ಇನ್ನೂ ಬಿಡುಗಡೆಯಾಗದ ಅನುದಾನ: ಮಡಿಕೇರಿ ದಸರಾ ಜನೋತ್ಸವ ಸಿದ್ಧತೆಗೆ ಗರ

By Govindaraj SFirst Published Sep 30, 2024, 8:33 PM IST
Highlights

ಹಗಲು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳುವ ಲಕ್ಷಾಂತರ ಜನರು ರಾತ್ರಿಯಾಗುತ್ತಿದ್ದಂತೆ ಮಂಜಿನ ನಗರಿಯ ಬೆಳಕಿನ ಚಿತ್ತಾರದೋಕುಳಿಯಲ್ಲಿ ಮಿಂದೇಳುವ ದಸರಾ ಜನೋತ್ಸವಕ್ಕೆ ದಾಂಗುಡಿ ಇಡುತ್ತಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಸೆ.30): ಹಗಲು ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳುವ ಲಕ್ಷಾಂತರ ಜನರು ರಾತ್ರಿಯಾಗುತ್ತಿದ್ದಂತೆ ಮಂಜಿನ ನಗರಿಯ ಬೆಳಕಿನ ಚಿತ್ತಾರದೋಕುಳಿಯಲ್ಲಿ ಮಿಂದೇಳುವ ದಸರಾ ಜನೋತ್ಸವಕ್ಕೆ ದಾಂಗುಡಿ ಇಡುತ್ತಾರೆ. ಆ ದಸರಾ ಚಾಲನೆಗೆ ಕೇವಲ ಇನ್ನು ಎರಡೇ ಎರಡು ದಿನಗಳು ಮಾತ್ರವೇ ಬಾಕಿ ಉಳಿದಿದ್ದು ಸರ್ಕಾರದಿಂದ ಅನುದಾನ ಬಂದಿಲ್ಲ. ಇದು ಮಡಿಕೇರಿ ದಸರಾ ಸಿದ್ಧತೆಗೆ ಗರಬಡಿದಂತೆ ಆಗಿದೆ. ಹೌದು ಅದ್ಧೂರಿ ದಸರಾ ಜನೋತ್ಸವನ್ನು ಮಾಡಬೇಕೆಂದು ಮಡಿಕೇರಿ ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳೇನೋ ಸಿದ್ಧತೆ ನಡೆಸುತ್ತಿವೆ. 

Latest Videos

ಆದರೆ ಎಷ್ಟು ವೆಚ್ಚದಲ್ಲಿ ಮಂಟಪಗಳ ಸಿಂಗರಿಸಿಕೊಳ್ಳಬೇಕು, ಅದಕ್ಕಾಗಿ ಬೇಕಾಗಿರುವ ಹಣವನ್ನು ಹೇಗೆ ಕ್ರೂಢೀಕರಿಸುವುದು ಎನ್ನುವ ಗೊಂದಲದಲ್ಲೇ ಕಾಲ ದೂಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು. ಆದರೆ ಅನುದಾನ ಮಾತ್ರ ಇಂದಿಗೂ ಬಿಡುಗಡೆಯಾಗಿಲ್ಲ. ಪ್ರಮುಖವಾಗಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯುವ ನವರಾತ್ರಿಗಳ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ ಸಿದ್ಧತೆಗೆ ತಯಾರಿಯನ್ನೇ ಆರಂಭಿಸಿಲ್ಲ. ಹೌದು ಮಡಿಕೇರಿ ನಗರದ ಶಕ್ತಿ ದೇವತೆಗಳ ಕರಗ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆಯಲಿದೆ. 

ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಸೂಟ್‌ ಹೊಲೆಸಿ, ಕಾಯ್ತಿದ್ದಾರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಅಂದಿನಿಂದ ದಸರಾ ಕಾರ್ಯಕ್ರಮಗಳು ನಡೆಯಬೇಕು. ಅಂದರೆ ನವರಾತ್ರಿ ಕಾರ್ಯಕ್ರಮಗಳಿಗೆ ಇನ್ನು ಎರಡೇ ಎರಡು ದಿನಗಳು ಮಾತ್ರವೇ ಬಾಕಿ ಇವೆ. ಆದರೆ ವೇದಿಕೆ ಸಿದ್ಧವಾಗಿಲ್ಲ, ಇಡೀ ನಗರದ ರಸ್ತೆಗಳು ಗುಂಡಿಮಯವಾಗಿದ್ದು ಅವುಗಳನ್ನು ಮುಚ್ಚುವ ಕೆಲಸವಾಗಿಲ್ಲ. ನಗರದ ಸರ್ಕಾರಿ ಕಚೇರಿ ಕಟ್ಟಡಗಳಿಗೆ ಸುಣ್ಣಬಣ್ಣ ಬಳಿದಿಲ್ಲ, ಲೈಟಿಂಗ್ಸ್ ಹಾಕುವ ಕೆಲಸವಾಗಿಲ್ಲ. ಒಟ್ಟಿನಲ್ಲಿ ದಸರಾಕ್ಕೆ ಕ್ಷಣಗಣನೆ ಆರಂಭವಾಗಿದ್ದರೂ ಯಾವುದೇ ಕೆಲಸಗಳು ಆರಂಭವಾಗದೆ ಇರುವುದು ದಸರಾ ಸಂಭ್ರಮವನ್ನು ಕಳೆಗುಂದಿಸುತ್ತಾ ಎನ್ನುವ ಅನುಮಾನ ಶುರುವಾಗಿದೆ. ದಸರಾ ಚಾಲನೆಗೆ ಇನ್ನು ಎರಡೇ ಎರಡು ದಿನ ಬಾಕಿ ಇದೇ ಆದರೂ ಇಂದಿಗೂ ಅನುದಾನ ಬಿಡುಗೆಯಾಗದೇ ಇರುವುದಕ್ಕೆ ದಸರಾ ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಪ್ರತೀ ವರ್ಷ ದಸರಾಕ್ಕೆ ಬಜೆಟ್ನಲ್ಲಿಯೇ ಅನುದಾನ ಮೀಸಲಿರಿಸಲಿ. ದಶಮಂಟಪಗಳನ್ನು ಆಯಾ ಸಮಿತಿಗಳು ಕನಿಷ್ಠ 15 ರಿಂದ 20 ಲಕ್ಷ ವೆಚ್ಚದಲ್ಲಿ ರೆಡಿ ಮಾಡುತ್ತವೆ. ಆದರೆ ಸರ್ಕಾರ ಕೊಡುವುದು ಕೇವಲ ಎರಡುವರೆಯಿಂದ 3 ಲಕ್ಷ ಮಾತ್ರ. ಇದನ್ನಾದರೂ ಸಾಕಷ್ಟು ಸಮಯ ಇರುವಾಗಲೇ ಕೊಟ್ಟರೆ, ಉಳಿದ ಹಣ ಎಷ್ಟು ಬೇಕು ಎಂದು ಅಂದಾಜು ಮಾಡಿಕೊಂಡು ಸಂಗ್ರಹಿಸಿ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಬಹುದು. ಬರುವ ಪ್ರವಾಸಿಗರಿಗೆ ಭರ್ಜರಿ ಮನರಂಜನೆ ನೀಡಬಹುದು. ಇದ್ಯಾವುದೂ ಸರ್ಕಾರಗಳಿಗೆ ಅರ್ಥವಾಗುವುದಿಲ್ಲ. ಕಳೆದ ಬಾರಿ 1 ಕೋಟಿ ಅನುದಾನ ನೀಡುವುದಾಗಿ ಹೇಳಿ 95 ಲಕ್ಷ ಕೊಟ್ಟಿತು. 

ಭಾರತ ವಿಶ್ವಗುರುವಾಗುವುದರಲ್ಲಿ ದಾಪುಗಾಲು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕಳೆದ ಬಾರಿ 5 ಲಕ್ಷ ಅನುದಾನ ಇನ್ನೂ ಕೊಡುವುದಕ್ಕೆ ಬಾಕಿ ಇದೆ ಎಂದು ದಸರಾ ಸಮಿತಿ ಮುಖಂಡ ನಗರಸಭೆ ಸದಸ್ಯ ಕೆ.ಎಸ್. ರಮೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ದಸರಾ ಸಮಿತಿ ಕಾರ್ಯಾಧ್ಯಕ್ಷ ಕಾಂಗ್ರೆಸ್ನ ಪ್ರಕಾಶ್ ಆಚಾರ್ಯ ಮಾತ್ರ ಕಳೆದ ಬಾರಿ ಕೊಟ್ಟಿದ್ದ ಅನುದಾನಕ್ಕಿಂತ ಒಂದು ಪರ್ಸೆಂಟ್ ಜಾಸ್ತಿ ಕೊಡೋಣ ಎಂದು ಸಚಿವರು ಹೇಳಿದ್ದಾರೆ. ನಮ್ಮ ಶಾಸಕರು ಸಹ ಒಂದುವರೆ ಕೋಟಿ ಅನುದಾನ ಸಿಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಕಳೆದ ಬಾರಿಗಿಂತ ಭರ್ಜರಿಯಾಗಿಯೇ ದಸರಾ ಜನೋತ್ಸವ ನಡೆಯುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಮಡಿಕೇರಿ ದಸರಾಕ್ಕೆ ಎರಡೇ ಎರಡು ದಿನಗಳು ಬಾಕಿ ಇದ್ದು ಅನುದಾನ ಬಾರದೆ ಇರುವುದು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳಿಗೆ ತಲೆನೋವಾಗಿರುವುದಂತು ಸತ್ಯ.

click me!