Koppal: ಆಂಜನೇಯನ ಜನ್ಮಸ್ಥಳ ದಾಖಲೆ ಸಂಗ್ರಹ ಚುರುಕು

By Kannadaprabha NewsFirst Published Feb 23, 2022, 8:33 AM IST
Highlights

*  ಕೊಪ್ಪಳ ಜಿಲ್ಲಾಧಿಕಾರಿ, ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹ
*  ಇಂದು ಬೆಂಗಳೂರಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ಸಭೆ
*  ಆಂಧ್ರದ ಟಿಟಿಡಿ ಕ್ಯಾತೆಗೆ ಉತ್ತರ ನೀಡಲು ಮುಂದಾದ ರಾಜ್ಯ ಸರ್ಕಾರ
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.23):  ಆಂಜನೇಯನ(Anjaneya) ಜನ್ಮಸ್ಥಳ(Birth Place) ಅಂಜನಾದ್ರಿಯನ್ನು ಅಭಿವೃದ್ಧಿಪಡಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ(Budget) ವಿಶೇಷ ಪ್ಯಾಕೇಜ್‌ ಘೋಷಿಸುವ ನಿರೀಕ್ಷೆಯಿದ್ದು, ಅದಕ್ಕಿಂತ ಮುನ್ನವೇ ‘ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ’ ಎಂದು ಘೋಷಿಸಲು ರಾಜ್ಯ ಸರ್ಕಾರ(Government of Karnataka) ಮುಂದಾಗಿದೆ ಎನ್ನಲಾಗಿದ್ದು, ಅದಕ್ಕೆ ಪೂರಕವಾಗಿ ದಾಖಲೆ ಸಂಗ್ರಹ ಕಾರ್ಯವನ್ನೂ ಚುರುಕುಗೊಳಿಸಿದೆ.
ಕೊಪ್ಪಳ(Koppal) ಜಿಲ್ಲಾಡಳಿತದಿಂದ ದಾಖಲೆಯನ್ನು ಮುಜರಾಯಿ ಇಲಾಖೆ ಸಂಗ್ರಹಿಸಿದೆ. ಇದಲ್ಲದೆ ನಾನಾ ಮೂಲದಿಂದ ದಾಖಲೆ ಸಂಗ್ರಹಿಸಲು ಮುಂದಾಗಿದೆ. ಇದಕ್ಕಾಗಿ ಫೆ. 23ರಂದು ಬೆಂಗಳೂರಿನಲ್ಲಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ(Shashikala Jolle) ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆಯಲಾಗಿದೆ.

Latest Videos

‘ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ’ ಎನ್ನುವ ವಿಷಯದ ಕುರಿತು ವಿಶೇಷ ಸಭೆಯನ್ನು ರಾಜ್ಯ ಸರ್ಕಾರ ಮೊದಲ ಬಾರಿಗೆ ಕರೆದಿರುವುದು ಮಹತ್ವದ ಬೆಳವಣಿಗೆಯಾಗಿದೆ. ಆಂಧ್ರದ(Andhra Pradesh) ಟಿಟಿಡಿ(TTD) ಕ್ಯಾತೆಗೆ ಕೊನೆಗೂ ಉತ್ತರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Koppal: ಅಂಜನಾದ್ರಿಗೆ ಹೋಗುವ ದಾರಿ ಯಾವುದಯ್ಯ?

ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮುತುವರ್ಜಿ ವಹಿಸಿ ದಾಖಲೆ ಸಂಗ್ರಹಿಸುವಂತೆ ಸೂಚಿಸಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು ಈ ಕುರಿತು ಕಾರ್ಯೋನ್ಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ ಕರೆದಿರುವ ಸಭೆಯಲ್ಲಿ ಈಗಾಗಲೇ ಸಂಗ್ರಹಿಸಿರುವ ದಾಖಲೆಗಳು ಹಾಗೂ ಕೊಪ್ಪಳ ಜಿಲ್ಲಾಡಳಿತ ಒದಗಿಸಿರುವ ಮಾಹಿತಿಗಳನ್ನೊಳಗೊಂಡು ಚರ್ಚೆ ಮಾಡಲಾಗುತ್ತದೆ. ಅಲ್ಲದೆ ಮುಜರಾಯಿ ಇಲಾಖೆಯ ಆಗಮ ಪಂಡಿತರಿಂದಲೂ ಮಾಹಿತಿಯನ್ನು ಪಡೆಯಲಾಗುತ್ತದೆ.

ದಾಖಲೆಗಳ ಅಹ್ವಾನ:

ಈ ನಡುವೆ ಕೊಪ್ಪಳ ಜಿಲ್ಲಾಡಳಿತ ಅಂಜನಾದ್ರಿ(Anjandri) ಕುರಿತು ಅಗತ್ಯ ದಾಖಲೆಗಳನ್ನು ಬಹಿರಂಗವಾಗಿಯೇ ಅಹ್ವಾನಿಸಲು ಚಿಂತನೆ ನಡೆಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ‘ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ’ದ ದಾಖಲೆಗಳು ಇದ್ದವರು ಜಿಲ್ಲಾಡಳಿತಕ್ಕೆ ನೀಡುವಂತೆ ಕೋರಲು ಚಿಂತನೆ ನಡೆಸಿದೆ. ಈ ಮೂಲಕ ಅನೇಕರ ಬಳಿ ಇರುವ ದಾಖಲೆಗಳನ್ನು ಸೇರಿಸಿ ಕಿರುಹೊತ್ತಿಗೆ ತಯಾರಿಸಲು ಮುಂದಾಗಿದೆ.

ಅಮೆರಿಕ ಶಾಸನ ತಜ್ಞರ ಸಮರ್ಥನೆ

ಅಮೆರಿಕದ ಶಾಸನ ತಜ್ಞ ಫಿಲಿಫ್‌ ಲಿಟೆನ್‌ ಡಾಫರ್‍ ಅವರು ಹನುಮಂತ ಜನಿಸಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿಯ ಪ್ರದೇಶದಲ್ಲಿ ಎಂದು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾನೆ. ‘ದ ಲೈಫ್‌ ಆಫ್‌ ಎ ಟೆಕ್ಸ್ಟ್‌’ ಕೃತಿಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿದ್ದಾರೆ.

ಸಂಸದರಿಂದಲೂ ಸಂಗ್ರಹ:

ಸಂಸದ ಸಂಗಣ್ಣ ಕರಡಿ(Sanganna Karadi) ಅವರು ಸಂಶೋಧಕರು ಮತ್ತು ಇತಿಹಾಸ ತಜ್ಞರಿಂದಲೂ ಅಂಜನಾದ್ರಿಯ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಪ್ರೊ. ಶರಣಬಸಪ್ಪ ಕೋಲ್ಕಾರ ಹಾಗೂ ಸಿದ್ಲಿಂಗಪ್ಪ ಕೊಟ್ನೆಕಲ್‌ ಅವರು ಬರೆದಿರುವ ಕೃತಿಗಳು ಸೇರಿದಂತೆ ಅನೇಕ ದಾಖಲೆಗಳನ್ನು ಸಂಗ್ರಹ ಮಾಡಿದ್ದಾರೆ. ಇವೆಲ್ಲವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

ಟಿಟಿಡಿಯಿಂದ ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು: ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸಡ್ಡು ಯತ್ನ!

‘ಆಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ’ ಎನ್ನುವುದು ನಿರ್ವಿವಾದ. ಟಿಟಿಡಿಯವರು ಸುಮ್ಮನೆ ಕ್ಯಾತೆ ತೆಗೆಯುತ್ತಿದ್ದಾರೆ. ಕೊನೆಗೂ ರಾಜ್ಯ ಸರ್ಕಾರ ಅಧಿಕೃತ ಘೋಷಣೆಗೆ ಮುಂದಾಗಿದ್ದು, ಫೆ. 23ರಂದು ಸಚಿವೆ ಶಶಿಕಲಾ ಜೊಲ್ಲೆ ಅವರು ವಿಶೇಷ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ ಅಂತ ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.  

ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ರಾಮಾಯಣದಲ್ಲಿನ ಅಷ್ಟುವಿವರಣೆಯೂ ಕಿಷ್ಕಿಂಧೆಯ ಭಾಗದಲ್ಲಿ ಇಂದಿಗೂ ಕಾಣುತ್ತೇವೆ. ಹೀಗಾಗಿ ‘ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ’ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು ಅಂತ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದ್ದಾರೆ.  
 

click me!