ಆರೋಗ್ಯ ಸಚಿವರಿಗೆ ಗುಡ್ ನೈಟ್ ಹೇಳಲು ದಿನಪೂರ್ತಿ ಪ್ರಾಕ್ಟೀಸ್

By Kannadaprabha NewsFirst Published Jan 24, 2020, 11:51 AM IST
Highlights

ಆರೋಗ್ಯ ಸಚಿವ ಬಿ. ಶ್ರೀ ರಾಮುಲು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ವಾಸ್ತವ್ಯ ಮಾಡಿದ್ದು ಸಚಿವರಿಗೆ ಗುಡ್ ನೈಟ್ ಹೇಳಲು ಬೆಳಗ್ಗಿನಿಂದಲೇ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ನಡೆದಿತ್ತು. 

ಚಿಕ್ಕಪ್ಪನಹಳ್ಳಿ ಷಣ್ಮುಖ 

ಚಿತ್ರದುರ್ಗ (ಜ.24): ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಬಿ.ಶ್ರೀರಾಮುಲು ಇದೇ ಮೊದಲ ಬಾರಿಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುತ್ತಿದ್ದು ಇದಕ್ಕಾಗಿ ಆಸ್ಪತ್ರೆ ನಳನಳಿಸುತ್ತಿತ್ತು. ಗುರುವಾರ ಬೆಳಿಗ್ಗೆಯಿಂದ ಆಸ್ಪತ್ರೆಗೆ ಭೇಟಿ ನೀಡುವವರಿಗೆ ಇದು ನಮ್ಮೂರ ಆಸ್ಪತ್ರೆಯಾ ಎಂಬಷ್ಟರ ಮಟ್ಟಿಗೆ ಅಚ್ಚರಿಗಳು ಮೂಡಿ ಬಂದವು. 

ವಿಚಿತ್ರವೆಂದರೆ  ರಾತ್ರಿ12.20ಕ್ಕೆ ಸಚಿವರು ಚಿತ್ರದುರ್ಗ ಆಸ್ಪತ್ರೆಗೆ ಬಂದರು. ಹಾಗಾಗಿ ಗುಡ್ ನೈಟ್ ಸರ್ ಎಂಬ ಉಕ್ತಿ ಯಾವಾಗ ಜವಾಬ್ದಾರಿ ಕಳೆದುಕೊಳ್ಳುತ್ತೇವೋ ಎಂಬ ನಿರೀಕ್ಷೆಯಲ್ಲಿ ಸಿಬ್ಬಂದಿ ಇದ್ದರು.

ಸಚಿವರ ಆಗಮನದ ನಿರೀಕ್ಷೆಯಲ್ಲಿ ಆಸ್ಪತ್ರೆಯ ಎಲ್ಲ ಮೂಲೆಗಳಲ್ಲಿನ ಗುಟ್ಕಾ ಕಲೆಗಳು ಮಾಯವಾಗಿದ್ದು, ಖಾಸಗಿ ಆಸ್ಪತ್ರೆ ಗಳಿಗೆ ಬಂದ ಅನುಭವ ರೋಗಿಗಳಿಗೆ ಆಗಿತ್ತು. ಶೌಚಾಲಯಗಳು ನಳ ನಳಿಸುತ್ತಿದ್ದು ಫಿನಾ ಯಿಲ್ ವಾಸನೆ ಗಮ್ ಅಂತ ಮೂಗಿಗೆರಾಚು ತ್ತಿತ್ತು. ಪ್ರತಿ ವಾರ್ಡ್ ನ ಮಂಚದ ಮೇಲೆ ಶುಭ್ರವಾದ ಬೆಡ್ ಶೀಟ್‌ಗಳಿವೆ. ಶುಶ್ರೂಶಕಿಯರು ರೋಗಿಗಳ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಪ್ರೀತಿಯ ಮಳೆಗೆ
ರೋಗಿಗಳು ಮಿಂದೆದ್ದರು. 

ಕೆಲವು ವಾರ್ಡ್‌ಗಳಲ್ಲಿ ರೋಗಿಗಳಿಗೆ ಒಂದಿಷ್ಟು ಟ್ರೈನಿಂಗ್ ಕೂಡಾ ನಡೆದಿತ್ತು. ಸಾಹೇಬ್ರು ಬಂದು ಕೇಳಿದರೆ ಅದ್ಭುತ ಎಂಬ ಉದ್ಗಾರ ಮಾಡಿ. ಎಲ್ಲವೂ ಚೆನ್ನಾಗಿದೆ, ತುಂಬಾ ಚೆನ್ನಾಗಿ ನೋಡಿ ಕೊಳ್ತಾರೆ ಎಂಬ ಮಾತ ಹರಿಯಬಿಡಿ. ಇಂತಹ ಆಸ್ಪತ್ರೆ ಎಲ್ಲಿಯೂ ಇಲ್ಲ, ಚಿಕಿತ್ಸೆ  ಪಡೆಯುತ್ತಿರುವ ನಾವೇ ಪುಣ್ಯವಂತರು ಎಂಬ ಸಿದ್ದಮಾದರಿ ಸಂದೇಶಗಳ ರವಾನಿಸಿ ಎಂಬಷ್ಟರ ಮಟ್ಟಿಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ರೆಡಿಯಾಗಿತ್ತು. 

ಸದಾ ಗಬ್ಬೆದ್ದು ನಾರುತ್ತಿದ್ದ ಆಸ್ಪತ್ರೆಯಲ್ಲಿ ಸುಗಂಧದ ಪರಿಮಳವೇ ಹೊರ ಸೂಸುತ್ತಿದೆ. ನೀರಿಲ್ಲವೆಂಬ ರಾಗಗಳು ಕೇಳಿ ಬರುತ್ತಿದ್ದ ನಲ್ಲಿಗಳಲ್ಲಿ ಭದ್ರೆ ಧಾರಾಕಾರವಾಗಿ ಶಬ್ದ ಮಾಡುತ್ತಿದ್ದಳು. ಫಿನಾಯಿಲ್ ಸೌಗಂಧ ಎಲ್ಲ ಶೌಚಾಲಯಗಳಲ್ಲೂ ನಾಸಿಕಗಳ ಹೊಳ್ಳೆಗಳಿಗೆ ಸ್ಪರ್ಶಿಸುತ್ತಿತ್ತು. ಅಬ್ಬಾ...! ಎಂತಹ ಆಹ್ಲಾದಕರ ವಾತಾವರಣ. 

ನಿಮ್ಮ ಕೈಲಿ ಬಡವರ ಕೆಲ್ಸ ಮಾಡಲು ಆಗುತ್ತಾ, ಇಲ್ಲ ನಾನೇ ಮಾಡ್ಲಾ : ಡಿಸಿ ಗರಂ

ಹತ್ತುವರೆಗೆ ಬರಬೇಕಿತ್ತು: ಉದ್ದೇಶಿತ ವೇಳಾಪಟ್ಟಿ ಪ್ರಕಾರ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಮೈಸೂರು ಜಿಲ್ಲೆಯ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ಹತ್ತೂವರೆ ವೇಳೆಗೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ನಂತರ ವಾಸ್ತವ್ಯ ಹೂಡಬೇಕಿತ್ತು. ಸಚಿವರ ವಾಸ್ತವ್ಯಕ್ಕೆಂದು ಎರಡು ಜನರಲ್ ವಾರ್ಡ್ ಹಾಗೂ ಒಂದು ವಿಐಪಿ ವಾಡ್ತ್‌ಗಳನ್ನು ಆಸ್ತತ್ರೆ ಸಿಬ್ಬಂದಿ ವಿಶೇಷವಾಗಿ ಸಜ್ಜುಗೊಳಿ ಸಿದ್ದರು. ಸಚಿವರು ಎಲ್ಲೇ ಮಲಗಿದರೂ ಸುಖಕರ ನಿದ್ರೆಗೆ ಜಾರಬೇಕೆಂಬ ಇರಾದೆ ಆಸ್ಪತ್ರೆ ಸಿಬ್ಬಂದಿಯದ್ದಾಗಿತ್ತು.

ಡಿಸಿ ಮೇಡಂ ಏನು ಸ್ಕೂಟಿಯಲ್ಲಿ ಹೋಗ್ತಾರಾ....

ಆದರೆ, ಸಚಿವ ಬಿ.ಶ್ರೀರಾಮುಲು ಮೈಸೂರು ಜಿಲ್ಲೆಯ ಕಾರ್ಯಕ್ರಮ ಮುಗಿಸಿಕೊಂಡು ಅಲ್ಲಿಂದ ಪ್ರಯಾಣ ಬೆಳೆಸಿದಾಗ ವೇಳೆ ರಾತ್ರಿ 8 ಗಂಟೆ ದಾಟಿತ್ತು. ಪ್ರತಿ ಹಂತದಲ್ಲಿಯೂ ಸಚಿವರ ಲೊಕೇಷನ್ ಪಡೆದುಕೊಳ್ಳುತ್ತಿದ್ದ ಆಸ್ಪತ್ರೆ ಸಿಬ್ಬಂದಿ ಬರುವಷ್ಟರಲ್ಲಿ ಹನ್ನೊಂದಾಗಬಹುದು, ಹನ್ನೆರಡು ಸಮೀಪಿಸಬಹುದು ಎಂಬಿತ್ಯಾದಿ ಲೆಕ್ಕಚಾರದಲ್ಲಿ ಮುಳುಗಿದ್ದರು. ಇದರ ನಡುವೆ ಶೌಚಾಲಯಗಳಿಗೆ ಫಿನಾಯಿಲ್ ಎಂಬ ಸುಗಂದ ದ್ರವ್ಯವ ಸಿಂಪರಣೆ ನಡೆದೇ ಇತ್ತು.

ಕೆಮ್ಮಂಗಿಲ್ಲ: ಸಚಿವರ ವಾಸ್ತವ್ಯಕ್ಕೆ ಎರಡು ಜನರಲ್ ವಾಡ್ನ್‌ಗಳು ಹಾಗೂ ಒಂದು ವಿಐಪಿ ವಾರ್ಡ್‌ಗಳ ಫಿಕ್ಸ್ ಮಾಡಿದ್ದರಿಂದ ಜನರಲ್ ವಾಡ್‌ಗಳಲ್ಲಿನ ರೋಗಿಗಳಿಗೆ ಮೊದಲೇ ತಾಲೀಮು ನೀಡಲಾಗಿತ್ತು. ಕೆಮ್ಮುವ, ಗಂಟಲಲ್ಲಿ ಕಫ ಇಟ್ಟುಕೊಂಡ ಯಾರೊಬ್ಬ ರೋಗಿಗಳ ಈ ವಾರ್ಡ್ ಗಳಲ್ಲಿ ಇಟ್ಟುಕೊಳ್ಳದ ರೀತಿ ಎಲ್ಲವನ್ನು ಸಜ್ಜುಗೊಳಿಸಲಾಗಿತ್ತು. ಜ್ವರ ಬಂದ ಹಾಗೂ ಸಣ್ಣಗೆ ಮುಲುಗುವ ರೋಗಿಗಳ ಮಾತ್ರ ಸಚಿವರ ವಾಸ್ತವ್ಯದ ವಾರ್ಡ್‌ಗಳಲ್ಲಿ ಇರುವಂತೆ ನೋಡಿಕೊಳ್ಳಲಾಗಿತ್ತು.

11 ಆದರೂ ಸಚಿವರು ಉಂಡಿರಲಿಲ್ಲ:ಸಚಿವ  ಬಿ.ಶ್ರೀರಾಮಲು ಮೈಸೂರು ಬಿಟ್ಟು ಚಿತ್ರದುರ್ಗದ ಕಡೆ ಪ್ರಯಾಣ ಬೆಳೆಸುವ ವೇಳೆ ಅವರಿದ್ದ ಕಾರು ರಾತ್ರಿ ಹನ್ನೊಂದರ ವೇಳೆಗೆ ಹುಳಿಯಾರು ದಾಟಿತ್ತು. ಅಲ್ಲಿಂದ ಚಿತ್ರದುರ್ಗ ಒಂದೂವರೆ ಗಂಟೆ ಪ್ರಯಾಣ ವಾಗಿದ್ದು ಅಲ್ಲಿ ತನಕ ಸಚಿವರು ಊಟಕ್ಕೆಂದು ಎಲ್ಲಿಯೂ ಕಾರು ನಿಲ್ಲಿಸಿರಲಿಲ್ಲ. ಚಿತ್ರದುರ್ಗ ತಲುಪಿದ ನಂತರವೇ ಊಟ ಮಾಡುವ ಉದ್ದೇಶ ಸಚಿವರು ಹೊಂದಿದ್ದರು.

ಸಚಿವ ಶ್ರೀರಾಮುಲು ಅವರು ಚಿತ್ರದುರ್ಗ ತಲುಪುವಷ್ಟರಲ್ಲೇ ಮಧ್ಯರಾತ್ರಿ 12.20 ಆಗಿತ್ತು. ಸಚಿವರು ಬರುತ್ತಿದ್ದಂತೆಯೇ ಜಿಲ್ಲಾಸ್ಪತ್ರೆ ಡಿ ಗ್ರೂಪ್ ನೌಕರರು ಹುದ್ದೆ ಯಿಂದ ತೆಯದಂತೆ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ನಂತರ ಆಸ್ಪತ್ರೆ ವಿಐಪಿ ವಾಡ್ ನರ್ಲ್ಲಿ ವಾಸ್ತವ್ಯ ಹೂಡಿದರು. ಅಷ್ಟೊತ್ತಿಗಾ ದರೂ ಬಂದರಲ್ಲ ಎಂದು ಕೊನೆಗೂ ಜಿಲ್ಲಾ ಆಸ್ಪತ್ರೆ ಸಿಬ್ದಂದಿ ಗುಡ್‌ನೈಟ್ ಸರ್ ಎಂಬ ಸಣ್ಣದೊಂದು ಶುಭ ಹಾರೈಕೆ ರವಾನಿಸಿ
ನಿಟ್ಟುಸಿರು ಬಿಟ್ಟರು.

click me!