಗಿ ನಿಂತಿದೆ. ಇತ್ತ ಬೆಂಗಾವಲು ವಾಹನದಲ್ಲಿದ್ದ ಪೊಲೀಸರಿಗೆ ಗಾಯವಾಗಿಲ್ಲ. ಆದರೆ ಸ್ಕೂಟಿ ರೈಡರ್ ಸಂದೀಪ್ ಗಾಯದ ಪ್ರಮಾಣ ಹೆಚ್ಚಾಗಿದೆ. ಯುಟಿ ಖಾದರ್ ಉಡುಪಿ, ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ.
ಕಾರವಾರದಲ್ಲಿ ಸಚಿವ ಯುಟಿ ಖಾದರ್ ಪ್ರಕೃತಿ ವಿಕೋಪ ಮುಂಜಾಗ್ರತ ಸಭೆಯಲ್ಲಿ ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಯುಟಿ ಖಾದರ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಯು.ಟಿ ಖಾದರ್ ಉತ್ತರ ಕನ್ನಡ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆಯ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ ಕುರಿತು ಮಾಹಿತಿ ಪಡೆದ ಯುಟಿ ಖಾದರ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪ್ರಕೃತಿ ವಿಕೋಪ ತಡೆ, ಪರಿಹಾರ ವಿತರಣೆ ಸೇರಿದಂತೆ ಹಲವು ಕೆಲಸಗಳಲ್ಲಿ ಪಾರದರ್ಶಕತೆ ಹಾಗೂ ತ್ವರಿತ ಕೆಲಸಕ್ಕೆ ಸೂಚಿಸಿದ್ದಾರೆ. ಇದೇ ವೇಳೆ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪದ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಭೆ ಬಳಿಕ ಉಡುಪಿಯತ್ತ ತೆರಳುವ ಮಾರ್ಗದಲ್ಲಿ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.