ಕಲಬುರಗಿ ದಾಹಕ್ಕೆ ಮುಕ್ತಿ: ನಾರಾಯಣಪುರ ಜಲಾಶಯದಿಂದ ಭೀಮೆಗೆ ಹರಿದ 1.20 TMC ಜೀವಜಲ

Published : Jul 22, 2026, 07:47 AM IST
Bhima River

ಸಾರಾಂಶ

ಕಲಬುರಗಿ ಜಿಲ್ಲೆಯ ಮಳೆ ಕೊರತೆ ಪೀಡಿತ ತಾಲೂಕುಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು, ಸರ್ಕಾರವು ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ 1.20 ಟಿ.ಎಂ.ಸಿ ನೀರು ಬಿಡುಗಡೆಗೆ ಆದೇಶಿಸಿದೆ. ಈ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಬಳಸಲು, ಪೊಲೀಸ್ ಭದ್ರತೆಯೊಂದಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಕಲಬುರಗಿ:  ಜಿಲ್ಲೆಯ ಅಫಜಲಪೂರ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಕೊರತೆಯಿಂದಾಗಿ ಕಳೆದ 3, 4 ತಿಂಗಳಿಂದ ತಲೆದೋರಿರುವ ತೀವ್ರ ಕುಡಿಯುವ ನೀರಿನ ಅಭಾವವನ್ನು ನಿವಾರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಭಾಗದ ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನಾರಾಯಣಪುರ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಲು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ದಿನಂಪ್ರತಿ 300 ಕ್ಯೂಸೆಕ್ಸ್ ನೀರು ಹರಿವು

ಕಲಬುರಗಿ ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮುಖ್ಯ ಅಭಿಯಂತರರ ತಾಂತ್ರಿಕ ಅಭಿಪ್ರಾಯದ ವರದಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ನಾರಾಯಣಪೂರ ಜಲಾಶಯದಿಂದ ಇಂಡಿ ಶಾಖಾ ಕಾಲುವೆಯ (IBC) ಎಸ್ಕೆಪ್ 34.10 ಕಿ.ಮೀ ಮತ್ತು 50.00 ಕಿ.ಮೀ ಮುಖಾಂತರ ಒಟ್ಟು 1.20 ಟಿ.ಎಂ.ಸಿ ನೀರನ್ನು ಭೀಮಾ ನದಿಗೆ ಹರಿಸಲಾಗುತ್ತಿದೆ. ಜುಲೈ 18 ರಿಂದ ಜಾರಿಗೆ ಬರುವಂತೆ ದಿನಂಪ್ರತಿ 300 ಕ್ಯೂಸೆಕ್‌ನಂತೆ ಈ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಬಿಡುಗಡೆ ಮಾಡಲಾದ ಈ ಕುಡಿಯುವ ನೀರು ಎಲ್ಲೂ ಪೋಲಾಗದಂತೆ ಮತ್ತು ಸುರಕ್ಷಿತವಾಗಿ ಗೊತ್ತುಪಡಿಸಿದ ಸ್ಥಳಕ್ಕೆ ತಲುಪುವಂತೆ ಸೂಕ್ತ ಮುಂಜಾಗೃತಾ ಮತ್ತು ಮೇಲುಸ್ತುವಾರಿ ಕ್ರಮಗಳನ್ನು ವಹಿಸಲು ಕಲಬುರಗಿ, ಯಾದಗಿರಿ ಹಾಗೂ ವಿಜಯಪೂರ ಜಿಲ್ಲಾಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಪೊಲೀಸ್ ಭದ್ರತೆ

ಕುಡಿಯುವ ನೀರಿಗಾಗಿ ಮೀಸಲಾಗಿಟ್ಟಿರುವ ಈ ನೀರನ್ನು ಕೃಷಿ ಅಥವಾ ಕೈಗಾರಿಕೆಗೆ ಇತರೆ ಯಾವುದೇ ಬೇರೆ ಉದ್ದೇಶಗಳಿಗೆ ಬಳಸದಂತೆ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ನೀರಿನ ಸುರಕ್ಷತೆ ಹಾಗೂ ಸುಗಮ ಹರಿವಿಗಾಗಿ ನದಿಯ ಉದ್ದಕ್ಕೂ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಕಲಬುರಗಿ, ಯಾದಗಿರಿ ಮತ್ತು ವಿಜಯಪೂರ ಜಿಲ್ಲೆಗಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪೂರ ಹಾಗೂ ಭೀಮರಾಯನಗುಡಿಯ ಮುಖ್ಯ ಅಭಿಯಂತರರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

ಶಾಸಕ ಅಜಯ್ ಧರ್ಮಸಿಂಗ್  ಧನ್ಯವಾದ

ನೀರು ಬಿಡುಗಡೆಯಾಗಿರುವುದರಿಂದ ಜೇವರ್ಗಿ, ಅಫಜಲಪುರ ಮತ್ತು ಯಡ್ರಾಮಿ ತಾಲೂಕಿನ ಹಾಗೂ ಈ ಭಾಗದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದ್ದು, ಜನತೆಯಲ್ಲಿ ನೆಮ್ಮದಿ ತಂದಿದೆ ಎಂದು ಡಾ. ಅಜಯ್‌ ಧರ್ಮಸಿಂಗ್‌ ಹೇಳಿದ್ದಾರೆ.

ಸಾರ್ವಜನಿಕರ ಈ ಪ್ರಮುಖ ಬೇಡಿಕೆಯನ್ನು ಈಡೇರಿಸಲು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ, ಕಲಬುರಗಿ ವಿಭಾಗದ ಆಯುಕ್ತರು, ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ನಾರಾಯಣಪುರ ಜಲಾಶಯದ ಮುಖ್ಯ ಇಂಜಿನಿಯರ್ ಅವರಿಗೆ ಶಾಸಕ ಅಜಯ್ ಧರ್ಮಸಿಂಗ್ ಅವರು ಧನ್ಯವಾದ ಸಮರ್ಪಿಸಿದ್ದಾರೆ.

PREV
Read more Articles on
click me!

Recommended Stories

2ನೇ ಏರ್‌ಪೋರ್ಟ್ ತುಮಕೂರು ಜಿಲ್ಲೆಯಲ್ಲಾಗಲಿ: 3 ತಾಲೂಕುಗಳಲ್ಲಿ ನಿರ್ಮಾಣಕ್ಕೆ ಪ್ರಸ್ತಾವನೆ
ವಿಕ್ರಮ್‌ 1 ಉಡಾವಣೆ: ಬೀದರ್‌ನ ಎಂಜಿನಿಯರಿಂಗ್‌ ವಿದ್ಯಾರ್ಥಿ ನರಸಿಂಗ್‌ ಶಿಂಧೆ ಸಾಧನೆ