
ಹಾವೇರಿ (ಸೆ.14): ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ 4 ವರ್ಷದ ಹೆತ್ತ ಮಗಳನ್ನೇ ತಾಯಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿರುವ ಭೀಕರ ಘಟನೆಯೊಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.
ರಾಣೇಬೆನ್ನೂರು ನಗರದ ಎಕೆಜಿ ಕಾಲೋನಿಯ ಗಂಗಮ್ಮ ಹಾಗೂ ಅಣ್ಣಪ್ಪ ಎಂಬುವರು ಅನೈತಿಕ ಸಂಬಂಧ ಹೊಂದಿದ್ದರು. ಸುಮಾರು ಎರಡು ತಿಂಗಳ ಹಿಂದೆ, ಗಂಗಮ್ಮ ತನ್ನ ಪತಿಯನ್ನು ಬಿಟ್ಟು ಮಗಳಾದ ಪ್ರಿಯಾಂಕಳನ್ನು ಕರೆದುಕೊಂಡು ಅಣ್ಣಪ್ಪನೊಂದಿಗೆ ಗುಡ್ಡದ ಆನ್ವೇರಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ, ಈ ಇಬ್ಬರ ಅನೈತಿಕ ಸಂಬಂಧಕ್ಕೆ 4 ವರ್ಷದ ಮಗಳು ಪ್ರಿಯಾಂಕಾ ಅಡ್ಡಿಯಾಗುತ್ತಿದ್ದಳು. ಈ ಕಾರಣಕ್ಕೆ, ಇಬ್ಬರೂ ಸೇರಿ ಬಾಲಕಿಯ ಕೊಲೆಗೆ ಸಂಚು ರೂಪಿಸಿದ್ದಾರೆ. ಕಳೆದ ಆಗಸ್ಟ್ 5ರಂದು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹಾವೇರಿ ತಾಲ್ಲೂಕಿನ ಕುರಗುಂದ ಗ್ರಾಮದ ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಬಳಿ ಬಾಲಕಿಯ ದೇಹವನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ.
ಗಣೇಶನಿಗೆ ಕಲ್ಲೆಸೆದ ಮಂಡ್ಯ ಜಿಲ್ಲೆಯಲ್ಲಿ ನಗ್ಮಾಬಾನುಗೆ ಸೀಮಂತ ಮಾಡಿ ಕಳಿಸಿದ ಹಿಂದೂ ಸೊಸೈಟಿ!
ಅರ್ಧ ಸುಟ್ಟ ಸ್ಥಿತಿಯಲ್ಲಿದ್ದ ಬಾಲಕಿಯ ಶವವನ್ನು ಕಂಡ ಸ್ಥಳೀಯರು ಗುತ್ತಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗಸ್ಟ್ 5ರಂದು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಪರಿಚಿತ ಶವ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ, ಬಾಲಕಿಯ ತಂದೆ ತನ್ನ ಮಗಳನ್ನು ಕರೆದುಕೊಂಡು ಬರುವಂತೆ ಗಂಗಮ್ಮಳನ್ನು ಕೇಳಿದಾಗ ಪ್ರಕರಣದ ನಿಜಾಂಶ ಬಯಲಾಗಿದೆ. ತಾಯಿ ಮತ್ತು ಆಕೆಯ ಪ್ರಿಯಕರ ಸೇರಿ ಮಗುವನ್ನು ಕೊಂದಿರುವುದು ಗೊತ್ತಾಗಿದೆ. ಈ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.
ಈ ಅಮಾನವೀಯ ಕೃತ್ಯ ಸಮಾಜದಲ್ಲಿನ ನೈತಿಕ ಅಧಃಪತನಕ್ಕೆ ಮತ್ತೊಂದು ನಿದರ್ಶನವಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದು ಕಡೆ, ಪೊಲೀಸರು ಪ್ರಕರಣವನ್ನು ಆರಂಭದಲ್ಲಿ ಗುರುತಿಸಲು ಏಕೆ ವಿಫಲರಾದರು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಯಬೇಕಾಗಿದೆ.