ರಾಣಿಬೆನ್ನೂರಿಗೆ ಬಂದ ಹಸಿರು ಪಾರಿವಾಳ!

By Kannadaprabha NewsFirst Published Sep 2, 2020, 12:42 PM IST
Highlights

ಪೂರ್ವ- ಪಶ್ಚಿಮ ಘಟ್ಟಗಳಿಂದ ವಲಸೆ ಬಂದ ಪಕ್ಷಿಗಳು| ಹಸಿರು ಪಾರಿವಾಳಗಳು ಮಳೆಗಾಲದ ಪ್ರಾರಂಭದಲ್ಲಿ ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕಾಡಿನತ್ತ ವಲಸೆ ಬರುತ್ತವೆ| ನಂತರ ಸೆಪ್ಟೆಂಬರ್‌- ಅಕ್ಟೋಬರ್‌ ಕೊನೆಯ ಸಮಯದಲ್ಲಿ ತಮ್ಮ ಮೂಲಸ್ಥಾನಕ್ಕೆ ಮರಳುತ್ತವೆ| 

ರಾಣಿಬೆನ್ನೂರು(ಸೆ.02): ನಗರಕ್ಕೆ ಹಸಿರು ಪಾರಿವಾಳಗಳು ವಲಸೆ ಬಂದಿವೆ. ನಗರದ ಹೊರವಲಯದ ಶಿವಗಂಗಾ ಪಬ್ಲಿಕ್‌ ಶಾಲೆಯ ಹತ್ತಿರ ವಿದ್ಯುತ್‌ ತಂತಿಯ ಮೇಲೆ ಸುಮಾರು 20ಕ್ಕೂ ಹೆಚ್ಚು ಹಳದಿ ಕಾಲಿನ ಹಸಿರು ಪಾರಿವಾಳಗಳು ಕುಳಿತಿರುವುದು ಕಂಡುಬಂದಿವೆ. ಈ ಹಸಿರು ಪಾರಿವಾಳಗಳು ಪಶ್ಚಿಮ- ಪೂರ್ವ ಘಟ್ಟಗಳಲ್ಲಿ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಇದು ಮಹಾರಾಷ್ಟ್ರದ ರಾಜ್ಯ ಪಕ್ಷಿಯಾಗಿದ್ದು, ನಗರದ ವನ್ಯಜೀವಿ ಛಾಯಾಗ್ರಾಹಕ ನಾಮದೇವ ಅವರು ಇವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಹಸಿರು ಬಣ್ಣದ ಜೋಡಿ ಪಾರಿವಾಳಗಳು ಪಶ್ಚಿಮ ಘಟ್ಟ ಮತ್ತು ಮಲೆನಾಡಿನ ಎತ್ತರದ ಮರಗಳಲ್ಲಿ ಕಂಡುಬರುತ್ತವೆ. ಕಳೆದ ಐದಾರು ವರ್ಷಗಳಲ್ಲಿ ಅನೇಕ ಜೀವ ಸಂಕುಲಗಳ ಛಾಯಾಚಿತ್ರಗಳನ್ನು ದಾಖಲಿಸಿರುವ ನನಗೆ ಈ ಹಸಿರು ಪಾರಿವಾಳಗಳು ನಮ್ಮ ಹಾವೇರಿ ಪರಿಸರದಲ್ಲಿ ಕಂಡಿದ್ದು ವಿಶೇಷವೆನಿಸಿತು. ಪಶ್ಚಿಮ- ಪೂರ್ವ ಘಟ್ಟಗಳಿಂದ ನಮ್ಮ ಕಡೆಗೆ ವಲಸೆ ಬಂದಿರಬಹುದು ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ನಾಮದೇವ ಕಾಗದಗಾರ.

ತಾಂಡಾ ಅಭಿವೃದ್ಧಿಗೆ 100 ಕೋಟಿ ಅನುದಾನ: ಗೃಹ ಸಚಿವ ಬೊಮ್ಮಾಯಿ

ಈ ಅಪರೂಪದ ಪ್ರಭೇದ ಹಸಿರು ಪಾರಿವಾಳಗಳು ಮಳೆಗಾಲದ ಪ್ರಾರಂಭದಲ್ಲಿ ಹಾವೇರಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳ ಕಾಡಿನತ್ತ ವಲಸೆ ಬರುತ್ತವೆ. ನಂತರ ಸೆಪ್ಟೆಂಬರ್‌- ಅಕ್ಟೋಬರ್‌ ಕೊನೆಯ ಸಮಯದಲ್ಲಿ ತಮ್ಮ ಮೂಲಸ್ಥಾನಕ್ಕೆ ಮರಳುತ್ತವೆ.

ಅರಣ್ಯ ಭಾಗದಲ್ಲಿ ಆಲ, ಅರಳಿ, ಪ್ಲಮ್‌, ಅತ್ತಿ, ಹುಣಸೆ, ಗಸಗಸಿಗಳು ಹೆಚ್ಚಾಗಿರುವುದರಿಂದ ಇತ್ತ ಕಡೆ ವಲಸೆ ಬಂದಿವೆ. ಅರಿಶಿಣ ಕಾಲಿನ ಹಸಿರು ಪಾರಿವಾಳ, ಕಗ್ಗುಲ ಎಂತಲೂ ಕರೆಯುತ್ತಾರೆ. ಭಾರತೀಯ ಉಪಖಂಡದ ಸಾಮಾನ್ಯ ಪ್ರಭೇದವಾದ ಯೆಲ್ಲೋ ಫಟೆಡ್‌ ಗ್ರೀನ್‌ ಪೀಜನ್‌ ಎತ್ತರದ ಮರಗಳಲ್ಲಿ ಕಂಡುಬರುತ್ತವೆ. ಇವು ಭೂಮಿಯ ಮೇಲೆ ಇಳಿಯುವುದೇ ಬಹಳ ಅಪರೂಪ. ಇವುಗಳು ಶಾಖಾಹಾರಿಗಳಾಗಿದ್ದು, ಹಣ್ಣು ಹಂಪಲುಗಳು ಇವುಗಳ ಪ್ರಮುಖ ಆಹಾರವಾಗಿವೆ.
 

click me!