ಕ್ಷೇತ್ರದ ಅಭಿವೃದ್ಧಿಯಲ್ಲಿ ಎಚ್ಡಿಕೆ ವಿಫಲ: ಸಿಪಿವೈ

By Kannadaprabha NewsFirst Published Jan 22, 2023, 5:40 AM IST
Highlights

ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವ ಕಾರ‍್ಯವನ್ನೂ ಮಾಡಿಲ್ಲ, ನಾವು ಮಾಡಲು ಹೋದರೂ ನಮ್ಮನ್ನೂ ತಡೆಯುತ್ತಾರೆ ಎಂದು ವಿಧಾನಪರಿಪತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಆರೋಪಿಸಿದರು.

 ಚನ್ನಪಟ್ಟಣ :  ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಯಾವ ಕಾರ‍್ಯವನ್ನೂ ಮಾಡಿಲ್ಲ, ನಾವು ಮಾಡಲು ಹೋದರೂ ನಮ್ಮನ್ನೂ ತಡೆಯುತ್ತಾರೆ ಎಂದು ವಿಧಾನಪರಿಪತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಆರೋಪಿಸಿದರು.

ಬಿಜೆಪಿ ಉಪಾಧ್ಯಕ್ಷ ಎಲೆಕೇರಿ ರವೀಶ್‌ ನಿವಾಸದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಖಾಸಗಿ ಬಸ್‌ ನಿಲ್ದಾಣ, ಎಲೆಕೇರಿ ಮೇಲ್ಸೇತುವೆ ಸೇರಿದಂತೆ ಯಾವುದೇ ಯೋಜನೆಯನ್ನು ಜಾರಿಗೆ ತರದೇ ಕುಮಾರಸ್ವಾಮಿ ನಗರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇದೇ ಕ್ಷೇತ್ರದಿಂದ ಆಯ್ಕೆಯಾದ ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆದರು. ಈ ವೇಳೆ ಕ್ಷೇತ್ರದ ಅಭಿವೃದ್ಧಿ ಕುರಿತು ಜನ ಸಾಕಷ್ಟುಆಶಯಗಳನ್ನು ಹೊಂದಿದ್ದರು. ಆದರೆ, ಕ್ಷೇತ್ರದಿಂದ ಆಯ್ಕೆಯಾದ ನಂತರ ಕುಮಾರಸ್ವಾಮಿ ಕ್ಷೇತ್ರವನ್ನು ಕಡೆಗಣಿಸಿದರು. ನಗರ ಸೇರಿದಂತೆ ತಾಲೂಕನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದರು.

ನಗರಕ್ಕೆ 10 ಕೋಟಿ ಅನುದಾನ: ನಗರ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ. ನಗರದಲ್ಲಿ ಸಿ.ಸಿ. ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 30 ಕೋಟಿ ಅನುದಾನಕ್ಕೆ ಸಮ್ಮತಿಸಿದ್ದು, ಮೊದಲ ಹಂತವಾಗಿ 10 ಕೋಟಿ ಅನುದಾನ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಇನ್ನಷ್ಟುನೆರವು ನೀಡಲಿದ್ದಾರೆಂದರು.

ಫೆ1ರಿಂದ ಪಾದಯಾತ್ರೆ: ಫೆ.1ರಿಂದ ಕ್ಷೇತ್ರಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಚ್‌ಡಿಕೆ ತಾಲೂಕಿನ ಅಭಿವೃದ್ಧಿ ಕಡೆಗಣಿಸಿರುವ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲಾಗುವುದು. ಮುಂದಿನ ಚುನಾವಣೆಯಲ್ಲಿ ಜನಾಶೀರ್ವಾದ ಪಡೆಯುವ ನಿಟ್ಟಿನಲ್ಲಿ ಪಾದಯಾತ್ರೆ ನಡೆಸುತ್ತೇನೆ ಎಂದು ತಿಳಿಸಿದರು.

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕ್ಷೇತ್ರ ಪ್ರವಾಸದ ಕುರಿತು ಉತ್ತರಿಸಲು ನಿರಾಕರಿಸಿದ ಸಿಪಿವೈ, ನಾನು ನಿಖಿಲ್‌ ಕುಮಾರಸ್ವಾಮಿ ಬಗ್ಗೆ ಮಾತನಾಡುವುದಿಲ್ಲ. ಅವರಿಗೂ ಕ್ಷೇತ್ರಕ್ಕೂ ಸಂಬಂಧವಿಲ್ಲ ಎಂದರು.

ಸುಮಲತಾ ಸಂಪರ್ಕದಲ್ಲಿದ್ದಾರೆ

ಚನ್ನ​ಪ​ಟ್ಟಣ (ಜ.14): ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಅವರು ನನ್ನ ಜೊತೆ ಸಂಪರ್ಕದಲ್ಲಿದ್ದು, ಸಂಕ್ರಾಂತಿ ಬಳಿಕ ಅವರು ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ಪ್ರತಿ​ಕ್ರಿ​ಯಿ​ಸಿ​ದರು. ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಂಕ್ರಾಂತಿ ನಂತರ ಜನ​ವರಿ 16 ಅಥವಾ 17ರಂದು ಸಂಸದೆ ಸುಮ​ಲತಾ ಸೂಕ್ತ ನಿರ್ಧಾರ ಕೈಗೊ​ಳ್ಳು​ತ್ತಾರೆ. ಮಂಡ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವು ಸಾಧಿಸಲು ಅಗತ್ಯವಿರುವ ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ವಿಪ​ಕ್ಷ​ಗ​ಳಿಗೆ ಪ್ರಧಾನಿ ಭಯ: ಪ್ರಧಾನಿ ಮೋದಿ ಅವರ ಬಗ್ಗೆ ವಿರೋಧ ಪಕ್ಷಗಳಿಗೆ ಭಯಕಾಡುತ್ತಿದೆ. ಅದಕ್ಕೆ ಅವರ ಬಗ್ಗೆ ಟೀಕೆ ಮಾಡುತ್ತಾರೆ. ಬಿಜೆಪಿಗೆ ಪ್ರಧಾನಿ ಮೋದಿ ಅವರೇ ದೊಡ್ಡಬಲ, ಅವರಿಗೆ ಹೆಚ್ಚು ಜನಪ್ರಿಯತೆ ಇದೆ. ಜನತೆ ಅವರ ನಾಯಕತ್ವವನ್ನು ಒಪ್ಪಿದ್ದಾರೆ. ಅವರು ಬಂದರೆ ಎಲ್ಲಿ ಜನಾಭಿಪ್ರಾಯ ಬದಲಾದೀತೋ ಎಂಬ ಭಯದಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಆದರೆ, ಜನತೆ ಇವರ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷಗಳಿಗೆ ಟಾಂಗ್‌ ನೀಡಿದರು.

Mandya: ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ: ಸಿ.ಪಿ.ಯೋಗೇಶ್ವರ್‌

ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಗುಂಪಿದೆ. ಸಿಎಂ ಸ್ಥಾನಕ್ಕಾಗಿ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಕಿತ್ತಾಡುತ್ತಿದ್ದಾರೆ. ಮೇಲ್ನೋಟಕ್ಕೆ ಈ ಇಬ್ಬರು ನಾಯಕರು ಜೊತೆಯಲ್ಲಿದ್ದರೂ ಒಳಗೊಳಗೆ ಕಿತ್ತಾಡುತ್ತಿದ್ದು, ಇವರಿಬ್ಬರ ನಡುವಿನ ಸಂಘರ್ಷದಿಂದಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು. ಇನ್ನು ಕಾಂಗ್ರೆಸ್‌ ಪಕ್ಷದ 200 ಯೂನಿಚ್‌ ಉಚಿತ ವಿದ್ಯುತ್‌ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಉಚಿತ ಸೌಲಭ್ಯ ನೀಡಿದರೂ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಉಚಿತ ಯೋಜನೆಗಳನ್ನು ನೀಡಿ ಜನರನ್ನು ಮರಳು ಮಾಡುವ ಬದಲು ಪ್ರತಿಯೊಬ್ಬರು ಸ್ವಾವಲಂಬಿಗಳಾಗುವಂತೆ ಮಾಡುವ ಯೋಜನೆಗಳನ್ನು ಜಾರಿಗೆ ತರಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ, ಅವರು ಉಚಿತವಾಗಿ ಕೊಡುಗೆ ನೀಡಲು ಸಾಧ್ಯವಾಗುವುದೂ ಇಲ್ಲ ಎಂದರು.

ಜೆಡಿಎಸ್‌ನಿಂದ ಜಿಲ್ಲೆಗೂ ಒಳ್ಳೆಯದಲ್ಲ, ರಾಜ್ಯಕ್ಕೂ ಒಳ್ಳೆಯದಲ್ಲ: ಸಿ.ಪಿ.ಯೋಗೇಶ್ವರ್‌

ಎಲ್ಲಿಂದ ಬೇಕಾದರೂ ಸ್ಪರ್ಧಿ​ಸಲಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ನಾಯಕರು. ಅವರು ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಬಹುದು. ಕುಮಾರಸ್ವಾಮಿ ಸಾತನೂರು, ಚಿಕ್ಕಬಳ್ಳಾಪುರ, ರಾಮನಗರ, ಈಗ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿ​ಸಿದರು.

 

click me!