Hassan: ದಿನ ಕಳೆದಂತೆ ಹೆಚ್ಚಿದ ಕಾಡಾನೆಗಳ ಸಮಸ್ಯೆ!

Published : May 13, 2022, 01:44 PM IST
Hassan: ದಿನ ಕಳೆದಂತೆ ಹೆಚ್ಚಿದ ಕಾಡಾನೆಗಳ ಸಮಸ್ಯೆ!

ಸಾರಾಂಶ

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿನ ಜನರಿಗೆ ಒಂದೊಂದು ದಿನ ದೂಡುವುದೇ ಕಷ್ಟವಾಗಿದೆ. ಯಾವಾಗ ಎಲ್ಲಿ ಕಾಡಾನೆ ಮೈ ಮೇಲೆರಗುತ್ತದೋ ಎನ್ನುವ ಆತಂಕದಲ್ಲೇ ಕಾಲ ಕಳೆಯುತ್ತಿರುವ ಮಲೆನಾಡಿಗರು ತಮ್ಮ ಜೀವನಕ್ಕೆ ಆಧಾರವಾಗಿರುವ ಕಾಫಿ ತೋಟಗಳಿಗೆ ಹೋಗಲಿಕ್ಕೂ ಯೋಚಿಸುವಂತಾಗಿದೆ.

ಹಾಸನ (ಮೇ.13): ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ (Elephant Attack) ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿನ ಜನರಿಗೆ ಒಂದೊಂದು ದಿನ ದೂಡುವುದೇ ಕಷ್ಟವಾಗಿದೆ. ಯಾವಾಗ ಎಲ್ಲಿ ಕಾಡಾನೆ ಮೈ ಮೇಲೆರಗುತ್ತದೋ ಎನ್ನುವ ಆತಂಕದಲ್ಲೇ ಕಾಲ ಕಳೆಯುತ್ತಿರುವ ಮಲೆನಾಡಿಗರು ತಮ್ಮ ಜೀವನಕ್ಕೆ ಆಧಾರವಾಗಿರುವ ಕಾಫಿ ತೋಟಗಳಿಗೆ ಹೋಗಲಿಕ್ಕೂ ಯೋಚಿಸುವಂತಾಗಿದೆ.

ಸಕಲೇಶಪುರ (Sakleshpur) ತಾಲೂಕಿನ ಬೆಳಗೋಡು ಮತ್ತು ಬಾಳ್ಳುಪೇಟೆ ಹೋಬಳಿಗಳು. ಆಲೂರು ತಾಲೂಕಿನ ಕುಂದೂರು ಹೋಬಳಿಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹೇಮಾವತಿ ನದಿ ಹರಿಯುವ ಭಾಗದಲ್ಲೇ ಈ ಆನೆಗಳು ಸಂಚರಿಸುತ್ತಿದ್ದು, ಕುಂದೂರು ಹೋಬಳಿಯಿಂದ ಬಾಳ್ಳುಪೇಟೆ ಮಾರ್ಗವಾಗಿ ಬೆಳಗೋಡು ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿವರೆಗೂ ಸಂಚಾರ ಮಾಡುತ್ತವೆ. ಈ ಮಾರ್ಗದುದ್ದಕ್ಕೂ ಕಾಫಿ ತೋಟಗಳಿದ್ದು, ಜನವಸತಿ ಪ್ರದೇಶಗಳಿವೆ. ಆದರೆ, ಇದೇ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವ ಕಾಡಾನೆಗಳ ಒಂದು ಗುಂಪು ಇದೇ ಮಾರ್ಗದಲ್ಲಿ ಹೋಗಿ ವಾಪಸ್‌ ಬರುತ್ತವೆ. ಹೀಗೆ ಬರುವಾಗ ತಮ್ಮ ಆಹಾರ ಅಥವಾ ಇನ್ನಾವುದೇ ಕಾರಣಕ್ಕಾಗಿ ಅಪಾರ ಪ್ರಮಾಣದ ಬೆಳೆಗಳ ಹಾನಿ ಮಾಡುತ್ತಿವೆ. ಇದರಿಂದಾಗಿ ಹತ್ತಾರು ವರ್ಷಗಳಿಂದ ಕಾಪಾಡಿ ಬಂದ ಕಾಫಿ, ಮೆಣಸು, ಏಲಕ್ಕಿ ತೋಟಗಳು ಹಾನಿಗೀಡಾಗುತ್ತಿವೆ.

Hassan: ಬಾಳ್ಳುಪೇಟೆ ಬಳಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕರ ಕೂಗಾಟದಿಂದ ಅದೃಷ್ಟವಶಾತ್‌ ಪಾರಾದ ಮಹಿಳೆ

ಕಾಡಾನೆಗಳು ಮನೆಗೇ ಲಗ್ಗೆ: ಕೆಲ ವರ್ಷಗಳ ಹಿಂದೆ ಕಾಡಾನೆಗಳು ಕಾಡು ಮತ್ತು ನಾಡಂಚಿನಲ್ಲಿ ಮಾತ್ರವೇ ಇರುತ್ತಿದ್ದವು. ಅಪರೂಪಕ್ಕೊಮ್ಮೆ ಕಾಫಿ ತೋಟಗಳಲ್ಲಿ ಕಾಣಿಸಿ ಮರೆಯಾಗುತ್ತಿದ್ದವು. ಆದರೆ, ಇದೀಗ ಮನೆ ಮುಂದೆಯೇ ಬರುತ್ತಿರುವ ಕಾಡಾನೆಗಳು ಕೆಲವೊಮ್ಮೆ ಮನೆಯಲ್ಲಿ ದಾಸ್ತಾನು ಮಾಡಿದ ಭತ್ತವನ್ನೆಲ್ಲಾ ತಿಂದಿರುವ ಸಾಕಷ್ಟುಉದಾಹರಣೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಮನೆಯಲ್ಲಿ ಎಲ್ಲಿ ಭತ್ತ ಸಂಗ್ರಹಿಸಲಾಗಿದೆ ಎನ್ನುವ ವಾಸನೆ ಗ್ರಹಿಸಿ ಕಿಟಕಿ ಅಥವಾ ಬಾಗಿಲು ಮುರಿದು ಸೊಂಡಿಲಿನ ಮೂಲಕ ಭತ್ತದ ಚೀಲಗಳ ಹೊರಗೆಳೆದು ತಿನ್ನುತ್ತಿವೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದವರು ಈ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿರಬೇಕೆ ವಿನಾಃ ಬೇರೇನೂ ಮಾಡಲು ಸಾಧ್ಯವಿಲ್ಲ.

ಜನಪ್ರತಿನಿಧಿಗಳಿಗೆ ಚೆಲ್ಲಾಟ: ಹಾಸನ ಜಿಲ್ಲೆಯ ಮಲೆನಾಡು ಭಾಗಕ್ಕೆ ಕಾಡಾನೆ ಎನ್ನುವುದು ಜ್ವಲಂತ ಸಮಸ್ಯೆ. ಆದರೆ, ಇದನ್ನು ಬಗೆಹರಿಸಲಾಗದ ಜನಪ್ರತಿನಿಧಿಗಳು ಮಾತ್ರ ಈ ವಿಷಯವನ್ನೇ ಮುಂದಿಟ್ಟು ವೋಟ್‌ಬ್ಯಾಂಕ್‌ ರಾಜಕಾರಣ ಮಾಡುವ ಮೂಲಕ ಜನರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹಿಂದೆ ಸಮ್ಮಿಶ್ರ ಸರ್ಕಾರಗಳಿದ್ದಾಗಲೂ ಕೂಡ ಆಗಿನ ಅರಣ್ಯ ಸಚಿವರಾಗಿದ್ದವರು ಇಲ್ಲಿಗೆ ಬಂದು ಜನರ ಸಮಸ್ಯೆ ಆಲಿಸಿದ್ದಾರೆ. ಜೇಬಿನ ತುಂಬಾ ಆಶ್ವಾಸನೆಗಳ ನೀಡಿ ಹೋದವರು ಮತ್ತೆ ಇತ್ತ ತಲೆ ಹಾಕಲಿಲ್ಲ. ಇದೀಗ ಬಿಜೆಪಿ ಸರ್ಕಾರದ ಅರಣ್ಯ ಸಚಿವ ಹಾಗೂ ಕಂದಾಯ ಸಚಿವರು ಕೂಡ ಜಿಲ್ಲೆಗೆ ಬಂದು ಕಾಫಿ ಬೆಳೆಗಾರರೊಂದಿಗೆ ಸಭೆ ನಡೆಸಿ ನಿಮ್ಮ ಸಮಸ್ಯೆಯ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿ ಹೋಗಿದ್ದಾರೆ. ಹೀಗೆ ಹೋದವರು ಕೊಟ್ಟಮಾತು ಉಳಿಸಿಕೊಳ್ಳುವ ಏನಾದರೂ ಕೆಲಸ ಮಾಡುತ್ತಿದ್ದಾರೋ. ಅಥವಾ ಹಿಂದಿನವರ ರೀತಿಯೇ ಕಾಣೆಯಾದರೋ ಎನ್ನುವ ಅನುಮಾನ ಪ್ರತಿನಿತ್ಯ ಕಾಡಾನೆ ಸಮಸ್ಯೆಯ ಎದುರಿಸುತ್ತಿರುವ ಜನರನ್ನು ಕಾಡುತ್ತಿದೆ.

ಅಬ್ಬಾ ಏನ್‌ ಸೆಕೆ: ದಣಿವಾರಿಸಲು ಕೆಸರಿನ ಸ್ನಾನ ಮಾಡುತ್ತಿರುವ ಗಜಪಡೆ

ಆನೆಗಳ ಸ್ಥಳಾಂತರಕ್ಕೆ , ರೇಡಿಯೋ ಕಾಲರ್‌ ಹಾಕಲು ಮಳೆ ಅಡ್ಡಿ: ಆಲೂರು ಸಕಲೇಶಪುರ ತಾಲೂಕಿನಲ್ಲಿ ಎರಡು ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದು ಹಾಗೂ ಆಲೂರು ತಾಲೂಕಿನಲ್ಲಿ ಎರಡು ಆನೆಗಳನ್ನು ಹಿಡಿದು ರೇಡಿಯೋ ಕಾಲರ್‌ ಹಾಕಿ ಬಿಡಲು ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಜಿಲ್ಲೆಯ ಅರಣ್ಯ ಇಲಾಖೆ ಕೂಡ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಮಲೆನಾಡು ಸೇರಿದಂತೆ ಜಿಲ್ಲೆಯ ಹಲವೆಡೆ ಬೀಳುತ್ತಿರುವ ಮಳೆಯಿಂದಾಗಿ ಕಾರ್ಯಾಚರಣೆಯನ್ನು ಅನಿರ್ದಿಷ್ಟಕಾಲಕ್ಕೆ ಮುಂದೂಡಲಾಗಿದೆ. ಆದರೆ ದಿನ ಕಳೆದಂತೆ ಬಾಳ್ಳುಪೇಟೆ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚುತ್ತಲೇ ಇದೆ. ಇದೀಗ ಕಾಫಿ ತೋಟದಲ್ಲಿ ಚಿಗುರು ತೆಗೆಯುವುದು, ಗೊಬ್ಬರ ಹಾಕುವ ಕೆಲಸ ಅತಿ ಜರೂರಾಗಿ ಮಾಡಬೇಕಿದೆ. ಆದರೆ, ದಿನ ಬೆಳಗಾದರೆ ಕಾಡಾನೆಗಳ ಹಾವಳಿ ಕಂಡು ಕಾರ್ಮಿಕರು ತೋಟಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಈ ಬಾರಿ ಸರಿಯಾಗಿ ತೋಟದ ನಿರ್ವಹಣೆ ಮಾಡಲಾಗದೆ ಇಳುವರಿ ಕಡಿಮೆಯಾಗಿ ನಷ್ಟಅನುಭವಿಸುವ ಭೀತಿ ಕಾಫಿ ಬೆಳೆಗಾರರನ್ನು ಕಾಡುತ್ತಿದೆ.

PREV
Read more Articles on
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!