ಹಾನಗಲ್ಲ: ಮಳೆಯಲ್ಲೇ ಗ್ರಾಮ ಸಂಚಾರ ಕೈಗೊಂಡ ಶಾಸಕ ಮಾನೆ

By Kannadaprabha NewsFirst Published Jul 15, 2022, 11:33 AM IST
Highlights

ತಹಸೀಲ್ದಾರ್‌ ಅವರೊಂದಿಗೆ ಮಾತನಾಡಿ ಸ್ಮಶಾನಕ್ಕೆ ಜಮೀನಿನ ವ್ಯವಸ್ಥೆ ಮಾಡುವುದಾಗಿ ಶ್ರೀನಿವಾಸ್‌ ಮಾನೆ ಭರವಸೆ ನೀಡಿದರು.

ಹಾನಗಲ್ಲ(ಜು.15):  ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಸುರಿಯುವ ಮಳೆಯಲ್ಲಿಯೂ ಗ್ರಾಮ ಸಂಚಾರ ಕೈಗೊಂಡ ಶಾಸಕ ಶ್ರೀನಿವಾಸ್‌ ಮಾನೆ ಅವರು ಸಾರ್ವಜನಿಕ ಸಮಸ್ಯೆಗಳಿಗೆ ಕಿವಿಗೊಟ್ಟರು. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಅಲ್ಲೇ ಪರಿಹಾರ ದೊರಕಿಸುವಲ್ಲಿ ಯಶಸ್ವಿಯಾದರು. ಗ್ರಾಮದಲ್ಲಿ ಸ್ಮಶಾನ ಇಲ್ಲದೇ ಬಹಳ ತೊಂದರೆ ಅನುಭವಿಸುತ್ತಿದ್ದೇವೆ. ಯಾರಾದರೂ ಮೃತಪಟ್ಟರೆ ಎಲ್ಲೆಂದರಲ್ಲಿ ಅಂತ್ಯಸಂಸ್ಕಾರ ನೆರವೇರಿಸುವಂತಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುವುದನ್ನು ಗ್ರಾಮಸ್ಥರು ಗಮನಕ್ಕೆ ತಂದಾಗ, ತಹಸೀಲ್ದಾರ್‌ ಅವರೊಂದಿಗೆ ಮಾತನಾಡಿ ಸ್ಮಶಾನಕ್ಕೆ ಜಮೀನಿನ ವ್ಯವಸ್ಥೆ ಮಾಡುವುದಾಗಿ ಶ್ರೀನಿವಾಸ್‌ ಮಾನೆ ಭರವಸೆ ನೀಡಿದರು.

ತುಮರಿಕೊಪ್ಪ ಗ್ರಾಮದಿಂದ ವರದಾ ನದಿ ವರೆಗೆ ಕೆಲ ತಿಂಗಳ ಹಿಂದೆ ನಿರ್ಮಿಸಿರುವ ರಸ್ತೆ ಈಗಾಗಲೇ ಹಾಳಾಗಿದ್ದು, ಸಂಚಾರಕ್ಕೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದಾಗ, ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸುತ್ತಿಲ್ಲ. ಈ ಸ್ವತ್ತು ಪಹಣಿ ನೀಡಲೂ ವಿಳಂಭ ಮಾಡಲಾಗುತ್ತಿದೆ. ಯಾವುದೇ ಸಾರ್ವಜನಿಕ ಸಮಸ್ಯೆ ಹೇಳಿಕೊಂಡರೂ ಹಿರೇಹುಲ್ಲಾಳ ಪಿಡಿಒ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಅವಲತ್ತುಕೊಂಡಾಗ ಸ್ಥಳದಲ್ಲಿದ್ದ ಗ್ರಾಪಂ ಕಾರ್ಯದರ್ಶಿ ರಾಜಶೇಖರ ಹಡಪದ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕ ಮಾನೆ, ಸಾರ್ವಜನಿಕರಿಗೆ ಸ್ಪಂದಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅಕ್ರಮ ಮರಳುಗಾರಿಕೆ, ಕಲ್ಲು ಗಣಿಗಾರಿಕೆ ತಡೆಯಿರಿ: ಸಚಿವ ಹಾಲಪ್ಪ ಆಚಾರ್‌

ಈ ಸಂದರ್ಭದಲ್ಲಿ ಪಿಡಿಒ ವಿರುದ್ಧ ಸಾಕಷ್ಟುದೂರು ಕೇಳಿ ಬಂದ ಹಿನ್ನೆಲೆಯಲ್ಲಿ ತಾಪಂ ಇಒ ಸುನೀಲ್‌ಕುಮಾರ್‌ ಅವರಿಗೆ ಕರೆ ಮಾಡಿ ಸಾರ್ವಜನಿಕರಿಗೆ ಸ್ಪಂದಿಸಿ, ಕೆಲಸ ನಿರ್ವಹಿಸುವಂತೆ ಪಿಡಿಒ ಅವರಿಗೆ ತಾಕೀತು ಮಾಡಿ ಎಂದು ಶ್ರೀನಿವಾಸ್‌ ಮಾನೆ ಸೂಚಿಸಿದರು.

ಮುಖಂಡರಾದ ಮಹದೇವಪ್ಪ ಹರವಿ, ಶಿವಪ್ಪ ಪೂಜಾರ, ಭೀಮೇಶ್‌ ಹರಿಜನ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್‌ ಶಕುನವಳ್ಳಿ, ಪುಲಕೇಶಪ್ಪ ಹರವಿ, ಯೋಗೀಶ ಪಾಟೀಲ, ಶೇಖಪ್ಪ ನೆಗಳೂರ, ಸಹದೇವಪ್ಪ ದುರುಗಪ್ಪನವರ, ಹನುಮಂತಪ್ಪ ಪೂಜಾರ, ಮಹದೇವಪ್ಪ ನೆಗಳೂರ, ಮಧು ಪಾಣಿಗಟ್ಟಿ, ಬಿ.ಜಿ.ದೊಡ್ಡಮನಿ ಮೊದಲಾದವರು ಇದ್ದರು.

click me!